ಸಿಟಿ ರವಿ ಮತ್ತು ರಿಜ್ವಾನ್ ಅರ್ಷದ್ ಟ್ವಿಟ್ಟರ್ ನಲ್ಲಿ ಈ ಪಾಟಿ ಕಿತ್ತಾಡ್ತಿರೋದ್ಯಾಕೆ?
ಕರ್ನಾಟಕ ಬಿಜೆಪಿ ನಾಯಕ ಸಿಟಿ ರವಿ ಮತ್ತು ಕಾಂಗ್ರೆಸ್ ನಾಯಕ ರಿಜ್ವಾನ್ ಅರ್ಷದ್ ಟ್ವಿಟ್ಟರಿನಲ್ಲಿ ಕಿತ್ತಾಡಿಕೊಳ್ಳುತ್ತಿದ್ದಾರೆ.
ಬೆಂಗಳೂರು, ಮಾರ್ಚ್ 10: ಕರ್ನಾಟಕ ಬಿಜೆಪಿ ನಾಯಕ ಸಿಟಿ ರವಿ ಮತ್ತು ಕಾಂಗ್ರೆಸ್ ನಾಯಕ ರಿಜ್ವಾನ್ ಅರ್ಷದ್ ಟ್ವಿಟ್ಟರಿನಲ್ಲಿ ಕಿತ್ತಾಡಿಕೊಳ್ಳುತ್ತಿದ್ದಾರೆ.
ಅಷ್ಟಕ್ಕೂ ಇವರಿಬ್ಬರ ಕಿತ್ತಾಟಕ್ಕೆ ಕಾರಣವಾಗಿದ್ದು ಸೋನಿಯಾ ಗಾಂಧಿ ವಿದೇಶಕ್ಕೆ ಚಿಕಿತ್ಸೆಗೆ ತೆರಳಿದ ವಿಚಾರ. ಆರಂಭದಲ್ಲಿ ಕೆಣಕಿ ಬಿಜೆಪಿಯ ಸಿಟಿ ರವಿ ಟ್ಟೀಟ್ ಮಾಡಿದ್ದರು. ಇದಕ್ಕೆ ರಿಜ್ವನ್ ಅರ್ಷದ್ ಪ್ರತಿಕ್ರಿಯೆ ನೀಡಿ ಮತ್ತೆ ಸಿಟಿ ರವಿಯವರನ್ನು ಚರ್ಚೆಗೆ ಎಳೆದುಕೊಂಡು ಬಂದಿದ್ದರು. ಹೀಗೆ ಆರಂಭವಾದ ಟ್ವಿಟ್ಟರ್ ವಾರ್ ಇನ್ನೂ ಮುಂದುವರದಿದ್ದು ಉಭಯ ನಾಯಕರು ಒಬ್ಬರಾದ ಮೇಲೊಬ್ಬರಂತೆ ಪ್ರತ್ಯುತ್ತರ ನೀಡುತ್ತಲೇ ಇದ್ದಾರೆ. ಇದೀಗ ಈ ಸಮರಕ್ಕೆ ಕಾಂಗ್ರೆಸ್ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಕೂಡಾ ಎಂಟ್ರಿ ನೀಡಿದ್ದಾರೆ.[ಬಿಜೆಪಿಗೆ ಹಿನ್ನಡೆಯಾದರೆ ಮಾರುಕಟ್ಟೆಯಲ್ಲಿ ತಲ್ಲಣ ಗ್ಯಾರಂಟಿ!?]
|
ಸಿಟಿ ರವಿ ಹೇಳಿದ್ದೇನು?
ಮೊದಲು ಟ್ವೀಟ್ ಮಾಡಿದ ರವಿ, "ವೈದ್ಯಕೀಯ ಚಿಕಿತ್ಸೆಗಾಗಿ ಸೋನಿಯಾ ಗಾಂಧಿ ವಿದೇಶಕ್ಕೆ ತೆರಳುತ್ತಿರುವುದು ಅಚ್ಚರಿ ಉಂಟು ಮಾಡಿದೆ, ಆವರು ಚಿಕಿತ್ಸೆಗಾಗಿ ಹೋಗುತ್ತಿದ್ದಾರೋ ಇಲ್ಲಾ ಈಗಿರುವ ಖಾತೆಗಳಿಂದ ಸುರಕ್ಷಿತ ಖಾತೆಗಳಿಗೆ ಹಣ ವರ್ಗಾಯಿಸಲು ಹೋಗುತ್ತಿದ್ದಾರೋ," ಎಂದು ಟ್ವೀಟ್ ಮಾಡಿದ್ದರು.
|
ಮತ್ತೆ ರವಿ ದಾಳಿ
ಇದಾಗಿ ಮತ್ತೆ ಟ್ವಿಟ್ಟರಿನಲ್ಲೇ ದಾಳಿ ನಡೆಸಿದ ಸಿಟಿ ರವಿ, "6 ದಶಕಗಳ ಕಾಲ ಭಾರತವನ್ನು ಆಳ್ವಿಕೆ ಮಾಡಿಯೂ ಸೋನಿಯಾ ಗಾಂಧಿಗೆ ಚಿಕಿತ್ಸೆ ನೀಡಲಾಗುವಂಥ ಆಸ್ಪತ್ರೆ ಕಟ್ಟಲಾಗಲಿಲ್ಲ ಎನ್ನುವುದು ಗಾಂಧಿಗಳಿಗೆ ಅವಮಾನ," ಎಂದು ಟ್ವಿಟ್ ಮಾಡಿದರು.
ಮತ್ತೆ ಟ್ವೀಟ್ ಮಾಡಿದ ರವಿ, "ರಾಹುಲ್ ಗಾಂಧಿ ಯಾಕೆ ತಾಯಿ ಸೋನಿಯಾರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಬಾರದು? ಕರ್ನಾಟಕ ಮುಖ್ಯಮಂತ್ರಿಗಳು ಖಂಡಿತವಾಗಿಯೂ ಒಳ್ಳೆ ರೀತಿಯಲ್ಲಿ ನೋಡಿಕೊಳ್ಳುತ್ತಾರೆ," ಎಂದಿದ್ದರು.
ಕಿಡಿಕಾರಿದ ರಿಜ್ವಾನ್ ಅರ್ಷದ್
ಆದರೆ ಇದಕ್ಕೆ ಕಿಡಿಕಾರಿದ ರಿಜ್ವಾನ್ ಅರ್ಷದ್ ಅಟಲ್ ಬಿಹಾರಿ ವಾಜಪೇಯಿಯವರ ಹೇಳಿಕೆಯ ಚಿತ್ರವೊಂದನ್ನು ಟ್ವೀಟ್ ಮಾಡಿದ್ದರು. ಅದರಲ್ಲಿ ಹೀಗಿತ್ತು, "ಸಿಟಿ ರವಿಯವರೇ ಇಷ್ಟು ಸೊಕ್ಕಿನಿಂದ, ಅವಮಾನಕರವಾಗಿ ಮಾತನಾಡಬೇಡಿ. ನೀವು ಜೀವ ಕೊಡುತ್ತೀರಾ? ರಾಜಕೀಯ ದ್ವೇಷದ ಮಧ್ಯೆ ಮಾನವೀಯತೆಯನ್ನು ಮರೆಯಬೇಡಿ. ಅಟಲ್ ಬಿಹಾರಿ ವಾಜಪೇಯಿ ರಾಜೀವ್ ಗಾಂಧಿ ಬಗ್ಗೆ ಹೇಳಿದ್ದು ಇಲ್ಲಿದೆ..," ಎಂದು ಟ್ವೀಟ್ ಮಾಡಿದರು.[ಮಣಿಪುರ: ಆಡಳಿತ ವಿರೋಧಿ ಅಲೆಯಲ್ಲಿ ಈಜಿ ದಡ ಮುಟ್ಟುವುದೇ ಕಾಂಗ್ರೆಸ್?]
|
ಅಟಲ್ ಬಿಹಾರಿ ವಾಜಪೇಯಿ ಹೇಳಿಕೆ ಏನಿತ್ತು?
ರಿಜ್ವಾನ್ ಅರ್ಷದ್ ಉಲ್ಲೇಖಿಸಿದ್ದ ವಾಜಪೇಯಿ ಹೇಳಿಕೆ ಹೀಗಿತ್ತು, "ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಅವರಿಗೆ ಅದು ಹೇಗೋ ನನಗೆ ಕಿಡ್ನಿ ಸಮಸ್ಯೆ ಇರುವುದು ತಿಳಿಯಿತು. ಒಂದು ದಿನ ನನ್ನನ್ನು ಕಚೇರಿಗೆ ಕರೆಸಿಕೊಂಡು ವಿಶ್ವಸಂಸ್ಥೆಗೆ ಕಳುಹಿಸುವ ನಿಯೋಗದಲ್ಲಿ ನಿಮ್ಮನ್ನೂ ಸೇರಿಸುತ್ತೇನೆ ಆ ಮೂಲಕ ನಾನೂ ಈ ಅವಕಾಶ ಬಳಸಿಕೊಂಡು ಚಿಕಿತ್ಸೆ ಪಡೆದುಕೊಳ್ಳಬಹುದು ಎಂದು ಅಂದುಕೊಂಡಿದ್ದರು. ನಾನು ನ್ಯೂಯಾರ್ಕಿಗೆ ಹೋದ. ಅದೊಂದು ಕಾರಣಕ್ಕೆ ನಾನು ಇನ್ನೂ ಬದುಕಿದ್ದೇನೆ," ಎಂಬುದಾಗಿ ವಾಜಪೇಯಿ ಹೇಳಿಕೆ ಹೇಳುತ್ತಿತ್ತು.
|
ಬೆಂಬಿಡದ ಸಿಟಿ ರವಿ
ಆದರೆ ಇಲ್ಲಿಗೇ ಸುಮ್ಮನಾಗದ ಸಿಟಿ ರವಿ, " ನೀವು ಕಾಂಗ್ರೆಸಿನವರು ಯಾವತ್ತಿನಿಂದ ಅವಮಾನ ಮತ್ತು ಅಹಂಕಾರದ ಬಗ್ಗೆ ಪಾಠ ಮಾಡಲು ಆರಂಭಿಸಿದ್ದೀರಿ?" ಎಂದು ಪ್ರಶ್ನಿಸಿದರು. 'ಮಾತ್ರವಲ್ಲ ರಾಜೀವ್ ಗಾಂಧಿ ಕಾಲಕ್ಕೂ ಈ ಕಾಲಕ್ಕೂ ವ್ಯತ್ಯಾಸವಾಗಿದೆ,' ಎಂದು ಹೇಳಿದರು.
ಇದಕ್ಕೆ ಉತ್ತರಿಸಿದ ರಿಜ್ವಾನ್, "ಅದು ಸತ್ಯ ಸಿಟಿ ರವಿಯವರೆ. ಆದರೆ ಸಂಘದ ರಾಜಕೀಯ ವಾಜಪೇಯಿ ಕಾಲದ ನಂತರ ಇನ್ನೂ ಕೀಳುಮಟ್ಟಕ್ಕೆ ಹೋಗಿದೆ,' ಎಂದು ಕಾಲೆಳೆದರು. ಅಲ್ಲಿಂದ ನಂತರ ಇಬ್ಬರೂ ನಾಯಕರ ಸಮರ ಮುಂದುವರಿದಿದೆ.
|
ದಿನೇಶ್ ಗುಂಡೂರಾವ್ ಎಂಟ್ರಿ
ಇದೀಗ ರಿಜ್ವಾನ್ ಮತ್ತು ರವಿ ಚರ್ಚೆಗೆ ಕಾಂಗ್ರೆಸ್ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಕೂಡಾ ಎಂಟ್ರಿಯಾಗಿದ್ದಾರೆ. ಸಿಟಿ ರವಿ ತಮ್ಮ ಅನಾರೋಗ್ಯಕರ ಮನಸ್ಥಿತಿಯನ್ನು ಪ್ರದರ್ಶಿಸಿದ್ದಾರೆ. ಅವರ ತಲೆಯಲ್ಲಿ ಕಸ ತುಂಬಿಕೊಂಡಿರುವುದನ್ನು ಇದು ಸೂಚಿಸುತ್ತದೆ. ಅವರ ಇಷ್ಟು ಕೀಳು ಮಟ್ಟಕ್ಕೆ ಇಳಿದಿರುವುದು ಬೇಸರದ ಸಂಗತಿ," ಎಂದು ಹೇಳಿದ್ದಾರೆ.