ಭೂಕಂಪ, ನೇಪಾಳದ ನಂತರದ ಸರದಿ ಭಾರತ: ತಜ್ಞರ ಎಚ್ಚರಿಕೆ
ಶನಿವಾರ (ಏ 25) ಮಧ್ಯಾಹ್ನ ನೇಪಾಳದಲ್ಲಿ ಸಂಭವಿಸಿದ ಭೂತಾಯಿಯ ರುದ್ರನರ್ತನಕ್ಕೆ ಮೂರು ಸಾವಿರಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಹಾಗೆಯೇ ಭಾರತದ ಕೆಲವು ಭಾಗದಲ್ಲೂ ಭೂಮಿ ಕಂಪಿಸಿ ಐವತ್ತಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ.
ನೇಪಾಳದಲ್ಲಿ ಶನಿವಾರ ಸಂಭವಿಸಿದ 7.9 ತೀವ್ರತೆಯ ಭೂಕಂಪನ ಅಥವಾ ಅದಕ್ಕಿಂತ ಇನ್ನೂ ತೀವ್ರತೆಯ ಭೂಕಂಪ ಮುಂದಿನ ದಿನದಲ್ಲಿ ಉತ್ತರ ಭಾರತದಲ್ಲೂ ಸಂಭವಿಸಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಭಾರೀ ತೀವ್ರತೆಯ ಭೂಕಂಪ ಉತ್ತರ ಭಾರತದಲ್ಲಿ ಪ್ರಮುಖವಾಗಿ ಕಾಶ್ಮೀರ, ಹಿಮಾಚಲ ಪ್ರದೇಶ, ಪಂಜಾಬ್ ಮತ್ತು ಉತ್ತರಾಖಂಡ ರಾಜ್ಯದ ಭಾಗಗಳಲ್ಲಿ ಸಂಭವಿಸಲಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ .
ಈ ಭೂಕಂಪ ಐವತ್ತು ವರ್ಷದೊಳಗೆ ಯಾವ ಕ್ಷಣದಲ್ಲಾದರೂ ಸಂಭವಿಸಬಹುದು ಎಂದು ಅಹಮದಾಬಾದ್ ಮೂಲದ Seismological Research ಸಂಸ್ಥೆಯ ವಿಜ್ಞಾನಿ ಬಿ ಕೆ ರಸ್ತೋಗಿ ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿ ಐಎಎನ್ಎಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಭೂಮಿಯೊಳಗಿರುವ ಪದರಗಳ ಚಲನಶೀಲ ಸ್ಥಿತಿಯ ಒತ್ತಡ ಹೆಚ್ಚಾದಾಗ ಇಂತಹ ಘಟನೆ ಸಂಭವಿಸುತ್ತದೆ. ಎರಡು ಸಾವಿರ ಕಿಲೋಮೀಟರಿನಷ್ಟು ವ್ಯಾಪಿಸಿರುವ ಹಿಮಾಲಯದ ತಪ್ಪಲಿನಲ್ಲಿ ಭೂಕಂಪದ ತೀವ್ರತೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ರಸ್ತೋಗಿ ಹೇಳಿದ್ದಾರೆ.
ನೇಪಾಳ ಭೂಕಂಪ ಬಗ್ಗೆ ಬೆಂಗಳೂರು ವಿಜ್ಞಾನಿ ಮುನ್ನೆಚ್ಚರಿಕೆ ನೀಡಿದ್ದರು. ಭೂಕಂಪ ಪರಿಹಾರದ ವಿಚಾರದಲ್ಲಿ ಮೋದಿಯನ್ನು ಹೊಗಳಿದ ಬಿಹಾರದ ಸಿಎಂ ನಿತೀಶ್ ಕುಮಾರ್. ಮುಂದೆ ಓದಿ..
ಹಿಮಾಲಯ ಪ್ರದೇಶದಲ್ಲಿ ಹೆಚ್ಚು
ಅತಿ ಎತ್ತರದ ಪ್ರದೇಶವಾಗಿರುವುದರಿಂದ ಹಿಮಾಲಯ ಪ್ರದೇಶದಲ್ಲಿ ಭೂಕಂಪ ಆಗುವ ಸಾಧ್ಯತೆ ಹೆಚ್ಚು. ಪ್ರಪಂಚದಲ್ಲಿ ಸಂಭವಿಸುವ ಮೂರು ಅತಿಹೆಚ್ಚು ಭೂಕಂಪವಾಗುವ ಪ್ರದೇಶಗಳಲ್ಲಿ ಹಿಮಾಲಯ ಕೂಡಾ ಒಂದು.
ಪೆಸಿಫಿಕ್ ಸಾಗರ
ಪ್ರಪಂಚದಲ್ಲಿ ಒಟ್ಟಾರೆ ಅತಿಹೆಚ್ಚು ಭೂಕಂಪಿಸುವ ಸ್ಥಳವೆಂದರೆ ಅದು ಪೆಸಿಫಿಕ್ ಸಾಗರ ಪ್ರದೇಶಗಳಲ್ಲಿ. ಶೇ. 80ರಷ್ಟು ಭೂಕಂಪ ಈ ಭಾಗದಿಂದ ವರದಿಯಾಗುತ್ತದೆ ಎಂದು ರಸ್ತೋಗಿ ಹೇಳಿದ್ದಾರೆ.
ಮಿಲಿಯನ್ ವರ್ಷಗಳ ಹಿಂದೆ ಭಾರತ
ನಲವತ್ತು ಮಿಲಿಯನ್ ವರ್ಷಗಳ ಹಿಂದೆ ಭಾರತ ಹಿಮಾಲಯ ಪ್ರದೇಶದ ದಕ್ಷಿಣಕ್ಕೆ ಸುಮಾರು ಐದು ಸಾವಿರ ಕಿಲೋಮೀಟರಿನಷ್ಟು ದೂರದಲ್ಲಿತ್ತು. ಭಾರತ ಮತ್ತು ಏಷ್ಯಾ ಖಂಡದ ಇತರ ದೇಶಗಳು ಬೆಳೆಯುತ್ತಾ, ಬೆಳೆಯುತ್ತಾ ಹಿಮಾಲಯಕ್ಕೆ ಬಹಳ ಹತ್ತಿರವಾಗಿದೆ. ಹೀಗಾಗಿ ಭೂಕಂಪದ ಅನುಭವ ಹೆಚ್ಚಾಗುವ ಸಾಧ್ಯತೆಯಿದೆ - ರಸ್ತೋಗಿ.
ಬೆಂಗಳೂರು ವಿಜ್ಞಾನಿಗಳ ಮುನ್ನೆಚ್ಚರಿಕೆ
ಬಹಳ ವರ್ಷಗಳಿಂದ ಭೂಗರ್ಭದಲ್ಲಿ ಮುಖಾಮುಖಿಯ ಒತ್ತಡ ಇಲ್ಲದೇ ಇದ್ದದ್ದರಿಂದ ಭೂಕಂಪವಾಗುವ ಸಾಧ್ಯತೆಯಿದೆ ಎಂದು ಎರಡು ತಿಂಗಳ ಹಿಂದೆಯೇ ಬೆಂಗಳೂರಿನ ನೆಹರೂ ಸೈಂಟಿಫಿಕ್ ಸೆಂಟರಿನ ರಾಜೇಂದ್ರನ್, ಕೋಲಾರದ ಚಿನ್ನದ ಗಣಿಯ ಬಿಜು ಜಾನ್, ಬೆಂಗಳೂರು ಐಎಎಸ್ಸಿಯ ಕುಶಾಲ ರಾಜೇಂದ್ರನ್ ಎಚ್ಚರಿಸಿದ್ದರು.
ಮೋದಿ ಹೊಗಳಿದ ನಿತೀಶ್
ರಾಜ್ಯದಲ್ಲಿ ಭೂಕಂಪ ಸಂಭವಿಸಿದ ಕೆಲವೇ ನಿಮಿಷಗಳಲ್ಲಿ ಕೇಂದ್ರ ಸರಕಾರ ಅತ್ಯುತ್ತಮವಾಗಿ ಸ್ಪಂದಿಸಿತು. ಪ್ರಧಾನಿ ಮೋದಿ, ಗೃಹ ಸಚಿವ ರಾಜನಾಥ್ ದೂರವಾಣಿ ಮೂಲಕ ನನ್ನನ್ನು ಸಂಪರ್ಕಿಸಿ ಕೇಂದ್ರದ ಯಾವುದೇ ನೆರವು ನೀಡಲು ಸಿದ್ದ ಎಂದರು. ಇದು ಅತಿದೊಡ್ಡ ಸಂಗತಿ, ರಾಜ್ಯ ಸಂಕಷ್ಟ ಎದುರಿಸುತ್ತಿದ್ದಾಗ ಮೋದಿ ಸರಕಾರ ಅತ್ಯಂತ ವೇಗವಾಗಿ ರಾಜ್ಯದ ಸಹಾಯಕ್ಕೆ ನಿಂತಿತ್ತು. ರಾಜ್ಯದ ಪರವಾಗಿ ನಾವು ಮೋದಿಗೆ ಧನ್ಯವಾದ ಸಲ್ಲಿಸುತ್ತೇನೆ - ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್.