ಕೇಜ್ರಿವಾಲ್ ಡಿನ್ನರ್ ನಿಂದ 93 ಲಕ್ಷ ರೂ. ಸಂಗ್ರಹ
ಮುಂಬೈ: ನ, 28 : ದೆಹಲಿ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದು, ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಚುನಾವಣೆ ಖರ್ಚಿಗೆ ಹಣ ಹೊಂದಿಸಲು ಹಳೆ ವರಸೆಗೆ ಮುಂದಾಗಿದ್ದಾರೆ.
ಪಕ್ಷದ ಫಂಡ್ ಹೆಚ್ಚು ಮಾಡಿಕೊಳ್ಳಲು ಡಿನ್ನರ್ ತಂತ್ರ ಅಳವಡಿಸಿಕೊಂಡಿದ್ದಾರೆ. ಕೇಜ್ರಿವಾಲ್ ಜತೆ ಊಟ ಮಾಡುವವರು 20 ಸಾವಿರ ರೂ. ನೀಡಬೇಕು. ಇದು ಆಮ್ ಆದ್ಮಿ ಪಕ್ಷದ ಫಂಡ್ ಗೆ ನೇರವಾಗಿ ಹೋಗುತ್ತದೆ.[ಕೇಜ್ರಿವಾಲ್ ಆಮ್ ಆದ್ಮಿಯನ್ನು ಅಧಿಕಾರಕ್ಕೆ ತರುತ್ತಾರಾ?]
ಮುಂಬೈನಲ್ಲಿ ಡಿನ್ನರ್ ಆಯೋಜನೆ ಮಾಡಿ 93 ಲಕ್ಷ ರೂ. ಸಂಗ್ರಹಿಸಲಾಗಿದೆ. ಮುಂದಿನ ಫಂಡ್ ರೈಸ್ ಡಿನ್ನರ್ ಬೆಂಗಳೂರಿನಲ್ಲಿ ನಡೆಯಲಿದೆ. ನಾವು ಈಗಾಗಲೇ ಈ ಮೂಲಕ ಕಳೆದ ರಾತ್ರಿ 93 ಲಕ್ಷ ರೂ. ಕಲೆಹಾಕಿದ್ದೇವೆ. 36 ಲಕ್ಷ ರೂ. ದೇಣಿಗೆಯಿಂದ ಸಂಗ್ರಹವಾಗಿದೆ. 36 ಲಕ್ಷ ರೂ ಡೊನರ್ ಪಾಸ್ ಗಳಿಂದ ಸಂಗ್ರಹವಾಗಿದ್ದರೆ ಕಾರ್ಯಕರ್ತರು 21 ಲಕ್ಷ ರೂ. ಸಂಗ್ರಹಿಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥೆ ಪ್ರೀತಿ ಶರ್ಮಾ ಮೆನನ್ ತಿಳಿಸಿದ್ದಾರೆ.
ಹೊಸ ಉದ್ಯಮಿಗಳು, ಯುವಕರು, ವೃತ್ತಿ ನಿರತರಿಂದ ಈ ಅಭಿಯಾನಕ್ಕೆ ವಿಶೇಷ ಬೆಂಬಲ ವ್ಯಕ್ತವಾಗುತ್ತಿದೆ. ಬಿಜೆಪಿಯ ಮೋದಿ ಮಂತ್ರವನ್ನು ಹಿಂದೆ ಹಾಕಲು ಈ ಬಗೆಯ ತಂತ್ರಗಳು ಅನಿವಾರ್ಯ. ಮುಂಬೈ ಡಿನ್ನರ್ ನಲ್ಲಿ 200 ಜನ ಭಾಗವಹಿಸಲು ಅವಕಾಶವಿತ್ತು. ಯುವ ವ್ಯಾಪಾರಿಗಳು, ಬಾಲಿವುಡ್ ನಿರ್ದೇಶಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎಂದು ಶರ್ಮಾ ತಿಳಿಸಿದ್ದಾರೆ.[ಬಿಜೆಪಿ, ಕೇಜ್ರಿವಾಲ್, ಶೌಚಾಲಯ: ಏನಿದು ಆವಾಂತರ?]
ಮಹಾರಾಷ್ಟ್ರದಲ್ಲಿ ಒಟ್ಟು 5 ಕೋಟಿ ರೂ. ಸಂಗ್ರಹಿಸುವ ನಿರೀಕ್ಷೆ ಹೊಂದಲಾಗಿದೆ. ಹಣ ನೀಡಿದವರ ಹೆಸರನ್ನು ಆಮ್ ಆದ್ಮಿ ಪಕ್ಷ ತನ್ನ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚುರ ಪಡಿಸುತ್ತಿದೆ. ಲೋಕಸಭಾ ಚುನಾವಣೆ ವೇಳೆ ಹಮ್ಮಿಕೊಂಡಿದ್ದ ಅಭಿಯಾನಕ್ಕೆ ಉತ್ತಮ ಬೆಂಬಲ ವ್ಯಕ್ತವಾಗಿತ್ತು ಎಂದು ಹೇಳಿದ್ದಾರೆ.
ಕಳೆದ ಬಾರಿ ಮಹಾರಾಷ್ಟ್ರದಿಂದ ಅತಿ ಹೆಚ್ಚಿನ ಹಣ ಸಂಗ್ರಹವಾಗಿತ್ತು. ನಂತರ ಸ್ಥಾನಗಳಲ್ಲಿ ದೆಹಲಿ ಮತ್ತು ಉತ್ತರ ಪ್ರದೇಶ ಇದ್ದವು. ಈ ಬಾರಿಯೂ ಉತ್ತಮ ಬೆಂಬಲ ವ್ಯಕ್ತವಾಗುವ ನಿರೀಕ್ಷೆಯಿದೆ ಎಂದು ಶರ್ಮಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.