ಕ್ಷಯ ರೋಗಿಗಳಿಗೆ ಆಧಾರ್ ಜೋಡಣೆಗೆ ಆಗಸ್ಟ್ 30 ಕೊನೆಯ ದಿನ
ನವದೆಹಲಿ, ಜೂನ್ 22: ಟಿಬಿ (ಟ್ಯೂಬರ್ ಕುಲೋಸಿಸ್) ಅಥವಾ ಕ್ಷಯರೋಗಿಗಳಿಗೆ ಕೇಂದ್ರ ಸರಕಾರದಿಂದ ಸಿಗುವ ನೆರವು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದೆ. ಆಧಾರ್ ಕಾರ್ಡ್ ಜತೆ ನೋಂದಣಿ ಮಾಡಿಕೊಳ್ಳಲು ಕ್ಷಯ ರೋಗಿಗಳಿಗೆ ಆಗಸ್ಟ್ 31ರ ಗಡುವು ನೀಡಲಾಗಿದೆ.
ಜೂನ್ 16ರಂದು ಕೇಂದ್ರ ಸರಕಾರ ಹೊಸ ಅಧಿಸೂಚನೆ ಹೊರಡಿಸಿದ್ದು, ಇದರಲ್ಲಿ ಕ್ಷಯರೋಗಿಗಳಿಗೂ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದೆ.
ಕೇಂದ್ರ ಸರಕಾರ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಯೋಜನೆಯಡಿ ಹೊಸ ನಿಯಮಾವಳಿಗಳನ್ನು ಜಾರಿಗೆ ತಂದಿದ್ದು ಇದರ ಪ್ರಕಾರ ಕೇಂದ್ರ ಸರಕಾರ ನೀಡುವ ನಗದು ನೆರವು ಪಡೆದುಕೊಳ್ಳಲು ಆಧಾರ್ ನೀಡುವುದು ಕಡ್ಡಾಯವಾಗಿದೆ. ಆದರೆ ಆರೋಗ್ಯ ಸೇವೆ ಪಡೆಯಲು ಆಧಾರ್ ಕಡ್ಡಾಯವಲ್ಲ.
ಆಧಾರ್ ಕಾರ್ಡ್ ಇಲ್ಲ ಎನ್ನುವ ಕಾರಣಕ್ಕೆ ರೋಗಿಗಳಿಗೆ ವೈದ್ಯಕೀಯ ನೆರವು ನಿರಾಕರಿಸುವಂತಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ. ಕೇಂದ್ರ ಸರಕಾರ ನೀಡುವ ನೆರವು ಪಡೆದುಕೊಳ್ಳಲು ರೋಗಿಗಳು ವಂಚಿಸುತ್ತಿದ್ದಾರೆ ಎಂಬ ಆರೋಪದ ಮೇಲೆ ಈ ಆಧಾರ್ ನೀತಿಯನ್ನು ಸರಕಾರ ಜಾರಿಗೆ ತರಲು ಹೊರಟಿದೆ.