ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿರುಗಾಳಿ ಎಬ್ಬಿಸಿದ ಮೋದಿ 9 ಹೇಳಿಕೆ
ಲಖನೌ, ಮಾರ್ಚ್ 11: ಉತ್ತರಪ್ರದೇಶದ ವಿಧಾನಸಭೆ ಚುನಾವಣೆ ಅಕ್ಷರಶಃ ರಣಾಂಗಣವಾಗಿತ್ತು. ಚುನಾವಣೆ ಪ್ರಚಾರದ ವೇಳೆ ಮಾತಿನ ಕೂರಂಬುಗಳು ವಿನಿಮಯ ಆಗುತ್ತಲೇ ಇದ್ದವು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಹೇಳಿಕೆಗಳು ವಿಪಕ್ಷಗಳ ನಾಯಕರ ಸಿಟ್ಟನ್ನು ಮತ್ತಷ್ಟು ಹೆಚ್ಚಿಸಿದವು.
ಮೊದಲಿಗೆ ಅಷ್ಟೇನೂ ಆಕ್ರಮಣಕಾರಿಯಾಗಿ ಪ್ರಚಾರಕ್ಕೆ ಇಳಿಯದ ಮೋದಿ, ಆ ನಂತರ ಒಂದೊಂದೇ ಅಸ್ತ್ರಗಳನ್ನು ಬಳಸುತ್ತಾ ಹೋದರು. ನೋಟು ನಿಷೇಧ ನಿರ್ಧಾರ ಕೂಡ ಬಹುವಾಗಿ ಚರ್ಚೆಯಾಯಿತು. ಆ ವೇಳೆ ಅಮರ್ತ್ಯ ಸೇನ್ ಅವರನ್ನು ಉದ್ದೇಶಿಸಿ ಆಡಿದ ಮಾತು ಹಾಗೂ SCAM ಎಂದು ಅಖಿಲೇಶ್, ಮಾಯಾವತಿ ಹಾಗೂ ಸಮಾಜವಾದಿ ಪಕ್ಷವನ್ನು ಹೀಗಳೆದಿದ್ದು ಕೂಡ ಭಾರೀ ಆಕ್ರೋಶಕ್ಕೆ ಕಾರಣವಾಯಿತು.[ಉತ್ತರಪ್ರದೇಶದಲ್ಲಿ ಬಿಜೆಪಿಯ ಭರ್ಜರಿ ಗೆಲುವಿಗೆ 10 ಕಾರಣ]
ಮುಸ್ಲಿಮರ ಖಬರಸ್ತಾನ್ ಗೆ ಜಾಗವಿದೆ. ಹಿಂದೂಗಳ ಸ್ಮಶಾನಕ್ಕೆ ಜಾಗವಿಲ್ಲವೆ? ಎಂಬ ಹೇಳಿಕೆಯಂತೂ ಉತ್ತರ ಪ್ರದೇಶದ ಚುನಾವಣೆ ಪ್ರಚಾರದ ದಿಕ್ಕನ್ನೇ ಬದಲಿಸಿತು. ಒಟ್ಟಾರೆ ಇಡೀ ಚುನಾವಣೆ ಪ್ರಚಾರದಲ್ಲಿ ನರೇಂದ್ರ ಮೋದಿ ಅವರು ನೀಡಿದ ಪ್ರಮುಖ ಹೇಳಿಕೆಗಳನ್ನು ಇಲ್ಲಿ ಕೊಡಲಾಗಿದೆ.[ವಿಜಯೋತ್ಸವ ಭಾಷಣದಲ್ಲಿ ನರೇಂದ್ರ ಮೋದಿ ಟಾಪ್ 10 ಹೇಳಿಕೆಗಳು]
ಅಮರ್ತ್ಯ ಸೇನ್ ಗೆ ಟಾಂಗ್
ಬಡಕುಟುಂಬದಿಂದ ಬಂದ ವ್ಯಕ್ತಿಯೊಬ್ಬ ದೇಶದ ಪ್ರಧಾನಿಯಾಗುತ್ತಾನೆ. ದೇಶದ ಅಭಿವೃದ್ಧಿಗೆ ಕಷ್ಟಪಟ್ಟು ದುಡಿಯುತ್ತಾನೆ, ಇದು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಓದಿದ ವ್ಯಕ್ತಿಗೆ ಮತ್ತು ಹಾರ್ಡ್ ವರ್ಕ್ ಮಾಡುವ ವ್ಯಕ್ತಿಯ ನಡುವಿನ ವ್ಯತ್ಯಾಸ
ರಾಹುಲ್ ಎಳನೀರು ಹೇಳಿಕೆಗೆ ತಿರುಗೇಟು
ಬ್ರಿಟನ್ ನಲ್ಲಿ ಎಳನೀರು ಮಾರಲು ಇಚ್ಚಿಸುತ್ತೇನೆ ಎನ್ನುವ ರಾಹುಲ್ ಗಾಂಧಿ, ಉತ್ತರಪ್ರದೇಶದಲ್ಲಿ ಆಲೂಗೆಡ್ಡೆ ಫ್ಯಾಕ್ಟರಿ ಸ್ಥಾಪಿಸಬೇಕು ಎನ್ನುವ ಹೇಳಿಕೆಯನ್ನು ನೀಡುತ್ತಾರೆ. ಇದು ಕಾಂಗ್ರೆಸ್ ಪಕ್ಷದ ನಿಲುವು.
ಹಳ್ಳಿಗಳಲ್ಲಿ ಖಬರಸ್ತಾನ್ ಗೆ ಜಾಗ
"ಹಳ್ಳಿಗಳಲ್ಲಿ ಖಬರಸ್ತಾನ್ (ಮುಸ್ಲಿಮರ ಸ್ಮಶಾನ) ಗೆ ಜಾಗ ಸಿಗುತ್ತೆ ಅನ್ನೋದಾದರೆ, ಹಿಂದೂಗಳ ಸ್ಮಶಾನಕ್ಕೂ ಜಾಗ ನೀಡಬೇಕು. ರಂಜಾನ್ ನಲ್ಲಿ ವಿದ್ಯುತ್ ಬರುತ್ತೆ ಅನ್ನೋದಾದರೆ, ದೀಪಾವಳಿಯಲ್ಲೂ ಬರಬೇಕು. ಜಾತಿ-ಧರ್ಮದ ಆಧಾರದಲ್ಲಿ ಭೇದ-ಭಾವ ಮಾಡಬಾರದು"
ರೈತರ ಸಾಲ ಮನ್ನಾ
ಅಧಿಕಾರ ಕಳೆದುಕೊಳ್ಳುವ ಭಯದಲ್ಲಿ ಸಮಾಜವಾದಿ ಪಕ್ಷವು ಕಾಂಗ್ರೆಸ್ ಜತೆಗೆ ಮೈತ್ರಿ. ದೇಶವನ್ನು ಕೊಳ್ಳೆ ಹೊಡೆದ ಕಾಂಗ್ರೆಸ್ ಜತೆ ಕೈ ಜೋಡಿಸುವ ಮೂಲಕ ಸಮಾಜವಾದಿ ಸಿದ್ಧಾಂತದ ಆದರ್ಶ ಪುರುಷ ರಾಮ್ ಮನೋಹರ್ ಲೋಹಿಯಾಗೆ ಎಸ್ ಪಿ ಅವಮಾನ ಮಾಡಿದೆ. ನಾನು ಉತ್ತರಪ್ರದೇಶದ ಗ್ರಾಮೀಣ ಜನರಿಗೆ ಭಾಷೆ ಕೊಡ್ತೀನಿ: ಬಿಜೆಪಿ ಅಧಿಕಾರಕ್ಕೆ ಬಂದರೆ ರೈತರ ಎಲ್ಲ ಸಾಲವನ್ನು ಮನ್ನಾ ಮಾಡಲಾಗುತ್ತದೆ.
ಕಾಂಗ್ರೆಸ್ ನಾಯಕರ ಮೇಲೆ ನಗೆಚಟಾಕಿ
ನೀವು ಒಂದು ಬಾರಿ ಗೂಗಲ್ಗೆ ಹೋಗಿ ಹುಡುಕಿ, ಕಾಂಗ್ರೆಸ್ ನಾಯಕರ ಮೇಲಿರುವಷ್ಟು ನಗೆಚಟಾಕಿಗಳು ಬಹುಶಃ ಯಾವ ನಾಯಕರ ಮೇಲೂ ಇರುವುದಿಲ್ಲ .
ಕರ್ನಾಟಕದ ಸಚಿವರ ಪ್ರಸ್ತಾವ
ನೋಟು ನಿಷೇಧದ ಬಗ್ಗೆ ಕಾಂಗ್ರೆಸ್ ನವರು ಮಾತನಾಡ್ತೀರಿ. ಹಾಗಿದ್ದರೆ ಕರ್ನಾಟಕದ ಮಂತ್ರಿಯೊಬ್ಬರ ಮನೆಯಲ್ಲಿ 150 ಕೋಟಿ ರುಪಾಯಿ ಹೇಗೆ ಸಿಕ್ಕಿತು? ಅಂಥ ಮಂತ್ರಿಯನ್ನು ಇನ್ನೂ ಸಂಪುಟದಿಂದ ತೆಗೆದು ಹಾಕಿಲ್ಲವಲ್ಲಾ? ಅದಕ್ಕೆ ಕಾರಣ ಏನು?
ನೀವು ತಲೆತಗ್ಗಿಸುವಂಥ ಕೆಲಸ ಮಾಡಿದ್ದೀನಾ?
ಉತ್ತರ ಪ್ರದೇಶದಲ್ಲಿ ಎಷ್ಟೆಲ್ಲ ಶ್ರೀಮಂತವಾಗಿದೆ. ಆದರೆ ಇಲ್ಲಿನ ಯುವ ಜನಾಂಗಕ್ಕೆ ಉದ್ಯೋಗಾವಕಾಶಗಳು ಏಕಿಲ್ಲ? ಎರಡೂವರೆ ವರ್ಷವಾಯಿತು, ನೀವು ತಲೆತಗ್ಗಿಸುವಂಥ ಕೆಲಸ ಮಾಡಿದ್ದೀನಾ? ಆದರೆ ಉತ್ತರ ಪ್ರದೇಶಕ್ಕೆ ನಾನೆಷ್ಟೇ ಒಳ್ಳೆಯದು ಮಾಡಬೇಕು ಅಂದುಕೊಂಡರೂ ಇಲ್ಲಿರುವ ಸರಕಾರ ಅದನ್ನು ತಡೆಯುವಂಥದ್ದಾಗಿದ್ದರೆ...ದೆಹಲಿಯಿಂದ ಲಾಭ ತಲುಪಬೇಕು ಅಂದರೆ ಲಖನೌಗೆ ಬಂದು ಹೋಗಬೇಕಲ್ವೆ?
SCAM ಅಂದರೆ ಸಮಾಜವಾದಿ ಪಕ್ಷ, ಕಾಂಗ್ರೆಸ್, ಅಖಿಲೇಶ್ ಹಾಗೂ ಮಾಯಾವತಿ
SCAM ಅಂದರೆ ಸಮಾಜವಾದಿ ಪಕ್ಷ, ಕಾಂಗ್ರೆಸ್, ಅಖಿಲೇಶ್ ಹಾಗೂ ಮಾಯಾವತಿ. ಅಡೆ ತಡೆಗಳನ್ನು ಮಾಡುವ ರಾಜ್ಯ ಸರಕಾರವಿದ್ದರೆ ಅಭಿವೃದ್ಧಿ ಕಾರ್ಯಗಳು ಲಖನೌದಲ್ಲೇ ನಿಂತು ಬಿಡುತ್ತವೆ. ಇಲ್ಲಿನ ಸರಕಾರದ ಬಗ್ಗೆ ಟೀಕೆ ಮಾಡುತ್ತಿದ್ದ ಕಾಂಗ್ರೆಸ್ ಗೆ ಅವರನ್ನು ತಬ್ಬಿ ನಿಲ್ಲುವಂಥದ್ದು ರಾತ್ರೋ ರಾತ್ರಿ ಏನಾಯಿತು?
ಇಂಥ ಮೈತ್ರಿ ಮೊದಲ ಸಲ ನೋಡ್ತಿದೀನಿ
ಇಂಥ ಮೈತ್ರಿಯನ್ನು ಮೊದಲ ಸಲ ನೋಡ್ತಿದೀನಿ. ದಶಕಗಳ ಕಾಲ ಹಗಲು ರಾತ್ರಿ ಒಬ್ಬರನ್ನೊಬ್ಬರು ಹಣಿಯಲು ನೋಡುತ್ತಿದ್ದವರು ರಾತ್ರೋ ರಾತ್ರಿ ದೋಸ್ತಿಗಳಾಗಿದ್ದು ಹೇಗೆ ಅನ್ನೋದೇ ಪ್ರಶ್ನೆ. ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲಾರದವರು ಉತ್ತರಪ್ರದೇಶವನ್ನು ಏನು ರಕ್ಷಿಸುತ್ತಾರೆ.