ತಿರುಪತಿಯಲ್ಲಿ ಉರುಳು ಸೇವೆ ಮಾಡಲು ಆಧಾರ್ ಕಾರ್ಡ್ ಕಡ್ಡಾಯ!
ತಿರುಪತಿ, ಜುಲೈ 20 : ತಿರುಪತಿ ತಿರುಮಲ ದೇವಾಲಯದಲ್ಲಿ ಉರುಳು ಸೇವೆ ಮಾಡಲು ಇನ್ನು ಮುಂದೆ ಆಧಾರ್ ಕಾರ್ಡ್ ನೀಡಬೇಕು. ಅಚ್ಚರಿಯಾದರೂ ಇದು ಸತ್ಯ, ಬುಧವಾರದಿಂದಲೇ ಅಂಗಪ್ರದಕ್ಷಿಣೆ(ಉರುಳುಸೇವೆ) ಮಾಡಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ.
ಮಂಗಳವಾರ ನಡೆದ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಮಂಡಳಿ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. 'ದೇವಾಲಯಕ್ಕೆ ಆಗಮಿಸುವ ಎಲ್ಲಾ ಭಕ್ತರಿಗೆ ಉರುಳು ಸೇವೆ ಮಾಡುವ ಅವಕಾಶ ಕಲ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ' ಎಂದು ದೇವಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ತಲಾರಿ ರವಿ ಹೇಳಿದ್ದಾರೆ.[ಇ-ಆಧಾರ್ ಕಾರ್ಡ್ ನೀಡಿದರೆ ಹೊಸ ಸಿಮ್]
ಒಮ್ಮೆ ಉರುಳು ಸೇವೆ ಮಾಡಿದವರು, ಮತ್ತೆ ಮತ್ತೆ ದೇವಾಲಯಕ್ಕೆ ಆಗಮಿಸುವ ಭಕ್ತರು ಇತರ ಭಕ್ತರಿಗೆ ಉರುಳು ಸೇವೆ ಮಾಡುವ ಅವಕಾಶವನ್ನು ತಪ್ಪಿಸುತ್ತಿದ್ದಾರೆ. ಆದ್ದರಿಂದ ಉರುಳು ಸೇವೆಗೆ ಟಿಕೆಟ್ ಪಡೆಯುವ ಭಕ್ತರ ಮಾಹಿತಿಯನ್ನು ಸಂಗ್ರಹಿಸಲು ಆಧಾರ್ ಕಾರ್ಡ್ ಮೊರೆ ಹೋಗಲಾಗಿದೆ.[ಆಧಾರ್ ಕಾರ್ಡ್ ಮಾಡಿಸುವುದು ಹೇಗೆ?]
Also Read : ಅಂಚೆ ಕಚೇರಿಗಳಲ್ಲಿ ತಿಮ್ಮಪ್ಪನ ದರ್ಶನದ ಟಿಕೆಟ್ ಸಿಗುತ್ತೆ
ಉರುಳು ಸೇವೆ ಟಿಕೆಟ್ ಪಡೆಯುವ ಸಂದರ್ಭದಲ್ಲಿ ಆಧಾರ್ ಕಾರ್ಡ್ ಸಂಖ್ಯೆಯನ್ನು ನೀಡಬೇಕು. ಅದನ್ನು ಕಂಪ್ಯೂಟರ್ನಲ್ಲಿ ನೋಂದಣಿ ಮಾಡಲಾಗುತ್ತದೆ. ಪುನಃ ಅದೇ ಭಕ್ತರು ಉರುಳು ಸೇವೆ ಮಾಡುವ ಟಿಕೆಟ್ ಬಂದರೆ ಅವರನ್ನು ತಡೆಯಲು ಇದು ಸಹಕಾರಿಯಾಗುತ್ತದೆ ಎಂಬುದು ಆಡಳಿತ ಮಂಡಳಿ ಚಿಂತನೆ.[ಮೇಲುಕೋಟೆಗೆ ಬಂದ ತಿರುಮಲದ ವೆಂಕಟೇಶ್ವರ]
ತಿರುಪತಿ ದೇವಾಲಯದ ಸುತ್ತ ಉರುಳು ಸೇವೆ ಮಾಡಲು ಸಾವಿರಾರು ಭಕ್ತರು ಹರಕೆ ಹೊತ್ತು ಆಗಮಿಸುತ್ತಾರೆ. ದಶಕಗಳ ಕಾಲದಿಂದ ಈ ಸೇವೆ ದೇವಾಲಯದಲ್ಲಿ ನಡೆಯುತ್ತಿದೆ. ಈಗ ಈ ಸೇವೆ ಟಿಕೆಟ್ ಪಡೆಯಲು ಆಧಾರ್ ಕಡ್ಡಾಯವಾಗಿದೆ.