ಉತ್ತರಪ್ರದೇಶದ ರಾಹುಲ್ ಗಾಂಧಿ ಸಾರ್ವಜನಿಕ ಸಭೆಯಲ್ಲಿ ನಡೆದಿದ್ದೇನು?
ಲಕ್ನೋ, ಸೆ 7: ಮುಂದಿನ ವರ್ಷದ ಆದಿಯಲ್ಲಿ ನಡೆಯಲಿರುವ ಉತ್ತರ ಪ್ರದೇಶ ಚುನಾವಣೆಗೆ ಇತರ ಪಕ್ಷಗಳಿಗಿಂತ ಮುನ್ನವೇ ಪ್ರಚಾರಕ್ಕಿಳಿದಿರುವ ಕಾಂಗ್ರೆಸ್ ಪಕ್ಷ ಸಾರ್ವಜನಿಕ ಸಭೆಯೊಂದರಲ್ಲಿ ತೀವ್ರ ಮುಜುಗರಕ್ಕೀಡಾದಂತಹ ಘಟನೆ ನಡೆದಿದೆ.
ರಾಜಧಾನಿ ಲಕ್ನೋದಿಂದ 310 ಕಿಲೋಮೀಟರ್ ದೂರದಲ್ಲಿರುವ ದಿಯೋರಿಯಾ ನಗರದಲ್ಲಿ ಕಾಂಗ್ರೆಸ್ ಪಕ್ಷ ಮಂಗಳವಾರ (ಸೆ 6) ರೈತರೊಂದಿಗೆ ಸಂವಾದ 'ಖಾಟ್ ಪೆ ಚರ್ಚಾ' (ಮಂಚದಲ್ಲಿ ಕೂತು ಮಾತುಕತೆ) ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಿತ್ತು. (ಉತ್ತರ ಪ್ರದೇಶ ಅಸೆಂಬ್ಲಿ ಚುನಾವಣೆ ಸಮೀಕ್ಷೆ, ಬಿಜೆಪಿಗೆ ಮುನ್ನಡೆ)
ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಹಿರಿಯ ಮುಖಂಡ ಗುಲಾಂ ನಬಿ ಆಜಾದ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮಕ್ಕಾಗಿ ಎರಡು ಸಾವಿರ ಹಗ್ಗದ ಮಂಚಗಳನ್ನು ಆಯೋಜಿಸಲಾಗಿತ್ತು,
ಕಾರ್ಯಕ್ರಮಕ್ಕೆ ಬಂದಿದ್ದ ರೈತರು ರಾಹುಲ್ ಗಾಂಧಿ ಭಾಷಣ ಕೇಳುವ ಬದಲು, ಮಂಚ ಎತ್ತಿಕೊಂಡು ಹೋಗಲು ಕಿತ್ತಾಟ ನಡೆಸಿದ್ದರಿಂದ, ರಾಹುಲ್ ಗಾಂಧಿ ತಮ್ಮ ಭಾಷಣವನ್ನು ಅರ್ಧದಲ್ಲೇ ಮೊಟಕುಗೊಳಿಸ ಬೇಕಾಯಿತು.
ರಾಜ್ಯದೆಲ್ಲಡೆ ಸಂಚರಿಸುವ 2,500 ಕಿಲೋಮೀಟರ್ ಕ್ರಮಿಸುವ 'ಬಡೀ ಯಾತ್ರಾ' ಗೆ ಚಾಲನೆ ನೀಡಿ, ರಾಹುಲ್ ಗಾಂಧಿ ರೈತರೊಂದಿಗೆ ಖಾಟ್ ಪೆ ಚರ್ಚಾ ಸಂವಾದ ನಡೆಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ರಾಹುಲ್ ಕಾರ್ಯಕ್ರಮಕ್ಕೆ ಬಂದವರು, ಮಂಚಕ್ಕಾಗಿ ಮಾರಾಮಾರಿ ನಡೆಸಿದರು, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..
ಪ್ರಶಾಂತ್ ಕಿಶೋರ್
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆಗಿದ್ದ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್, ನರೇಂದ್ರ ಮೋದಿಯ ಜನಪ್ರಿಯ 'ಚಾಯ್ ಪೆ ಚರ್ಚಾ' ಕಾರ್ಯಕ್ರಮದ ರೂವಾರಿಯಾಗಿದ್ದರು. ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದೊಂದಿಗಿರುವ ಪ್ರಶಾಂತ್ ಕಿಶೋರ್, ಖಾಟ್ ಪೆ ಚರ್ಚಾ ಕಾರ್ಯಕ್ರಮದ ಮಾಸ್ಟರ್ ಮೈಂಡ್ ಆಗಿದ್ದಾರೆ.
ಮಂಚ ಎತ್ತಿಕೊಂಡು ಪರಾರಿ
ಕಾರ್ಯಕ್ರಮಕ್ಕೆ ಬಂದಿದ್ದ ಸುಮಾರು ಮೂರು ಸಾವಿರಕ್ಕೂ ಹೆಚ್ಚು ರೈತರು, ರಾಹುಲ್ ಗಾಂಧಿ ಜೊತೆ ಸಂವಾದಕ್ಕೆ ಉತ್ಸುಕತೆ ತೋರುವುದಿರಲಿ, ರಾಹುಲ್ ನಿಂತಿದ್ದ ವೇದಿಕೆಯತ್ತಲೂ ಮುಖ ಮಾಡದೇ ಮಂಚ ಎತ್ತಿಕೊಂಡು ಹೋಗುವುದರಲ್ಲೇ ಬ್ಯೂಸಿಯಾಗಿದ್ದರು.
ಜಿಲ್ಲಾಧ್ಯಕ್ಷರ ಮನವಿ
ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಮತ್ತು ಸಂಘಟಕರು 'ರಾಹುಲ್ ಗಾಂಧೀಜಿ ನಿಮ್ಮೊಂದಿಗೆ ಮಾತನಾಡಲಿದ್ದಾರೆ, ಎಲ್ಲರೂ ಸಹಕರಿಸಿ'ಎನ್ನವ ಮನವಿಗೂ ಕ್ಯಾರೇ ಮಾಡದ ರೈತರು ಮಂಚ ಸಿಗದೇ ಇದ್ದಾಗ ಹೊಡೆದಾಟಕ್ಕಿಳಿದರು.
ರಾಹುಲ್ ಅಸಹಾಯಕತೆ
ಹಾಗೂ ಹೀಗೂ, ಭಾಷಣ ಆರಂಭಿಸಿದ ರಾಹುಲ್ ಗಾಂಧಿ, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವುದಾಗಿ ಆಶ್ವಾಸನೆ ನೀಡಿದರು. ಆದರೆ ಇದ್ಯಾವುದೂ ರೈತರ ಕಿವಿಗೆ ಬೀಳಲಿಲ್ಲ. ಮಂಚಕ್ಕಾಗಿ ಕಿತ್ತಾಟ ತಾರಕಕ್ಕೇರಿದಾಗ, ರಾಹುಲ್ ಗಾಂಧಿ ತಮ್ಮ ಭಾಷಣವನ್ನು ಮೊಟಕುಗೊಳಿಸಿದರು.
ಮಂಚಕ್ಕಾಗಿಯೇ ಬಂದಿದ್ದರು
ರೈತರು ರಾಹುಲ್ ಗಾಂಧಿ ಭಾಷಣ ಕೇಳಲು ಬಂದಿಲ್ಲ, ಅವರು ಬಂದಿದ್ದು ಮಂಚಕ್ಕಾಗಿ. ಯಾಕೆಂದರೆ, ರೈತರಿಗೆ ರಾಹುಲ್ ಗಾಂಧಿ ಯಾರೆಂದೇ ಗೊತ್ತಿಲ್ಲ, ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ಲೆಕ್ಕಕ್ಕೇ ಇಲ್ಲ ಎಂದು ಕಾರ್ಯಕ್ರಮದ ಬಗ್ಗೆ ಬಿಜೆಪಿ ಸ್ಥಳೀಯ ಮುಖಂಡರು ಲೇವಡಿ ಮಾಡಿದ್ದಾರೆ.