ಐಫೋನ್ ಗಾಗಿ ಚಲಿಸುವ ರೈಲಿನಿಂದ ಹಾರಿದ ವಿದ್ಯಾರ್ಥಿ
ಚಿತ್ತೂರು, ಅಕ್ಟೋಬರ್, 20: ಪ್ರಸ್ತುತ ದಿನಗಳಲ್ಲಿ ಯುವಸಮುದಾಯ ಮೊಬೈಲ್ ಫೋನ್ ಗಳಿಗೆ ದಾಸರಾಗಿಬಿಟ್ಟಿದ್ದಾರೆ. ಒಂದು ದಿನ ಊಟ ಇಲ್ಲದಿದ್ದರೂ ಪರವಾಗಿಲ್ಲ, ಮೊಬೈಲ್ ಮಾತ್ರ ಪ್ರತಿಕ್ಷಣ ಜೊತೆಯಲ್ಲೇ ಇರಬೇಕು ಎಂಬ ಧೋರಣೆಯನ್ನು ಯುವ ಸಮುದಾಯ ಅನುಸರಿಸುತ್ತಿದೆ.
ಮೊಬೈಲ್ ಗಳನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಯುವ ಸಮುದಾಯ. ಮೊಬೈಲ್ ಗಾಗಿ ಜೀವ ಬಿಡಲೂ ಸಿದ್ಧರಾಗಿಬಿಟ್ಟಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ತನ್ನ ಮೊಬೈಲ್ ಫೋನ್ ಆಕಸ್ಮಿಕವಾಗಿ ಕೆಳಗೆ ಬಿತ್ತು ಎಂದು ಯುವಕನೋರ್ವ ರೈಲಿನಿಂದ ಜಿಗಿದು ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ ನಡೆದಿದೆ.
ಇಲ್ಲಿಯ ರಾಜಂಪೇಟ ತಾಲ್ಲೂಕಿನ ಕೂಚಿವಾರಿಪಲ್ಲೆಗೆ ಸೇರಿದ ನೆಕ್ಕಂ ರವಿತೇಜ ಎಂಬ ವ್ಯಕ್ತಿ ಜಿಲ್ಲೆಯ ಪೂತ್ತೂರಿ ಬಳಿಯ ಖಾಸಗಿ ವಿದ್ಯಾ ಸಂಸ್ಥೆಯೊಂದರಲ್ಲಿ ಬಿಟೆಕ್ ಪದವಿ ವ್ಯಾಸಾಂಗ ಮಾಡುತ್ತಿದ್ದ.
ಈತ ಬುಧವಾರ (ಅ.19) ತಿರುಪತಿಗೆ ಹೋಗಲು ರಾಜಂಪೇಟ ರೈಲ್ವೇ ನಿಲ್ದಾಣದಲ್ಲಿ ವೆಂಕಟಾದ್ರಿ ಎಕ್ಸ್ ಪ್ರೆಸ್ ರೈಲನ್ನು ಹತ್ತಿದ್ದಾನೆ.
ಬೋಗಿಯ ಬಾಗಿಲ ಬಳಿ ಕುಳಿತು ತನ್ನ ಮೊಬೈಲ್ ಫೋನ್ ನಲ್ಲಿ ಗೇಮ್ಸ್ ಆಡುವ ವೇಳೆ ಟ್ರೈನ್ ಓಬುಲವಾರಿ ಪಲ್ಲೆ ನಿಲ್ದಾಣ ಸಮೀಪ ಬರುತ್ತಿದ್ದಂತೆ ಫೋನ್ ಕೈ ಜಾರಿ ಕೆಳಗೆ ಬಿದ್ದಿದೆ. ಹಿಂದೆಮುಂದೆ ಯೋಚನೆ ಮಾಡದೆ ತಕ್ಷಣ ಯುವಕನೂ ಸಹ ರೈಲಿನಿಂದ ಕೆಳಗೆ ಹಾರಿದ್ದಾನೆ.
ಘಟನೆಯಲ್ಲಿ ಆತನ ಸೊಂಟ ಮತ್ತು ತಲೆಗೆ ಗಂಭೀರ ಗಾಯಗಳಾಗಿವೆ. ರಕ್ಷಣೆಗೆ ಧಾವಿಸಿದ ಸ್ಥಳೀಯರು ಅಂಬ್ಯುಲೆನ್ಸ್ ಗೆ ಕರೆ ಮಾಡಿ ರೈಲ್ವೇ ಕೋಡೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ವಿದ್ಯಾರ್ಥೀಯ ತಂದೆ ತಾಯಿ ಕುವೈತ್ ನಲ್ಲಿ ಇದ್ದಾರೆಂದು ತಿಳಿದು ಬಂದಿದ್ದು, ಕಳೆದುಕೊಂಡ ಫೋನ್ ಬೆಲೆಬಾಳುವ ಐಪೋನ್ ಆಗಿದ್ದು, ಆದ್ದರಿಂದಲೇ ರೈಲಿನಿಂದ ಕೆಳಗೆ ಬಿದ್ದಿರುವುದಾಗಿ ವಿದ್ಯಾರ್ಥಿ ತಿಳಿಸಿದ್ದಾನೆ.
ಎಷ್ಟು ಬೆಲೆಬಾಳುವ ಫೋನ್ ಆದರೂ ಪ್ರಾಣಕ್ಕಿಂತ ಹೆಚ್ಚೇನಲ್ಲ ಎಂದು ಸ್ಥಳೀಯರು ಹಿತವಚನ ಬೋಧಿಸಿದ್ದಾರೆ. ರೈಲು ನಿಧಾನಗತಿಯಲ್ಲಿ ಸಾಗುತ್ತಿದ್ದರಿಂದ ಕೇವಲ ಗಾಯಗಳಿಂದ ಪಾರಾಗಿದ್ದೇನೆ. ಇಲ್ಲದಿದ್ದರೆ ಪ್ರಾಣಹೋಗುತ್ತಿತ್ತು ಎಂದು ವೈದ್ಯರು ತಿಳಿಸಿದ್ದಾರೆ.