ಮೋದಿಗೆ ಸದ್ಯದಲ್ಲೇ ಜನ ಪಾಠ ಕಲಿಸಲಿದ್ದಾರೆ: ಅಣ್ಣಾ ಹಜಾರೆ
ರಾಲೇಗನ್ ಸಿದ್ದಿ (ಅಹಮದ್ ನಗರ, ಮಹಾರಾಷ್ಟ್ರ), ಜ 29: ಅಪರೂಪಕ್ಕೆ ಎನ್ನುವಂತೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಗಾಂಧೀವಾದಿ, ಸಾಮಾಜಿಕ ಕಾರ್ಯಕರ್ತ ಅಣ್ಣಾಹಜಾರೆ, ಪ್ರಧಾನಿ ನರೇಂದ್ರ ಮೋದಿ ವಿರುದ್ದ ಹರಿಹಾಯ್ದಿದ್ದಾರೆ.
ಬುಧವಾರ (ಜ 28) ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಹಜಾರೆ, ಕಪ್ಪುಹಣವನ್ನು ವಾಪಸ್ ತರುತ್ತೇನೆ ಎಂದು ಚುನಾವಣೆಯ ವೇಳೆ ಜನರಿಗೆ ಸುಳ್ಳು ಆಶ್ವಾಸನೆ ನೀಡಿ ಅಧಿಕಾರಕ್ಕೆ ಏರಿದ ಪ್ರಧಾನಿ ನರೇಂದ್ರ ಮೋದಿಗೆ ಜನರು ಪಾಠ ಕಲಿಸುವ ದಿನ ದೂರವಿಲ್ಲ, ಅವರೂಬ್ಬರು ಕಪಟಿ ಎಂದು ಕಿಡಿಕಾರಿದ್ದಾರೆ.
ಚುನಾವಣೆಯ ವೇಳೆ ಕಪ್ಪುಹಣವನ್ನು ನೂರು ದಿನದೊಳಗೆ ವಾಪಸ್ ತರುತ್ತೇನೆಂದು ಮೋದಿ ಭರವಸೆ ನೀಡಿ ಮತಗಳಿಸಿ, ಅಧಿಕಾರಕ್ಕೇರಿದರು. ಈಗ ಅದರ ಬಗ್ಗೆ ಸೊಲ್ಲೆತ್ತುತ್ತಿಲ್ಲ ಎಂದು ಹಜಾರೆ ಟೀಕಿಸಿದ್ದಾರೆ. (ಜೈಲಿಗೆ ಹೋಗುವುದು ಕೆಲವರಿಗೆ ಫ್ಯಾಷನ್)
ಕಪ್ಪುಹಣದಿಂದ ಬರುವ ದುಡ್ಡಿನಲ್ಲಿ ಪ್ರತೀ ಭಾರತೀಯನ ಬ್ಯಾಂಕ್ ಖಾತೆಗೆ ಹದಿನೈದು ಲಕ್ಷ ರೂಪಾಯಿ ಜಮಾ ಮಾಡುತ್ತೇವೆಂದು ಹೇಳಿದ್ದರು. ಅಧಿಕಾರಕ್ಕೆ ಬಂದು ನೂರು ದಿನದ ಮೇಲಾದರೂ 15 ಲಕ್ಷ ಬಿಟ್ಟು ಹದಿನೈದು ರೂಪಾಯಿ ಕೂಡಾ ಅಕೌಂಟಿಗೆ ಜಮಾ ಆಗಿಲ್ಲ ಎಂದು ಅಣ್ಣಾ ಹಜಾರೆ ಲೇವಡಿ ಮಾಡಿದ್ದಾರೆ.
ಕಪ್ಪುಹಣ ಎನ್ನುವ ಪೆಡಂಭೂತವನ್ನು ನೂರು ದಿನದಲ್ಲಿ ವಾಪಸ್ ತರುವುದು ಸಾಧ್ಯವಿಲ್ಲ ಎನ್ನುವುದು ನಮಗೆ ಅರಿತಿದೆ. ಆದರೆ ಅಧಿಕಾರಕ್ಕಾಗಿ ವಸ್ತುಸ್ಥಿತಿಯನ್ನು ಮರೆಮಾಚಿ ಮೋದಿ ಜನರಿಗೆ ಮೋಸ ಮಾಡಿದ್ದಾರೆಂದು ಅಣ್ಣಾಹಜಾರೆ ಹೇಳಿದ್ದಾರೆ.
ಅಣ್ಣಾಹಜಾರೆ ಟೀಕಾ ಪ್ರಹಾರ ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..
ಕಾಂಗ್ರೆಸ್ಸಿಗೆ ಆದ ಪಾಠ ಬಿಜೆಪಿಗೂ ಆಗಲಿದೆ
ಜನರಿಗೆ ನರೇಂದ್ರ ಮೋದಿಯ ಸುಳ್ಳು ಭರವಸೆಯ ಅರಿವಾಗುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಜನರು ಕಲಿಸಿದ ಪಾಠವನ್ನು ನೋಡಿಯಾದರೂ ಬಿಜೆಪಿಗೆ ಅರ್ಥವಾಗ ಬೇಕಿತ್ತು. ಅಧಿಕಾರಕ್ಕೆ ಬರಬೇಕೆನ್ನುವ ಏಕಮೇವ ಉದ್ದೇಶದಿಂದ ಮೋದಿ ಅವರ ಸುಳ್ಳಿನ ಭರವಸೆ ಮುಂದಿನ ದಿನಗಳಲ್ಲಿ ಮೋದಿ ಸರಕಾರಕ್ಕೆ ಮುಳ್ಳಾಗಿ ಪರಿಣಮಿಸದೇ ಇರದು.
ಕೇಜ್ರಿ, ಬೇಡಿ ಬಗ್ಗೆ ಕಾಮೆಂಟ್ ಮಾಡಲ್ಲ
ಅರವಿಂದ್ ಕೇಜ್ರಿವಾಲ್, ಕಿರಣ್ ಬೇಡಿ ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿಯಲ್ಲಿರುವ ಬಗ್ಗೆ ನಾನು ಕಾಮೆಂಟ್ ಮಾಡುವುದಿಲ್ಲ. ಅದಕ್ಕಾಗಿ ನನಗೆ ಸಿಟ್ಟೂ ಇಲ್ಲ. ದೇಶದ ಹಿತಾದೃಷ್ಟಿಯ ಮುಂದೆ ಕೇಜ್ರಿವಾಲ್, ಬೇಡಿ ನನಗೆ ಮುಖ್ಯವಲ್ಲ. ಇಲ್ಲಿ ಕೇಜ್ರಿ, ಬೇಡಿಗಿಂತ ಮುಖ್ಯವಾಗಿರುವುದು ಅವರು ನೀಡಿರುವ ಭರವಸೆಯನ್ನು ಈಡೇರಿಸುತ್ತಾರೋ ಎನ್ನುವುದು. ಯಾರೇ ಇರಲಿ ಅಧಿಕಾರಕ್ಕಾಗಿ ಸುಳ್ಳು ಭರವಸೆ ನೀಡಬಾರದು ಎನ್ನುವುದು ನನ್ನ ಉದ್ದೇಶ.
ರಾಜಕೀಯ ಪಕ್ಷದ ಮೇಲೆ ನಂಬಿಕೆಯಿಲ್ಲ
ಯಾವುದೇ ಪಕ್ಷದಿಂದ ದೇಶಕ್ಕೆ ಒಳ್ಳೆದಾಗುತ್ತದೆ ಎನ್ನುವ ಆಶಾಭಾವನೆಯನ್ನು ನಾನು ಹೊಂದಿಲ್ಲ, ಇದು ಸಾಧ್ಯವಿಲ್ಲ ಕೂಡಾ. ಜನಸಾಮಾನ್ಯರನ್ನು, ರಾಜಕೀಯ ಪಕ್ಷವನ್ನು ಹೊರತಾಗಿ ಪ್ರತಿನಿಧಿಸುವ 543 ಲೋಕಸಭಾ ಸದಸ್ಯರು ಆಯ್ಕೆಯಾದರೆ ಮಾತ್ರ ದೇಶಕ್ಕೆ ಒಳ್ಳೆ ಭವಿಷ್ಯ ಸಾಧ್ಯ - ಅಣ್ಣಾ ಹಜಾರೆ.
ಮೋದಿ ಇನ್ನಾದರೂ ಎಚ್ಚೆತ್ತುಕೊಳ್ಳಲಿ
ಜನರಿಗೆ ಇನ್ನೂ ಮೋದಿ ಮೇಲೆ ಅಲ್ವಸ್ವಲ್ಪ ಭರವಸೆ ಉಳಿದಿದೆ ಎನ್ನುವುದಕ್ಕೆ ವಿಧಾನಸಭಾ ಚುನಾವಣೆಗಳ ಫಲಿಂತಾಶವೇ ಸಾಕ್ಷಿ. ದೇಶದ ಅಭಿವೃದ್ದಿ, ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಸರಕಾರವನ್ನು ಮೋದಿ ನಡೆಸಲಿ. ಇಲ್ಲದಿದ್ದರೇ, ಬಿಜೆಪಿ ಮತ್ತು ಮೋದಿಗೆ ಜನರು ಪಾಠ ಕಲಿಸುತ್ತಾರೆ - ಅಣ್ಣಾ ಹಜಾರೆ.
ಜನತೆ ಬಯಸಿದ ಹಾಗೆ ಮೋದಿ ಸರಕಾರವಿಲ್ಲ
ಚುನಾವಣೆಯ ಸಮಯದಲ್ಲಿ ನರೇಂದ್ರ ಮೋದಿಯ ಮೇಲೆ ಜನರಿಗೆ ಭಾರೀ ಭರವಸೆಯಿತ್ತು. ಅದು ಕಪ್ಪುಹಣ, ಹಣದುಬ್ಬರ, ಭ್ರಷ್ಟಾಚಾರ ತಡೆಯಲು ಮೋದಿ ಕಾರ್ಯೋನ್ಮುಖರಾಗುತ್ತಾರೆ ಎನ್ನುವ ನಂಬಿಕೆಯಿತ್ತು. ಜನರು ಬಯಸಿದ್ದ ವೇಗದಲ್ಲಿ ಕೇಂದ್ರ ಸರಕಾರ ಕೆಲಸ ಮಾಡುತ್ತಿಲ್ಲ ಎಂದು ಅಣ್ಣಾ ಹಜಾರೆ ಬೇಸರ ವ್ಯಕ್ತ ಪಡಿಸಿದ್ದಾರೆ.