ಮೃತ ಪತ್ನಿಯನ್ನು ತಳ್ಳುಗಾಡಿಯಲ್ಲಿಟ್ಟು 60 ಕಿಮೀ ನಡೆದ ಪತಿ
ವಿಕಾರಾಬಾದ್, ನವೆಂಬರ್, 6: ಆತ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಹೆಂಡತಿ ಊರಲ್ಲದ ಊರಲ್ಲಿ ಅಸುನೀಗಿದಳು. ಪತ್ನಿಯ ಅಂತ್ಯಕ್ರಿಯೆಯನ್ನು ಹೇಗಾದರೂ ಮಾಡಿ ಹುಟ್ಟಿದ ಊರಿನಲ್ಲೇ ನೆರವೇರಿಸಬೇಕೆಂಬ ಆಸೆ ಆತನಲ್ಲಿತ್ತು.
ಅಷ್ಟು ದೂರ ಹೆಂಡತಿ ಶವವನ್ನು ಸಾಗಿಸಲು ವಾಹನಕ್ಕೆ ಹಣ ಹೊಂದಿಸಲು ಅವನ ಬಳಿ ಬಿಡಿಗಾಸು ಇಲ್ಲ. ಆದರೂ ಆತ ಧೃತಿಗೆಡಲಿಲ್ಲ. ಚಕ್ರದ ತಳ್ಳುಬಂಡಿಯೊಂದರಲ್ಲಿ ಹೆಂಡತಿ ಶವವನ್ನು ಇಟ್ಟು ನಡೆದುಕೊಂಡೇ ಊರೂ ಸೇರಲು ಅಣಿಯಾದ ಭವ್ಯ ಭಾರತದ ಓರ್ವ ನಿರ್ಭಾಗ್ಯನ ದಾರುಣ ಕತೆ ಇದು. [ವಾಹನಕ್ಕೆ ಹಣ ಹೊಂದಿಸಲಾಗದೆ ಹೆಂಡತಿ ಶವ ಹೊತ್ತು 10 ಕಿ.ಮೀ. ನಡೆದ]
ಈ ಘಟನೆ ನಡೆದಿರುವುದು ತೆಲಂಗಾಣದ ವಿಕಾರಾಬಾದ್ ನಲ್ಲಿ. ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಮನೂರು ಮಂಡಲದ ಮಾಝಕೋಡುವಿನ ರಾಮುಲು, ಕವಿತ(46) ಎಂಬುವವರಿಗೆ ಕುಷ್ಠರೋಗ ವ್ಯಾಪಿಸಿತ್ತು. ರೋಗ ಬಂದ ಮೇಲೆ ಊರಿನಲ್ಲೇ ಇದ್ದು ಜೀವನ ನಡೆಸುವುದು ತೀರ ಕಷ್ಟವಾಗಿತ್ತು.
ತುತ್ತು ಅನ್ನವೂ ದುಸ್ತರವಾದಾಗ ಹುಟ್ಟಿದ ಊರನ್ನು ಬಿಟ್ಟು ಊರೂರೂ ಅಲೆಯುತ್ತಾ ಭಿಕ್ಷಾಟನೆ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಹೀಗೆ ಭಿಕ್ಷಾಟನೆ ಮಾಡುತ್ತಾ ಬೀದರ್ ಗೆ ಬಂದ ಈ ದಂಪತಿಗಳು ಬೀದರ್ ನ ರೈಲ್ವೇ ನಿಲ್ದಾಣದಲ್ಲೇ ಜೀವನ ನಡೆಸುತ್ತಿದ್ದರು.
ಅಮೆರಿಕಾಗೆ ಸೇರಿದ ಒಂದು ಸ್ವಯಂ ಸೇವಾ ಸಂಸ್ಥೆ ವಿಕಾರಾಬಾದ್ ನ ಮೌಲಾಲಿಯಲ್ಲಿ ಭಿಕ್ಷುಕರಿಗೆ ಉಚಿತವಾಗಿ ಅಕ್ಕಿ ವಿತರಿಸುತ್ತಿದೆ ಎಂಬ ವಿಷಯ ತಿಳಿದು ಬೀದರ್ ನಿಂದ ಕಳೆದ ಶುಕ್ರವಾರ (ನವೆಂಬರ್ 4) ದಂದು ಲಿಂಗಂಪಲ್ಲಿಗೆ ಬಂದಿದ್ದರು.
ಶನಿವಾರ ಮುಂಜಾನೆ ಲಿಂಗಂಪಲ್ಲಿಯ ರೈಲ್ವೇ ನಿಲ್ದಾಣದ ಬಳಿ ಟೀ ಕುಡಿದು ಮೌಲಾಲಿಗೆ ಹೋಗಲು ಸಿದ್ದವಾಗಿದ್ದರು. ಆದರೆ ರಾಮುಲು ಪತ್ನಿ ಕವಿತಾ ತೀವ್ರ ಅಸ್ವಸ್ಥರಾಗಿ ಲಿಂಗಂಪಲ್ಲಿಯಲ್ಲೇ ಕೊನೆ ಉಸಿರೆಳೆದಿದ್ದರು.
ಪತ್ನಿಯನ್ನು ಕಳೆದುಕೊಂಡ ನೋವು ಕಾಡುತ್ತಿದ್ದರೂ ಸಹ ಪತ್ನಿಯ ಅಂತ್ಯಕ್ರಿಯೆಯನ್ನು ಸ್ವಂತ ಊರಿನಲ್ಲೇ ನೆರವೇರಿಸಬೇಕೆಂದು ರಾಮುಲು ಭಾವಿಸಿದ. ಹೆಂಡತಿ ಅನಾಥಶವವಾಗಿ ಹೋಗಬಾರದು ಎಂಬುದು ಆತನ ಉದ್ದೇಶ.
ಆದರೆ ಹೆಂಡತಿ ಶವವನ್ನು 60 ಕಿ.ಮೀ ಸಾಗಿಸುವಷ್ಟು ಶಕ್ತಿ ಆತನಿಗಿರಲಿಲ್ಲ. ಬಿಡುಗಾಸು ಇಲ್ಲದ ಬಡಪಾಯಿ. ಆದರೂ ಧೃತಿಗೆಡದೇ ಭಿಕ್ಷುಕನೊಬ್ಬನ ಬಳಿ ತಳ್ಳುವ ಗಾಡಿಯನ್ನು ತೆಗೆದುಕೊಂಡು ಶವವನ್ನು ಗಾಡಿಯಲ್ಲಿ ಇಟ್ಟು ಲಿಂಗಂಪಲ್ಲಿಯಿಂದ ವಿಕಾರಾಬಾದ್ ಗೆ ಸುಮಾರು 60 ಕಿ.ಮೀ ದೂರವನ್ನು ನಡೆದುಕೊಂಡೇ ಸಾಗಿದ.
ವಿಕಾರಾಬಾದ್ ತಲುಪುತ್ತಿದ್ದಂತೆ ಇಲ್ಲಿಯ ಸ್ಥಳೀಯರು ಈ ನಿರ್ಗತಿಕನ ಅವಸ್ಥೆಗೆ ಮಮ್ಮುಲ ಮರಗಿದರು. ಆನಂತರ ಆತ ತನ್ನ ಸ್ವಂತ ಊರನ್ನು ಸೇರಿಕೊಳ್ಳಲು ಕೈಲಾದಷ್ಟು ಸಹಾಯ ಮಾಡಿದರು.
ವಿಕಾರಾಬಾದ್ ಪೋಲಿಸ್ ಠಾಣೆಯ ವೃತ್ತ ನಿರೀಕ್ಷಕ ರವಿ ಅವರು ಆತ ಊರು ಸೇರಲು ಅಗತ್ಯವಾದ ಸಹಾಯ ಮಾಡಿದರು. ಶನಿವಾರ ಸಂಜೆ ಆತ ತನ್ನ ಸ್ವಂತ ಊರಿನಲ್ಲೇ ಪತ್ನಿಯ ಅಂತ್ಯಕ್ರಿಯೆಯನ್ನು ನೇರವೇರಿಸಿ ಹೆಂಡತಿ ಅನಾಥ ಶವವಾಗಿ ಮಣ್ಣಾಗದಂತೆ ನೋಡಿಕೊಂಡ. ಹೆಂಡತಿ ಸಾವಿಗೊಂದು ಅರ್ಥ ಕಲ್ಪಿಸಿಕೊಟ್ಟ.