ಅಸಲಿಗೆ ಅಯೋಧ್ಯೆಯಲ್ಲಿ ಕರಸೇವಕರನ್ನು ಪ್ರಚೋದಿಸಿದ್ದು ಅಡ್ವಾಣಿಯಲ್ಲ, ನಾನು
ಬಾಬ್ರಿ ಮಸೀದಿ ಧ್ವಂಸದ ವಿದ್ಯಮಾನದಲ್ಲಿ ಕರಸೇವಕರನ್ನು ಪ್ರಚೋದಿಸಿದ್ದು ನಾವೇ ಹೊರತು, ಅಡ್ವಾಣಿ ಅಥವಾ ಮುರುಳಿ ಮನೋಹರ್ ಜೋಶಿ ಅಲ್ಲ ಎಂದು ಮಾಜಿ ಬಿಜೆಪಿ ಸಂಸದರೊಬ್ಬರು ಹೇಳಿಕೆ ನೀಡಿದ್ದಾರೆ.
ನವದೆಹಲಿ, ಏ 22: ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸುಪ್ರೀಂಕೋರ್ಟ್ ಮರುಜೀವ ನೀಡಿದ ಹಿನ್ನಲೆಯಲ್ಲಿ, ಅಂದಿನ ಘಟನೆಯನ್ನು ಮೆಲುಕು ಹಾಕಿಕೊಂಡಿರುವ ಮಾಜಿ ಬಿಜೆಪಿ ಸಂಸದರೊಬ್ಬರು, ಕರಸೇವಕರನ್ನು ಪ್ರಚೋದಿಸಿದ್ದು ಅಡ್ವಾಣಿಯಲ್ಲ ಬದಲಿಗೆ ನಾನು ಎಂದಿದ್ದಾರೆ.
ಮಾಜಿ ಬಿಜೆಪಿ ಸಂಸದ ರಾಂ ವಿಲಾಸ್ ವೇದಾಂತಿ ಈ ಬಗ್ಗೆ ಮಾತನಾಡುತ್ತಾ, ಅಂದು ಕರಸೇವಕರನ್ನು ಜೈಶ್ರೀರಾಮ್ ಎಂದು ಪ್ರಚೋದಿಸಿದ್ದು ನಾನೇ ಹೊರತು, ಅಡ್ವಾಣಿಯಲ್ಲ. ವಿವಾದಿತ ಪೂಜಾಕೇಂದ್ರ ಧ್ವಂಸ ಮಾಡಲು ನಾನು ಮತ್ತು ಪರಿವಾರದ ಇತರ ಮುಖಂಡರೇ ಕರಸೇವಕರನ್ನು ಹುರಿದುಂಬಿಸಿದ್ದು ಎಂದು ರಾಂ ವಿಲಾಸ್ ಹೇಳಿದ್ದಾರೆ. (ಅಡ್ವಾಣಿ ವಿರುದ್ದ ಮೋದಿ ಕುತಂತ್ರದ ಫಲ)
ಶುಕ್ರವಾರ ( ಏ21) ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ವೇದಾಂತಿ, ಹೇಗಾದರೂ ಮಾಡಿ ಅದನ್ನು ಕೆಡವಿ ಎಂದು ಕರಸೇವಕರನ್ನು ಪ್ರಚೋದಿಸುತ್ತಾ ಹುರಿದುಂಬಿಸುತ್ತಿದ್ದೆವು. ಈ ವಿಷಯಕ್ಕೆ ಸಂಬಂಧಿಸಿದಂತೆ ನಾನು ಗಲ್ಲುಶಿಕ್ಷೆ ಅನುಭವಿಸಲೂ ಸಿದ್ದನಾಗಿದ್ದೇನೆಂದು ವೇದಾಂತಿ ಹೇಳಿದ್ದಾರೆ.
ಬಾಬ್ರಿ ಮಸೀದಿ ಧ್ವಂಸ ವಿಚಾರದಲ್ಲಿ ಅಡ್ವಾಣಿಯಾಗಲಿ, ಮುರುಳಿ ಮನೋಹರ ಜೋಶಿಯ ಪಾತ್ರ ಇದರಲ್ಲಿಲ್ಲ. ನಾನು, ಅಶೋಕ್ ಸಿಂಘಾಲ್, ಮಹಾಂತ ಆದಿತ್ಯನಾಥ್ ಮುಂತಾದವರು ಕರಸೇವಕರನ್ನು ಪ್ರಚೋದಿಸಿದ್ದು ಎಂದು ವೇದಾಂತಿ ಹೇಳಿದ್ದಾರೆ.
25ವರ್ಷಗಳ ಹಿಂದಿನ ಘಟನೆಯ ಬಗ್ಗೆ ಮಾತನಾಡುತ್ತಿದ್ದ ವೇದಾಂತಿ, ಡಿಸೆಂಬರ್ 6, 1992ರಂದು ಅಡ್ವಾಣಿ ಮತ್ತು ಜೋಶಿ ಕರಸೇವಕರನ್ನು ಮಸೀದಿಯಿಂದ ಕೆಳಗಿಳಿಯಿರಿ ಎಂದು ಕೇಳಿಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ.
ಕೇಸಿಗೆ ಕೋರ್ಟ್ ಮರುಜೀವ ನೀಡಿದ ಹಿನ್ನಲೆಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸುತ್ತಿದ್ದ ಅಡ್ವಾಣಿಯವರ ಮಾಜಿ ಆಪ್ತ ಸುಧೀಂದ್ರ ಕುಲ್ಕರ್ಣಿ, ಬಿಜೆಪಿ ಮುಖಂಡರು ಬಾಬ್ರಿ ಮಸೀದಿ ಧ್ವಂಸ ಮಾಡಬೇಡಿ ಎಂದು ಕರಸೇವಕರ ಮನವೊಲಿಸುತ್ತಿದ್ದರು. ಅಡ್ವಾಣಿಗೂ ಬಾಬ್ರಿ ಮಸೀದಿ ಧ್ವಂಸಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಕುಲ್ಕರ್ಣಿ ಹೇಳಿದ್ದಾರೆ.