ಚಳಿಗಾಲದ ಅಧಿವೇಶನ: ಮೋದಿ ವಿರುದ್ದ ವಿಪಕ್ಷಗಳ ಭಾರೀ ರಣತಂತ್ರ
ಸಂಸತ್ತಿನ ಚಳಿಗಾಲದ ಅಧಿವೇಶನ ಬುಧವಾರದಿಂದ (ನ 16) ಆರಂಭವಾಗಲಿದೆ. ಮೋದಿ ಸರಕಾರದ ವಿರುದ್ದ ತಿರುಗಿಬೀಳಲು ಎಲ್ಲಾ ಪಕ್ಷಗಳು ಒಗ್ಗಟ್ಟಿನ ಮಂತ್ರ ಜಪಿಸುತ್ತಿದೆ. ಹಾಗಾಗಿ, ಅಧಿವೇಶನ ಬಹುತೇಕ ಗಲಾಟೆ, ಸಭಾತ್ಯಾಗಕ್ಕೆ ಸೀಮಿತವಾಗುವ ಸಾಧ್ಯತೆ ಹೆಚ್ಚು.
ನವದೆಹಲಿ, ನ 15: ಸಂಸತ್ತಿನ ಚಳಿಗಾಲದ ಅಧಿವೇಶನ ಬುಧವಾರದಿಂದ (ನ 16) ಆರಂಭವಾಗಲಿದೆ. ಮೋದಿ ಸರಕಾರದ ವಿರುದ್ದ ತಿರುಗಿಬೀಳಲು ಎಲ್ಲಾ ಪಕ್ಷಗಳು ಒಗ್ಗಟ್ಟಿನ ಮಂತ್ರ ಜಪಿಸುತ್ತಿದೆ. ಹಾಗಾಗಿ, ಅಧಿವೇಶನ ಬಹುತೇಕ ಗಲಾಟೆ, ಸಭಾತ್ಯಾಗಕ್ಕೆ ಸೀಮಿತವಾಗುವ ಸಾಧ್ಯತೆ ದಟ್ಟವಾಗಿದೆ.
ಒಂದು ತಿಂಗಳುಗಳ ಕಾಲ ನಡೆಯುವ ಅಧಿವೇಶನದಲ್ಲಿ ಮೋದಿ ಸರಕಾರ ಹಲವು ಬಿಲ್ಲುಗಳನ್ನು ಅನುಮೋದನೆ ಪಡೆಯುವ ತಯಾರಿಯಲ್ಲಿದೆ. ಸ್ಪೀಕರ್ ಸುಮಿತ್ರಾ ಮಹಾಜನ್ ಸರ್ವ ಪಕ್ಷಗಳ ಸಭೆಯನ್ನು ಕರೆದು ಸದನದ ಅಮೂಲ್ಯ ಸಮಯ ಹಾಳಾಗದಂತೆ ನೋಡಿಕೊಳ್ಳಲು ಎಲ್ಲಾ ಪಕ್ಷದವರಲ್ಲೂ ಮನವಿ ಮಾಡಿದ್ದಾರೆ. (3 ನಿಮಿಷಕ್ಕಾಗಿ 25 ದಿನ ಹಾಳು ಮಾಡಿದ ಕಾಂಗ್ರೆಸ್)
ಕಾಂಗ್ರೆಸ್, ಬಿಎಸ್ಪಿ, ಎಸ್ಪಿ ಮತ್ತು ಟಿಎಂಸಿ ಪಕ್ಷದ ಮುಖಂಡರು ಹಲವು ಸುತ್ತಿನ ಮಾತುಕತೆ ನಡೆಸಿದ್ದು, ಮೋದಿ ಸರಕಾರದ ವಿರುದ್ದ ತಿರುಗಿಬೀಳಲು ರಣತಂತ್ರ ರೂಪಿಸುವತ್ತ ಕಾರ್ಯೋನ್ಮುಖರಾಗಿದ್ದಾರೆ.
ದೇಶದ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿ ಮೋದಿ ಸರಕಾರ ಸಂಪೂರ್ಣ ವಿಫಲವಾಗಿದೆ. ಸರಕಾರದ ವಿರುದ್ದ ಕಠಿಣ ನಿಲುವು ತಾಳದೇ ನಮಗೆ ಬೇರೆ ದಾರಿಯಿಲ್ಲ ಎಂದು ಕಾಂಗ್ರೆಸ್ ಮುಖಂಡ ಅಜಯ್ ಕುಮಾರ್ ಹೇಳುವ ಮೂಲಕ, ಸದನ ಸಸೂತ್ರವಾಗಿ ನಡೆಯುವ ಸಾಧ್ಯತೆ ಕಮ್ಮಿ ಎನ್ನುವ ಸೂಚನೆಯನ್ನು ನೀಡಿದ್ದಾರೆ.
ಸೋನಿಯಾ ಗಾಂಧಿ ನೇತೃತ್ವದಲ್ಲಿ ಯುಪಿಎ ಮೈತ್ರಿಕೂಟದ ಸಂಸದರು ಸಭೆ ಸೇರಿ ಪ್ಲಾನ್ ಹಣೆದಿದ್ದಾರೆ. ಇತ್ತ ಪಿಎಂ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮುಖಂಡತ್ವದಲ್ಲಿ ಎನ್ಡಿಎ ಮೈತ್ರಿಕೂಟದ ಸಂಸದರು ಮಂಗಳವಾರ (ನ 15) ಸಭೆ ಸೇರಲಿದ್ದಾರೆ.
ವಿರೋಧ ಪಕ್ಷಗಳು ಐದು ಪ್ರಮುಖ ವಿಚಾರದಲ್ಲಿ ಗದ್ದಲ ಎಬ್ಬಿಸಬಹುದು, ಮುಂದೆ ಓದಿ...
ರೈತರ ಸಮಸ್ಯೆ
ದೇಶದಲ್ಲಿ ರೈತರ ಸಮಸ್ಯೆಗಳಿಗೆ ಸರಕಾರ ಸ್ಪಂದಿಸುತ್ತಿಲ್ಲ. ಬ್ಯಾಂಕುಗಳ ಸಾಲ ಮನ್ನಾ ಮಾಡುವ ವಿಚಾರದಲ್ಲಿ ರಾಜ್ಯ ಸರಕಾರಗಳ ಕೋರಿಕೆಗೆ ಕೇಂದ್ರ ಸರಕಾರ ಉತ್ತರ ನೀಡುತ್ತಿಲ್ಲ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ, ಕೇಂದ್ರ ಸರಕಾರ ಕೈಕಟ್ಟಿ ಕೂತಿದೆ ಎಂದು ವಿರೋಧ ಪಕ್ಷಗಳು ಸರಕಾರಕ್ಕೆ ಚಾಟಿ ಬೀಸಬಹುದು.
ನೋಟು ನಿಷೇಧ
ಐನೂರು ಮತ್ತು ಸಾವಿರ ರೂಪಾಯಿ ನೋಟು ನಿಷೇಧ ವಿಚಾರ ಸಂಸತ್ತಿನಲ್ಲಿ ಭಾರೀ ಕೋಲಾಹಲ ಉಂಟುಮಾಡಲಿದೆ. ತೃಣಮೂಲ ಕಾಂಗ್ರೆಸ್, ಎಸ್ಪಿ ಮತ್ತು ಆಮ್ ಆದ್ಮಿ ಪಕ್ಷ, ಸರಕಾರ ನೋಟು ನಿಷೇಧವನ್ನು ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸುತ್ತಿದ್ದರೆ, ಜನಸಾಮಾನ್ಯರಿಗಾಗುತ್ತಿರುವ ತೊಂದರೆ ಮುಂದಿಟ್ಟುಕೊಂಡು ಯುಪಿಎ ಪಕ್ಷಗಳು ಸರಕಾರದ ವಿರುದ್ದ ಮುಗಿಬೀಳಲು ಸಜ್ಜಾಗಿವೆ.
ಕದನ ವಿರಾಮ ಉಲ್ಲಂಘನೆ
ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘಿಸಿರುವುದರಿಂದ ಮುನ್ನೂರಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದಾರೆ, ಸಾರ್ವಜನಿಕರಿಗೂ ತೊಂದರೆ ಅನುಭವಿಸುತ್ತಿದ್ದಾರೆ. ಸರಕಾರ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಎನ್ನುವುದು ವಿರೋಧ ಪಕ್ಷಗಳಿಗೆ ಸರಕಾರದ ವಿರುದ್ದ ತಿರುಗಿಬೀಳಲು ಇರುವ ಮತ್ತೊಂದು ಅಸ್ತ್ರ.
ಒನ್ ರ್ಯಾಂಕ್ ಒನ್ ಪೆನ್ಸನ್
ಒನ್ ರ್ಯಾಂಕ್ ಒನ್ ಪೆನ್ಸನ್ (OROP) ವಿಚಾರವೂ ಸದನದಲ್ಲಿ ಭಾರೀ ಸದ್ದು ಮಾಡಲಿದೆ. ನಿವೃತ್ತ ಯೋಧರೊಬ್ಬರು ಆತ್ಮಹತ್ಯೆ ಮಾಡಿಕೊಂಡ ನಂತರ ಈ ವಿಚಾರ ದೇಶವ್ಯಾಪಿ ಚರ್ಚೆಗೆ ನಾಂದಿ ಹಾಡಿದ್ದು, ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿರೋಧ ಪಕ್ಷಗಳಿಗಿರುವ ಮತ್ತೊಂದು ಪ್ರಮುಖ ಅಸ್ತ್ರ ಇದಾಗಿದೆ.
ಸರ್ಜಿಕಲ್ ದಾಳಿ
ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಿದ್ದ ಸರ್ಜಿಕಲ್ ದಾಳಿ ವಿಚಾರವೂ ಸಂಸತ್ತಿನಲ್ಲಿ ಗದ್ದಲಕ್ಕೆ ಕಾರಣವಾಗಬಹುದು. ದಾಳಿಯ ಬಗ್ಗೆ ಹೆಚ್ಚಿನ ಮಾಹಿತಿ ನೀಡುವಂತೆ ಸರಕಾರವನ್ನು ವಿರೋಧ ಪಕ್ಷಗಳು ಒತ್ತಾಯಿಸುವ ಸಾಧ್ಯತೆಯಿದೆ.