ಮಹಾರಾಷ್ಟ್ರದಲ್ಲಿ ಸಾಮಾಜಿಕ ಬಹಿಷ್ಕಾರವೂ ಇನ್ಮುಂದೆ ಕ್ರಿಮಿನಲ್ ಅಪರಾಧ
ಮುಂಬೈ, ಜುಲೈ 14: ಸಾಮಾಜಿಕ ಬಹಿಷ್ಕಾರವನ್ನೂ ಕ್ರಿಮಿನಲ್ ಅಪರಾಧ ಎಂದು ಮಹಾರಾಷ್ಟ್ರ ಸರಕಾರ ಪರಿಗಣಿಸಿದೆ. ಇನ್ನು ಮುಂದೆ ಮಹಾರಾಷ್ಟ್ರದಲ್ಲಿ ಜಾತಿ ಪಂಚಾಯತ್ ಗಳು ಸಾಮಾಜಿಕ ಬಹಿಷ್ಕಾರ ಹಾಕಿದರೆ 7 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 5 ಲಕ್ಷ ದಂಡ ತೆರಬೇಕಾಗುತ್ತದೆ.
ದೇಶದಲ್ಲೇ ಸಾಮಾಜಿಕ ಬಹಿಷ್ಕಾರವನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಿದ ಮೊದಲ ರಾಜ್ಯ ಎಂಬ ಹಿರಿಮೆಗೆ ಮಹಾರಾಷ್ಟ್ರ ಪಾತ್ರವಾಗಿದೆ.
ಈ ಮಸೂದೆ ರಾಜ್ಯ ವಿಧಾನಸಭೆಯಲ್ಲಿ ಏಪ್ರಿಲ್ 3, 2016ರಂದು ಪಾಸಾಗಿತ್ತು. ನಂತರ ರಾಷ್ಟ್ರಪತಿಗಳ ಸಹಿಗೆ ಕಳುಹಿಸಿ ಕೊಡಲಾಗಿತ್ತು. ಕಳೆದ ತಿಂಗಳು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮಸೂದೆಗೆ ಸಹಿ ಹಾಕುವುದರೊಂದಿಗೆ ಕಾನೂನಾಗಿ ಬದಲಾಗಿತ್ತು. ಜುಲೈ ಮೂರರಂದು ರಾಜ್ಯ ಗೆಜೆಟ್ ನಲ್ಲಿಇದನ್ನು ಪ್ರಕಟಣೆ ಮಾಡುವುದರೊಂದಿಗೆ 'ಮಹಾರಾಷ್ಟ್ರ ಸಾಮಾಜಿಕ ಬಹಿಷ್ಕಾರ ಪ್ರತಿಬಂಧಕ ಕಾಯ್ದೆ 2015' ಜಾರಿಗೆ ಬಂದಿದೆ.
ಇನ್ನು ಶೀಘ್ರ ನ್ಯಾಯದಾನಕ್ಕಾಗಿ 6 ತಿಂಗಳ ಒಳಗೆ ವಿಚಾರಣೆ ಮುಗಿಸಲೂ ಕಾನೂನಿನಲ್ಲಿ ಅವಕಾಶ ನೀಡಲಾಗಿದೆ. ಕಾನೂನಿನಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡಲೂ ಅವಕಾಶವಿದೆ.
ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ಜನರಿಗೆ ಬಹಿಷ್ಕಾರ ಹಾಕುವುದು, ಹಬ್ಬ, ಶಾಲೆ, ಕ್ಲಬ್ ಹೌಸ್, ರ್ಯಾಲಿ, ಆರೋಗ್ಯ ಸೇವೆಗಳನ್ನು ನಿರಾಕರಿಸುವುದನ್ನೂ ಈ ಕಾನೂನಿನಡಿ ತರಲಾಗಿದೆ. ಇನ್ನು ಜಾತಿ ಪಂಜಾಯತ್ ಗಳನ್ನೇ ಆರೋಪಿಗಳನ್ನಾಗಿಸಲೂ ಕಾನೂನಿಲ್ಲಿ ಅವಕಾಶವಿದೆ.