ಚುನಾವಣೆ ಸೋಲು: ರಾಹುಲ್ ಗಾಂಧಿ ರಾಜಕೀಯ ಅವನತಿ
ಉತ್ತರಪ್ರದೇಶ ಹಾಗೂ ಉತ್ತರಾಖಂಡ್ ಕಳೆದುಕೊಂಡ ನಂತರ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ರಾಜಕೀಯ ಭವಿಷ್ಯ ಮಂಕಾಗುವ ಸೂಚನೆ ಸಿಕ್ಕಿದೆ. ಇದರ ಬೆನ್ನಲ್ಲೇ ಪ್ರಿಯಾಂಕಾ ಗಾಂಧಿಗೆ ಅಧಿಕಾರ ಸಿಗಲಿ ಎಂಬ ಕೂಗೆದ್ದಿದೆ.
ಬೆಂಗಳೂರು, ಮಾರ್ಚ್ 11: ಉತ್ತರಪ್ರದೇಶ, ಉತ್ತರಾಖಂಡ್, ಗೋವಾ, ಮಣಿಪುರ ಹಾಗೂ ಪಂಜಾಬ್ ಚುನಾವಣೆ ಫಲಿತಾಂಶ ಮಾರ್ಚ್ 11ರಂದು ಹೊರ ಬಂದಿದ್ದು, ದೇಶದ ಅತ್ಯಂತ ಪುರಾತನ ಪಕ್ಷ ಕಾಂಗ್ರೆಸ್ಸಿಗೆ ತೀವ್ರ ಆಘಾತ ತಂದಿದೆ.
ಮುಖ್ಯವಾಗಿ ಉತ್ತರಪ್ರದೇಶ ಹಾಗೂ ಉತ್ತರಾಖಂಡ್ ಕಳೆದುಕೊಂಡ ನಂತರ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ರಾಜಕೀಯ ಭವಿಷ್ಯ ಮಂಕಾಗುವ ಸೂಚನೆ ಸಿಕ್ಕಿದೆ. ಇದರ ಬೆನ್ನಲ್ಲೇ ಮತ್ತೊಮ್ಮೆ ರಾಹುಲ್ ಅವರ ಸೋದರಿ ಪ್ರಿಯಾಂಕಾ ಗಾಂಧಿಗೆ ಅಧಿಕಾರ ಸಿಗಲಿ ಎಂಬ ಕೂಗೆದ್ದಿದೆ.
2017ರ ಪಂಚರಾಜ್ಯ ಅಸೆಂಬ್ಲಿ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಜತೆ ಮಹಾಮೈತ್ರಿ ಸಾಧಿಸಿ ಏನೋ ಸಾಧಿಸುವೆ ಎಂದು ಹೊರಟ ರಾಹುಲ್ ಗಾಂಧಿ ಈಗ ಸಪ್ಪೆ ಮೋರೆ ಹಾಕಿಕೊಳ್ಳಬೇಕಿದೆ. ಉತ್ತರಾಖಂಡ್ ನಲ್ಲಿ ಹರೀಶ್ ರಾವತ್ ವಿರುದ್ಧ 18ಕ್ಕೂ ಅಧಿಕ ಶಾಸಕರು ಬಂಡಾಯವೆದ್ದರೂ ಸುಮ್ಮನಿದ್ದಿದ್ದು ರಾಹುಲ್ ಗಾಂಧಿಗೆ ಮುಳುವಾಗಲಿದೆ.
ಒಂದು ವೇಳೆ ಪಂಜಾಬಿನಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದರೂ ಅದು ಕ್ಯಾ. ಅಮರೀಂದರ್ ಸಿಂಗ್ ಅವರ ಗೆಲುವಾಗಲಿದೆ. ಗೋವಾದಲ್ಲಿ, ಮಣಿಪುರದಲ್ಲಿ ಸೋತರೆ ಅದಕ್ಕಿಂತ ಅಪಮಾನ ಬೇರೊಂದಿಲ್ಲ. ದೊಡ್ಡ ರಾಜ್ಯಗಳು ಹಾಗಿರಲಿ ಅಧಿಕಾರ ಹೊಂದಿದ್ದ ಸಣ್ಣ ರಾಜ್ಯವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಸಮರ್ಥವಲ್ಲ ಎಂಬುದನ್ನು ಸಾರಿ ಹೇಳಿದ್ದಂತಾಗುತ್ತದೆ. ರಾಹುಲ್ ಗಾಂಧಿ ಅವರ ರಾಜಕೀಯ ತಂತ್ರಗಾರಿಕೆ ಮುಳುವಾಗಲು ಅನೇಕ ಕಾರಣಗಳಿದ್ದು, ಉಪಾಧ್ಯಕ್ಷ ಸ್ಥಾನವನ್ನು ತೊರೆಯಲು ಒತ್ತಡ ಏಕೆ ಬಂದಿದೆ? ಮುಂದೆ ಓದಿ...
ರಾಹುಲ್ ತಂತ್ರಗಾರಿಕೆಗೆ ಹಿನ್ನಡೆ
ಸಮಾಜವಾದಿ ಪಕ್ಷದಲ್ಲಿ ಆಂತರಿಕ ಕಚ್ಚಾಟ, ಅರಾಜಕತೆ ತಲೆದೋರಿದ್ದಾಗ ಮೈತ್ರಿ ಮಾಡಿಕೊಳ್ಳಲು ಮುಂದಾದ ರಾಹುಲ್ ಗಾಂಧಿಗೆ ಹಿರಿಯ ನಾಯಕರ ಬೆಂಬಲ ಸಿಗಲಿಲ್ಲ. ರಾಜಕೀಯವಾಗಿ ಇನ್ನೂ ಅನನುಭವಿಯಾದ ಅಖಿಲೇಶ್ ಜತೆ ಚುನಾವಣೆಗೂ ಮುಂಚಿತವಾಗಿ ಕೈಜೋಡಿಸುವ ಮೂಲಕ ಕಾಂಗ್ರೆಸ್ ನಲ್ಲಿ ಭಿನ್ನಮತಕ್ಕೆ ರಾಹುಲ್ ನಾಂದಿ ಹಾಡಿದರು. ಎಸ್ಪಿ ಕಾಂಗ್ರೆಸ್ ಮೈತ್ರಿ ಕ್ಲಿಕ್ ಆಗಲೇ ಇಲ್ಲ.
ರಾಹುಲ್ ಪ್ರಚಾರ ಟುಸ್
ರಾಹುಲ್ ಗಾಂಧಿ ಅವರ ಪ್ರಚಾರ ತಂತ್ರಗಾರಿಕೆ ಈ ಬಾರಿಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸಂಪೂರ್ಣ ಕೈಗೊಟ್ಟಿತು. ಅತ್ತ ಅಖಿಲೇಶ್ ಸರ್ಕಾರ ಯೋಜನೆಗಳ ಪ್ರಚಾರ ನಡೆಸಿದ್ದರೂ ಸಾಕಿತ್ತು. ಆದರೆ, ಪ್ರಧಾನಿ ಮೋದಿ ಅವರ ವಿರುದ್ಧ ವೈಯಕ್ತಿಕ ನಿಂದನೆ, ಜನಪರ ಯೋಜನೆಗಳ ವಿರುದ್ಧ ಹೇಳಿಕೆಗಳು ಮುಳುವಾಯಿತು. ಸಂಘಟಿತ ನಾಯಕನಾಗಿ ಹೊರ ಬರಲು ರಾಹುಲ್ ಗೆ ಸಾಧ್ಯವಾಗಲೇ ಇಲ್ಲ.
ಪಕ್ಷಕ್ಕೆ ಹಾನಿಯಾದರೂ ರಾಹುಲ್ ಸೇಫ್
2012 ಉತ್ತರಪ್ರದೇಶ ಸೋಲಿನ ನಂತರ ಹತ್ತು ಹಲವು ಚುನಾವಣಾ ಸೋಲಿನ ನಂತರವೂ ರಾಹುಲ್ ಗಾಂಧಿ ಅವರು ಎಐಸಿಸಿ ಉಪಾಧ್ಯಕ್ಷರಾಗೆ ಮುಂದುವರಿದಿದ್ದಾರೆ. ಹೆಚ್ಚೆಂದರೆ ಪಕ್ಷದಲ್ಲಿದ್ದ ಹಿರಿಯ ಮುಖಗಳಿಗೆ ಕೊಕ್ ನೀಡಿದ್ದಾರೆ ಅಷ್ಟೆ. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲೂ ಕಾಂಗ್ರೆಸ್ ಸೋಲು ಕಾಣುತ್ತಿರುವುದು ಕಾಂಗ್ರೆಸ್ ಕಾರ್ಯಕರ್ತರಿಗೆ, ನಿಷ್ಠಾವಂತರಿಗೆ ಇರುಸು ಮುರುಸು ಉಂಟು ಮಾಡಿದೆ. ಸೋನಿಯಾ ಗಾಂಧಿ ಅವರ ಅನಾರೋಗ್ಯ, ಕಳೆಗುಂದಿರುವ ರಾಹುಲ್ ವರ್ಚಸ್ಸು, ತಂತ್ರಗಾರಿಕೆ ಕಾಂಗ್ರೆಸ್ ಅವನತಿಗೂ ಕಾರಣವಾಗಿದೆ.
ಪ್ರಿಯಾಂಕಾಗೆ ಅಧಿಕಾರ ನೀಡಿ
ಹಿಂದಿನ ಚುನಾವಣೆ ಫಲಿತಾಂಶ ಮತ್ತು ಜನಪ್ರಿಯತೆಯ ದೃಷ್ಟಿಕೋನದಿಂದ ನೋಡಿದರೆ, ಪ್ರಿಯಾಂಕಾ ಗಾಂಧಿ ವಧ್ರಾ ಅವರು ರಾಹುಲ್ ಗಾಂಧಿ ಅವರಿಗಿಂತ ಸಾವಿರ ಪಾಲು ಉತ್ತಮ ಎಂಬ ಮಾತು ಕೂಡ ತೇಲಿ ಬರುತ್ತಿದೆ. ಹಿಂದೆ ಕೂಡ ರಾಹುಲ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಹಲವಾರು ಚುನಾವಣೆಗಳನ್ನು ಹೀನಾಯವಾಗಿ ಸೋತಿದೆ. 2019ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಪ್ರಿಯಾಂಕಾ ವಧ್ರಾ ಅವರು ರಾಯ್ ಬರೇಲಿಯಿಂದ ಸ್ಪರ್ಧಿಸುವುದು ಹೆಚ್ಚೂಕಡಿಮೆ ಖಚಿತವಾಗಿದೆ.