ಆಂಧ್ರ, ಒಡಿಶಾ, ಕರಾವಳಿಗೆ ಚಂಡಮಾರುತ ಅಪ್ಪಳಿಸುವ ಭೀತಿ
ವಿಶಾಖಪಟ್ನಂ, ಅಕ್ಟೋಬರ್, 27: ಪೂರ್ವ ಬಂಗಾಳಕೊಲ್ಲಿಯಲ್ಲಿ ಎದ್ದಿರುವ 'ಕಯಾಂತ್' ಚಂಡಮಾರುತ ವಿಶಾಖಪಟ್ಟಣದ ಆಗ್ನೇಯ ಭಾಗದಲ್ಲಿ ಕೇಂದ್ರೀಕೃತವಾಗಿದ್ದು, ಗಂಟೆಗೆ 14ಕೀ.ಮೀ ವೇಗದಲ್ಲಿ ಉತ್ತರಾಂಧ್ರ, ಓಡಿಶಾ ಕರಾವಳೆ ಭಾಗಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಪೂರ್ವ ಮಧ್ಯ ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಬಿರುಗಾಳಿ ತುಫಾನ್ ಆಗಿ ಬದಲಾಗಿದೆ ಎಂದು ಇಲಾಖೆ ಎಚ್ಚರಿಸಿದೆ. ಈ ಚಂಡಮಾರುತಕ್ಕೆ 'ಕಯಾಂತ್' ಎಂದು ಹೆಸರಿಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಈ ಚಂಡಮಾರುತ ಪಶ್ಚಿಮ ನೈರುತ್ಯ ದಿಸೆಯಲ್ಲಿ ಸಂಚರಿಸುತ್ತಿದೆ. ಬುಧವಾರ ರಾತ್ರಿ(ಅ.26) ಹೊತ್ತಿಗೆ ಪೋರ್ಟ್ ಬ್ಲೆಯರ್ ತೀರದ ಉತ್ತರ ವಾಯುವ್ಯ ಭಾಗವಾಗಿ 610ಕೀ.ಮೀ ದೂರದಲ್ಲಿ ಹಾಗೂ ವಿಶಾಖಪಟ್ಟಣದ ಪೂರ್ವಕ್ಕೆ 780ಕೀ.ಮೀ. ದೂರದಲ್ಲಿ ಕೇಂದ್ರೀಕೃತವಾಗಿದೆ ಎಂದು ಹೇಳಿದರು.
ಈ ಚಂಡಮಾರುತ ಪ್ರಭಾವಕ್ಕೆ ಅಕ್ಟೋಬರ್ 27 ಮತ್ತು 28ರಂದು ಉಭಯ ತೆಲುಗು ರಾಜ್ಯಗಳಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಚಂಡಮಾರುತ ಪೂರ್ವ ಬಂಗಾಳಕೊಲ್ಲಿಯಿಂದ ಪಶ್ಚಿಮಾಭಿಮುಖವಾಗಿ ಗುರುವಾರ (ಅ.27)ದಂದು ಪಶ್ಚಿಮ ಬಂಗಾಳಕೊಲ್ಲಿ ಪ್ರವೇಶಿಸಲಿದ್ದು, ಮೀನುಗಾರರನ್ನು ಸಮುದ್ರಕ್ಕೆ ಇಳಿಯದಂತೆ ಇಲಾಖೆ ಎಚ್ಚರಿಸಿದೆ.
ತುಫಾನ್ ತೀವ್ರತೆ ಹೆಚ್ಚಾದಲ್ಲಿ ನಷ್ಟದ ಸಂಭವ ಹೆಚ್ಚಾಗುವ ಸಾಧ್ಯತೆ ಇದ್ದು, ಸ್ಥಳೀಯರ ರಕ್ಷಣಾ ಕಾರ್ಯಚರಣೆಗೆ ಕೂಡಲೇ ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಎರಡು ವರ್ಷಗಲ ಹುಡ್ ಹುಡ್ ತುಫಾನ್ ನಿಂದಾಗಿ ವಿಶಾಖಪಟ್ನಂ ಹೆಚ್ಚು ಹಾನಿಗೊಳಗಾಗಿತ್ತು. ಈ ಕಯಾಂತ್ ತುಫಾನ್ ಕೂಡ ತೀವ್ರವಾದರೆ ಅದೇ ರೀತಿಯ ಪ್ರಭಾವ ಇರುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.