ಮಲಯಾಳಂ ನಟಿ ಲೈಂಗಿಕ ದೌರ್ಜನ್ಯದ ಹಿಂದೆ ಕಾಣದ ಕೈಗಳ ಸಂಚು?
ಕನ್ನಡದಲ್ಲಿಯೂ ನಟಿಸಿರುವ ಮಲಯಾಳಂ ಚಿತ್ರರಂಗದ ನಟಿಯ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯದ ಹಿಂದೆ ಕೆಲ ಪ್ರಭಾವಿ ವ್ಯಕ್ತಿಗಳ ಕೈವಾಡವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಚಿತ್ರರಂಗದವರನ್ನೂ ವಿಚಾರಿಸುತ್ತಿದ್ದಾರೆ.
ತಿರುವನಂತಪುರಂ, ಫೆಬ್ರವರಿ 20 : ಕನ್ನಡದಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿರುವ ಪ್ರಖ್ಯಾತ ಮಲಯಾಳಂ ತಾರೆಯ ಅಪಹರಣ ಮತ್ತು ನಂತರ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣ ತನಿಖೆ ಚುರುಕಾಗಿದ್ದು, ಹಲವಾರು ದಿಕ್ಕುಗಳಿಂದ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.
ಚಿತ್ರರಂಗದಲ್ಲಿ ಅವರ ಮೇಲೆ ವೈಷಮ್ಯ ಸಾಧಿಸುತ್ತಿದ್ದ ಕೆಲವರು ಈ ಕೃತ್ಯದ ಹಿಂದೆ ಇರಬಹುದಾ ಎಂಬ ಪ್ರಶ್ನೆ ಇಟ್ಟುಕೊಂಡು ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ಈ ದಿಕ್ಕಿನಲ್ಲಿ ಕೆಲವು ನಟನಟಿಯರನ್ನು ವಿಚಾರಣೆಗೆ ಗುರಿಪಡಿಸುವುದಾಗಿ ಕ್ರೈಂ ಬ್ರಾಂಚ್ ಐಜಿಪಿ ದಿನೇಂದ್ರ ಕಶ್ಯಪ್ ಅವರು ಹೇಳಿದ್ದಾರೆ.[ನಟಿ ಅಪಹರಣ, ಲೈಂಗಿಕ ಕಿರುಕುಳ?]
ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಹೀನಾಯ ಕೃತ್ಯದ ಪ್ರಮುಖ ಆರೋಪಿ ಸುನೀಲ್ ಕುಮಾರ್ ಅಲಿಯಾಸ್ ಪಲ್ಸರ್ ಸುನಿ, ದೌರ್ಜನ್ಯ ನಡೆಸಿದ ನಂತರ ಮಲಯಾಳಂ ಚಿತ್ರರಂಗದ ಕೆಲವರನ್ನು ಸಂಪರ್ಕಿಸಿದ್ದರು. ಖಚಿತವಾಗಿ ಯಾರ ಮೇಲೂ ಅನುಮಾನ ವ್ಯಕ್ತಪಡಿಸಿಲ್ಲವಾದರೂ ಕೆಲವರ ಕೈವಾಡವನ್ನು ಅಲ್ಲಗಳೆಯುವಂತಿಲ್ಲ ಎಂದಿದ್ದಾರೆ.[ಕಿಡ್ನಾಪ್ ಕೇಸ್ : ಕೊಯಮತ್ತೂರಿನಲ್ಲಿ ಸಿಕ್ಕಿಬಿದ್ದ 7 ಕಾಮುಕರು]
ತ್ರಿಸ್ಸೂರ್ ನಿಂದ ಕೊಚ್ಚಿಗೆ ನಟಿಯನ್ನು ಕಾರಿನಲ್ಲಿ ಕರೆದೊಯ್ಯುತ್ತಿದ್ದ ಕಾರಿನ ಚಾಲಕ ಮಾರ್ಟಿನ್, ಅವರನ್ನು ಬ್ಲಾಕ್ ಮೇಲ್ ಮಾಡುವ ಉದ್ದೇಶದಿಂದಲೇ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಅವರ ಕೆಲವೊಂದು ಫೋಟೋ ಮತ್ತು ವಿಡಿಯೋಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿಕೆ ನೀಡಿದ್ದಾನೆ.
ಹಣ ನೀಡದಿದ್ದರೆ ವಿಡಿಯೋ ಬಹಿರಂಗ
30 ಲಕ್ಷ ರುಪಾಯಿ ಹಣ ನೀಡದಿದ್ದರೆ ತೆಗೆದಿರುವ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ತಾಣದಲ್ಲಿ ಹಾಕಲಾಗುವುದು ಎಂದು ನಟಿಗೆ ಮಾರ್ಟಿನ್ ಮತ್ತು ಇತರರು ಬೆದರಿಕೆ ಒಡ್ಡಿರುವುದಾಗಿಯೂ ಆತ ಪೊಲೀಸರ ಮುಂದೆ ಹೇಳಿದ್ದಾನೆ.
ನಿರ್ಮಾಪಕ ಹೆಂಡತಿಗೂ ಹೀಗೇ ಮಾಡಿದ್ದ ಸುನಿ
ಖ್ಯಾತ ನಟಿಯರಿಂದ ಹಣ ಕೀಳುವ ಜಾಲದ ಹಿಂದೆ ಸುನೀಲ್ ಕುಮಾರ್ ಕೈವಾಡ ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಆತನ ವಿರುದ್ಧ ಇದೇ ಬಗೆಯ ದೂರುಗಳು ಕೂಡ ಹಿಂದೆ ಬಂದಿದ್ದವು. 5 ವರ್ಷಗಳ ಹಿಂದೆ ತನ್ನ ಹೆಂಡತಿಯ ಮೇಲೆ ಅತ್ಯಾಚಾರ ಎಸಗಿ ಬ್ಲಾಕ್ ಮೇಲ್ ಮಾಡಲಾಗಿತ್ತು ಎಂದು ಸುನೀಲ್ ವಿರುದ್ಧ ನಿರ್ಮಾಪಕರೊಬ್ಬರು ದೂರು ನೀಡಿದ್ದರು.
ಮಂತ್ರಿ ಮಗನ ಮೇಲೆಯೂ ಅನುಮಾನ
ಈ ಪ್ರಕರಣದಲ್ಲಿ ಕೇರಳದ ಮಂತ್ರಿಯೊಬ್ಬರ ಮಗನ ಮೇಲೆಯೂ ಅನುಮಾನ ಮೂಡಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಹಿಂದೆ ಖಾಸಗಿ ಟಿವಿ ಚಾನಲ್ ನಡೆಸಿದ್ದ ಸ್ಟಿಂಗ್ ಆಪರೇಷನ್ ನಲ್ಲಿ ಆತ ರಷ್ಯಾ ಮೂಲದ ಮಹಿಳೆಯೊಂದಿಗೆ ಸಿಕ್ಕಿಬಿದ್ದಿದ್ದ.
ಕನ್ನಡದ ನಾಲ್ಕಾರು ಚಿತ್ರಗಳಲ್ಲಿ ನಟಸಿದ್ದ ಸುಂದರಿ
ಕನ್ನಡದಲ್ಲಿ ಹಲವಾರು ಚಿತ್ರಗಳಲ್ಲಿ ಈ ನಟಿ ನಟಿಸಿ ಕನ್ನಡಿಗರ ಹೃದಯ ಗೆದ್ದಿದ್ದಾರೆ. ಅವರು ಬೆಂಗಳೂರಿನ ನಿರ್ಮಾಪಕರೊಬ್ಬರನ್ನು ಮದುವೆಯಾಗಲಿದ್ದಾರೆ ಎಂಬ ಮಾತು ಕೂಡ ಕೇಳಿಬಂದಿದೆ. ಆದರೆ, ಈ ಸುದ್ದಿಯನ್ನು ಅವರು ಸಾರಾಸಗಟಾಗಿ ನಿರಾಕರಿಸಿದ್ದರು. ಈಗ ಅವರ ಬಾಳೇ ಮೂರಾಬಟ್ಟೆಯಂತಾಗಿದೆ.