ರಾಜಸ್ಥಾನ ಕಾಂಗ್ರೆಸ್ಸಿಗರಿಗೆ ಚುರುಕು ಮುಟ್ಟಿಸಿದ ರಾಜೇ
ಜೈಪುರ, ಅ.21: ಮಹಾರಾಷ್ಟ್ರ ಹಾಗೂ ಹರ್ಯಾಣದಲ್ಲಿ ಬಿಜೆಪಿ ಭರ್ಜರಿ ಜಯ ದಾಖಲಿಸಿದ ಬೆನ್ನಲ್ಲೇ ರಾಜಸ್ಥಾನದಲ್ಲಿ ಕಾಂಗ್ರೆಸ್ ನಾಯಕರಿಗೆ ಸಿಎಂ ವಸುಂಧರಾ ರಾಜೇ ಚುರುಕು ಮುಟ್ಟಿಸಿದ್ದಾರೆ. 108 ಆಂಬುಲೆನ್ಸ್ ಹಗರಣವನ್ನು ಸಿಬಿಐ ತನಿಖೆಗೆ ರಾಜೇ ಶಿಫಾರಸು ಮಾಡಿದ್ದಾರೆ. ಮಾಜಿ ಸಿಎಂ ಅಶೋಕ್ ಗೆಹ್ಲೋಟ್, ಸಚಿನ್ ಪೈಲಟ್ ಸೇರಿದಂತೆ ಪ್ರಮುಖ ಮುಖಂಡರಿಗೆ ಇದರಿಂದ ನಡುಕ ಹುಟ್ಟಿದೆ.
ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ, ವಯಲಾರ್ ರವಿ ಅವರ ಪುತ್ರ ರವಿ ಕೃಷ್ಣ, ಮಾಜಿ ಆರೋಗ್ಯ ಸಚಿವ ದುರು ಮಿಯಾನ್ ಸೇರಿದಂತೆ ಅನೇಕ ಘಟಾನುಘಟಿಗಳ ಹೆಸರು ಈ ಹಗರಣದಲ್ಲಿ ಕೇಳಿ ಬಂದಿದೆ. [ರಾಜಸ್ಥಾನದ ಶಾಲೆ ಕುರಿತು ಕನ್ನಡಿಗನ ಟಿಪ್ಪಣಿ]
ಎಲ್ಲಾ ಆರೋಪಿಗಳ ಮೇಲೆ ವಂಚನೆ, ಸಂಚು ಮುಂತಾದ ಆರೋಪಗಳನ್ನು ಹೊರೆಸಿ ರಾಜಸ್ಥಾನ ಪೊಲೀಸರು ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಂತರ ಸಿಐಡಿ ತನಿಖೆ ಕೂಡಾ ನಡೆಸಲಾಗಿದೆ. ಸಿಐಡಿ ತನ್ನ ತನಿಖಾ ವರದಿಯನ್ನು ಮುಖ್ಯಮಂತ್ರಿ ವಸುಂಧರಾ ರಾಜೇ ಅವರಿಗೆ ನೀಡಿದ್ದು ಸಿಬಿಐ ತನಿಖೆಗೆ ಶಿಫಾರಸು ಮಾಡಿದೆ.
ಏನಿದು ಪ್ರಕರಣ: 2009ರಲ್ಲಿ ರವಿಕೃಷ್ಣ ಒಡೆತನದ Ziqitza Health Care Limited ಸಂಸ್ಥೆಗೆ 108 ಆಂಬುಲೆನ್ಸ್ ನಿರ್ವಹಣೆ ಟೆಂಡರ್ ಸಿಕ್ಕಿತ್ತು. ರಾಜಸ್ಥಾನವಲ್ಲದೆ ಬಿಹಾರ, ಪಂಜಾಬ್ ನಲ್ಲೂ ರವಿಕೃಷ್ಣ ಅವರ ಸಂಸ್ಥೆಯಿಂದ 108 ಆಂಬುಲೆನ್ಸ್ ಸಂಚರಿಸುತ್ತಿತ್ತು. [ಬಂಗಲೆ ನಿರಾಕರಿಸಿದ ಬಿಜೆಪಿ ಸಿಎಂ]
ಸಾರ್ವಜನಿಕರಿಗೆ ತುರ್ತುಸೇವೆ ಒದಗಿಸುವ ಸರ್ಕಾರಿ ಹಾಗೂ ಖಾಸಗಿ ಸಹ ಮಾಲೀಕತ್ವ(PPP)ದ ಈ ಯೋಜನೆ ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ರವಿಕೃಷ್ಣ ಅವರ ಸಂಸ್ಥೆಗೆ ಕೋಟಿಗಟ್ಟಲೆ ಹಣ ಮಂಜೂರಾಗಿದ್ದು, ಇದೆಲ್ಲವೂ ಸರಿಯಾಗಿ ಉಪಯೋಗವಾಗುತ್ತಿಲ್ಲ ಯಾರದೋ ಜೋಳಿಗೆ ತುಂಬುತ್ತಿದೆ ಎಂದು 2012ರಲ್ಲಿ ಬಿಜೆಪಿ ಆರೋಪ ಮಾಡಿತ್ತು.
ಅಶೋಕ್ ಗೆಹ್ಲೋಟ್ ಅವರ ಸರ್ಕಾರದ ಆಡಿಟ್ ವರದಿಯಲ್ಲೂ ಈ ಭ್ರಷ್ಟಾಚಾರ ಬಯಲಾಗಿತ್ತು. ಸುಮಾರು 2.56 ಕೋಟಿ ರು ವ್ಯತ್ಯಯ ಕಂಡು ಬಂದಿತ್ತು. ಅದರೆ, ಸರ್ಕಾರ ಯಾವುದೇ ಕ್ರಮ ಜರುಗಿಸಿರಲಿಲ್ಲ. [ಜೈಪುರ, ಭೋಪಾಲ್ ನಲ್ಲಿ ಕೇಸರಿ ರಂಗು ಚೆಲ್ಲಿದೆ]
ಸಚಿನ್ ಪೈಲಟ್: ಕಾಂಗ್ರೆಸ್ ಕಾರ್ಯಕರ್ತರು ಮುಖಂಡರನ್ನು ಗುರಿಯನ್ನಾಗಿಸಿಕೊಂಡು ತನಿಖೆ ನಡೆಸುವುದನ್ನು ಸರ್ಕಾರಿ ಏಜೆನ್ಸಿಗಳು ಆರಂಭಿಸಿವೆ. ಬಿಜೆಪಿ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿವೆ.
ಅಶೋಕ್ ಗೆಹ್ಲೋಟ್: ಈ ಪ್ರಕರಣದಲ್ಲಿ ಮೊದಲ ಎಫ್ ಐಆರ್ ಹಾಕಿದಾಗಿನಿಂದ ಇದೊಂದು ರಾಜಕೀಯ ಪ್ರೇರಿತ ಕೇಸ್ ಎಂಬುದು ಎಲ್ಲರಿಗೂ ತಿಳಿದಿದೆ. ಜನರಿಗೆ ಸತ್ಯ ಏನೆಂದು ತಿಳಿಯಲಿದೆ.