ಪಂಚ ರಾಜ್ಯಗಳ ಚುನಾವಣೆ: ಫಲಿತಾಂಶ ನಿರ್ಧರಿಸಲಿರುವ ಅಂಶಗಳಿವು
ಬೆಂಗಳೂರು, ಜನವರಿ 19: ಅಪನಗದೀಕರಣ, ಆಮ್ ಆದ್ಮಿ ಪಕ್ಷದ ಪ್ರವೇಶ, ಇರೋಮ್ ಶರ್ಮಿಳಾ ಮತ್ತು ಆಡಳಿತ ವಿರೋಧಿ ಅಲೆಗಳು ಈ ಬಾರಿಯ ಪಂಚ ರಾಜ್ಯಗಳ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಲಿವೆ.
2017ರ ಆದಿಯಲ್ಲಿ ಉತ್ತರಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಮತ್ತು ಮಣಿಪುರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಫೆಬ್ರವರಿ 4 ರಿಂದ ಮತದಾನ ಆರಂಭವಾಗಿ ಮಾರ್ಚ್ 11ರಂದು ಎಲ್ಲಾ ರಾಜ್ಯಗಳ ಮತ ಎಣಿಕೆ ನಡೆಯಲಿದೆ. 5 ರಾಜ್ಯಗಳಿಂದ ಸುಮಾರು 16 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ. 690 ವಿಧಾನಸಭಾ ಸ್ಥಾನಗಳಿದ್ದು, ಉತ್ತರಪ್ರದೇಶ, ಪಂಜಾಬ್ ಹಾಗೂ ಉತ್ತರಾಖಂಡ್ ನ ಅಭ್ಯರ್ಥಿಗಳಿಗೆ 28 ಲಕ್ಷ ರೂಪಾಯಿ ಹಾಗೂ ಗೋವಾ, ಮಣಿಪುರದ ಅಭ್ಯರ್ಥಿಗಳಿಗೆ 20 ಲಕ್ಷ ರೂಪಾಯಿ ಖರ್ಚು ವೆಚ್ಚಕ್ಕೆ ಮಿತಿ ಹೇರಲಾಗಿದೆ.
ಭೌಗೋಳಿಕವಾಗಿ ಮತ್ತು ರಾಜಕೀಯವಾಗಿ ಪ್ರತಿ ರಾಜ್ಯಗಳು ಒಂದಕ್ಕಿಂತ ಒಂದು ಭಿನ್ನವಾಗಿದ್ದು ಈ ರಾಜ್ಯಗಳ ಫಲಿತಾಂಶ ರಾಷ್ಟ್ರ ರಾಜಕಾರಣಕ್ಕೆ ದಿಕ್ಸೂಚಿಯಾಗುವುದರಲ್ಲಿ ಸಂದೇಹವೇ ಇಲ್ಲ. ಈ ಹಿನ್ನಲೆಯಲ್ಲಿ ನಿಮಗಾಗಿ ಪ್ರತಿ ರಾಜ್ಯದ ವಿಶೇಷತೆಗಳು ಇಲ್ಲಿ ನೀಡುತ್ತಿದ್ದೇವೆ.
ಉತ್ತರ ಪ್ರದೇಶ
ಉತ್ತರ ಪ್ರದೇಶದ ವಿಚಾರಕ್ಕೆ ಬಂದಾಗ ಸಮಾಜವಾದಿ ಪಕ್ಷದ ಇಬ್ಭಾಗ ಮತ್ತು ಅಪನಗದೀಕರಣ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಸಮಾಜವಾದಿ ಪಕ್ಷದ ಇಬ್ಭಾಗದಿಂದ ಪಕ್ಷ ದೊಡ್ಡ ಮಟ್ಟಕ್ಕೆ ನಷ್ಟ ಅನುಭವಿಸಲಿದ್ದು, ತನ್ನ ಪ್ರಮುಖ ವೋಟ್ ಬ್ಯಾಂಕ್ ಗಳನ್ನು ಕಳೆದುಕೊಳ್ಳಲಿದೆ. ಶೇಕಡಾ 20 ರಷ್ಟಿರುವ ಮುಸ್ಲಿಂ ಮತದಾರರು ವಿರೋಧ ಪಕ್ಷ ಬಿಎಸ್ಪಿ ಕಡೆ ವಾಲುವ ಸಾಧ್ಯತೆ ಇದೆ.
ಪಂಜಾಬ್
ಮಾದಕ ವಸ್ತುಗಳು ಮತ್ತು ಆಡಳಿತ ವಿರೋಧಿ ಅಲೆಗಳೇ ಪಂಜಾಬ್ ಚುನಾವಣೆಯ ಪ್ರಮುಖ ವಿಷಯಗಳು. ಆಡಳಿತ ವಿರೋಧಿ ಅಲೆಯ ಪರಿಣಾಮದಿಂದಲೇ 2014ರ ಲೋಕಸಭೆ ಚುನಾವಣೆಯಲ್ಲಿ ಇಲ್ಲಿ ಎಎಪಿ ಭರ್ಜರಿ ಫಲಿತಾಂಶ ಕಂಡಿತ್ತು. ಈಗ ಮತ್ತೆ ಎಎಪಿ ವಿಧಾನಸಭೆ ಚುನಾವಣೆಯ ಅಖಾಡಕ್ಕೆ ಧುಮುಕಿದ್ದು ಬಿಜೆಪಿ, ಕಾಂಗ್ರೆಸ್ ಹಾಗೂ ಸ್ಥಳೀಯ ಪ್ರಭಾವಿ ಪಕ್ಷ ಅಕಾಲಿದಳಕ್ಕೆ ಬೆವರಿಳಿಸುತ್ತಿದೆ. ಇದರ ಜತೆ ರೈತರ ಆತ್ಮಹತ್ಯೆಯೂ ಚುನಾವಣಾ ಪ್ರಚಾರದಲ್ಲಿ ಪ್ರಮುಖವಾಗಿ ಚರ್ಚೆಯಾಗುತ್ತಿದೆ.
ಗೋವಾ
ಕೇಂದ್ರದ ಪ್ರಭಾವಿ ಮಂತ್ರಿ ಮನೋಹರ್ ಪರಿಕ್ಕರ್ ತವರು ರಾಜ್ಯ ಗೋವಾದಲ್ಲಿಯೂ ಎಎಪಿ ಮೊದಲ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದೆ. ಇತ್ತೀಚೆಗೆ ಇಲ್ಲಿನ ಆಡಳಿತರೂಡ ಬಿಜೆಪಿಯ ಮಾತೃ ಸಂಸ್ಥೆ ಆರ್.ಎಸ್.ಎಸ್ ನಾಯಕ ಸುಭಾಷ್ ವೆಲಿಂಕರ್ ಸಂಘಟನೆ ತೊರೆದಿದ್ದಾರೆ. ಇದು ಕೇಸರಿ ಪಕ್ಷಕ್ಕೆ ಹೊಡೆತ ನೀಡುವ ಸಾಧ್ಯತೆ ಇದೆ. ಇದರ ಜತೆಗೆ ಶಿವಸೇನೆ ಸ್ಥಳೀಯ ಎಂಜಿಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಗೆ ಧುಮುಕಿದ್ದು ಬಿಜೆಪಿಗೆ ಸಂಕಷ್ಟ ತರಲಿದೆ.
ಉತ್ತರಖಂಡ
ಉತ್ತರಖಂಡ ರಾಜಕೀಯ ಕಳೆದ 5 ವರ್ಷಗಳಲ್ಲಿ ಹಲವು ಏಳುಬೀಳುಗಳನ್ನು ಕಂಡಿದೆ. ಇಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಹರೀಶ್ ರಾವತ್ ವಿರುದ್ಧ ಸ್ವಪಕ್ಷದ ಶಾಸಕರು ಬಂಡಾಯ ಎದ್ದಿದ್ದರಿಂದ ರಾಷ್ಟ್ರಪತಿ ಆಡಳಿತವನ್ನು ಹೇರಲಾಗಿತ್ತು. ಆದರೆ ಎರಡು ತಿಂಗಳ ಬಳಿಕ ಸುಪ್ರಿಂ ಕೋರ್ಟ್ ಆದೇಶದ ಮೇರೆಗೆ ಕೇಂದ್ರದ ಬಿಜೆಪಿ ಸರಕಾರ ರಾಷ್ಟ್ರಪತಿ ಆಡಳಿತವನ್ನು ಹಿಂದಕ್ಕೆ ತೆಗೆದುಕೊಂಡಿತ್ತು. ರಾವತ್ ಇಲ್ಲಿ ಅನುಕಂಪದ ಮತ ಗಳಿಸುತ್ತಾರೋ ಎಂಬುದನ್ನು ಕಾದು ನೋಡಬೇಕಾಗಿದೆ.
ಮಣಿಪುರ
ಈಶಾನ್ಯ ರಾಜ್ಯ ಮಣಿಪುರದಲ್ಲಿಯೂ 15 ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ ಗೆ ಆಡಳಿತ ವಿರೋಧಿ ಅಲೆಯೇ ಮುಳ್ಳಾಗಿದೆ. ಇಲ್ಲಿ ಓಕ್ರಾಮ್ ಇಬೋಬಿ ಸಿಂಗ್ ಸರಕಾರ ಇತ್ತೀಚೆಗೆ 8 ಹೊಸ ಜಿಲ್ಲೆಗಳನ್ನು ರಚಿಸಿತ್ತು. ಇದನ್ನು ವಿರೋಧಿಸಿ ನಾಗಾ ಬಂಡುಕೋರರು ಹೆದ್ದಾರಿ ತಡೆದಿದ್ದು, ಅಗತ್ಯ ವಸ್ತುಗಳ ಪೂರೈಕೆ ವ್ಯತ್ಯದಿಂದಾಗಿ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಇದರ ಜತೆಗೆ ಇರೋಮ್ ಶರ್ಮಿಳಾ 16 ವರ್ಷಗಳ ಉಪವಾಸ ನಿಲ್ಲಿಸಿ ಚುನಾವಣಾ ಕಣಕ್ಕೆ ಇಳಿದಿದ್ದು ಯಾರಿಗೆ ಹೊಡೆತ ನೀಡುತ್ತಾರೆ ನೋಡಬೇಕಷ್ಟೆ.