ಸರಕಾರಿ ಜಾಹೀರಾತಿನಲ್ಲಿ ಮಾತ್ರ 'ಅಚ್ಛೇ ದಿನ್’- ಉದ್ಧವ್ ಠಾಕ್ರೆ
ಮುಂಬೈ, ಜುಲೈ 23: ಶಿವಸೇನೆ ಮತ್ತೆ ಬಿಜೆಪಿ ಮೇಲೆ ಮುಗಿಬಿದ್ದಿದೆ. ತನ್ನ ಮುಖವಾಣಿ ಸಾಮ್ನಾಗೆ ಸಂದರ್ಶನ ನೀಡಿರುವ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಬಿಜೆಪಿ ಮೇಲೆ ಮುಗಿಬಿದ್ದಿದ್ದಾರೆ. ಬಿಜೆಪಿಯ 'ಅಚ್ಛೇ ದಿನ್' ಜಾಹೀರಾತುಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಅಲ್ಲದೆ, "ಜಿಎಸ್ಟಿ ಮತ್ತು ಅಪನಗದೀಕರಣ ಸೇರಿದಂತೆ ಕಳೆದ ಮೂರು ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮೇಲೆ ನಂಬಿಕೆ ಕಳೆದುಕೊಂಡಿದ್ದೇನೆ," ಎಂದು ಹೇಳಿದ್ದಾರೆ.
ತಮ್ಮ 57 ಹುಟ್ಟುಹಬ್ಬದ ಹಿನ್ನಲೆಯಲ್ಲಿ ಶಿವಸೇನೆ ಮುಖವಾಣಿ ಸಾಮ್ನಾ ಕಾರ್ಯಕಾರಿ ಸಂಪಾದಕ ಸಂಜಯ್ ರಾವತ್ ಗೆ ನೀಡಿದ ಸಂದರ್ಶನಲ್ಲಿ ಅವರು ಈ ಮಾತುಗಳನ್ನು ಹೇಳಿದ್ದಾರೆ.
ಇನ್ನು ಜಿಎಅಸ್ಟಿ ಬಗ್ಗೆ ಮಾತನಾಡಿರುವ ಅವರು, "ಇದು ಸಂಪೂರ್ಣ ಅವ್ಯವಸ್ಥಿತವಾಗಿದೆ. ನಾವು ಈ ಬಗ್ಗೆ ಸುಮ್ಮನೆ ಕೂರಲ್ಲ; ಧ್ವನಿ ಎತ್ತಲಿದ್ದೇವೆ. ಸಾಮಾನ್ಯ ಜನರಿಗೆ ಜಿಎಸ್ಟಿ ಹೇಗೆ ತೊಂದರೆ ಕೊಡಲಿದೆ ಎಂದು ಮೊದಲು ಗುರುತಿಸಿದವರು ನಾವು. ಇದನ್ನು ನಾವು ಒಪ್ಪಿಕೊಳ್ಳಬೇಕಾ ಅಥವಾ ನಮ್ಮ ಮೇಲೆ ಹಲ್ಲೆ ಮಾಡುತ್ತೀರೋ ಎಂದು ಅವರೇ ಹೇಳಬೇಕು. ಗುಜರಾತಿನಲ್ಲಿ ಸಣ್ಣ ವರ್ತಕರು ಜಿಎಸ್ಟಿ ವಿರೋಧಿಸಿ ಬೀದಿಗೆ ಬಂದಿದ್ದಾರೆ. ಅವರ ಮೇಲೆ ಅಮಾನವೀಯ ಹಲ್ಲೆ ಮಾಡಲಾಗಿದೆ," ಎಂದು ಹೇಳಿದ್ದಾರೆ.
"ನರೇಂದ್ರ ಮೋದಿ ಸರಕಾರದಲ್ಲಿ ಎಲ್ಲವೂ ಕೇಂದ್ರೀಕೃತ ಆಗಬೇಕು. ಇದನ್ನು ಪ್ರಜಾಪ್ರಭುತ್ವ ಎನ್ನುತ್ತಾರಾ? ರಾಜೀವಾ ಗಾಂಧಿ ಸಮಯದಲ್ಲಿ ಪಂಚಾಯತ್ ರಾಜ್ ಕಾಯ್ದೆ ಜಾರಿಗೆ ತರುವಾಗ ತಳಮಟ್ಟದಲ್ಲಿ ಜಾರಿಗೆ ತರಲಾಗಿತ್ತು," ಎಂದು ಜಿಎಸ್ಟಿ ಜಾರಿಯ ಬಗ್ಗೆ ಠಾಕ್ರೆ ಅಪಸ್ವರ ಎತ್ತಿದ್ದಾರೆ.
ಇಲ್ಲಿಯವರೆಗೆ 15 ಲಕ್ಷ ಜನರು ಜಿಎಸ್ಟಿಯಿಂದ ಕೆಲಸ ಕಳೆದುಕೊಂಡಿದ್ದಾರೆ ಎಂದು ಓದಿದ್ದೇಬೆ, ಇವರ ಮೇಲೆ ಅವಲಂಬಿರಾದ 60 ಲಕ್ಷ ಜನರಿಗೆ ದಿನದ 'ರೊಟ್ಟಿ ದಾಲ್' ಕೊಡುವವರು ಯಾರು ಎಂದು ಠಾಕ್ರೆ ಖಾರವಾಗಿ ಪ್ರಶ್ನಿಸಿದ್ದಾರೆ.