ನೋಟು ನಿಷೇಧ ನಂತರದ 9 ಮಹತ್ವದ ಬದಲಾವಣೆಗಳು!
ತೆರಿಗೆ ದರ ಕಡಿಮೆ ಅಗುತ್ತೆ, ಚಿನ್ನದ ಮೇಲೆ ಕಣ್ಣು, ಲಾಕರ್ ಕೂಡ ಬಿಡಲ್ವಂತೆ. ಆಸ್ತಿ ಬಗ್ಗೆ ಕೂಡ ಪಟ್ಟಿ ತಯಾರಿ ಆಗ್ತಿದೆಯಂತೆ... ಅದಿರಲಿ. ಇಷ್ಟು ದಿನದಲ್ಲಿ ಸರಕಾರ ಘೋಷಿಸಿದ, ಬದಲಿಸಿದ ನಿಯಮಗಳ ಹಿನ್ನೋಟ ನೋಡಿಬರೋಣ.
ಬೆಂಗಳೂರು, ಡಿಸೆಂಬರ್ 30: ಅಪನಗದೀಕರಣದ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದು ನವೆಂಬರ್ 8ರಂದು ಅದಾದ ನಂತರ ಹಣ ಬದಲಾವಣೆ ಮಾಡಿಕೊಳ್ಳುವುದಕ್ಕೆ, ಹಣ ಬ್ಯಾಂಕ್ ನಿಂದ ತೆಗೆದುಕೊಳ್ಳುವುದಕ್ಕೆ ಮತ್ತು ಡಿಪಾಸಿಟ್ ಗೆ ನಾನಾ ನಿಯಮಗಳು ಬಂದವು. ಅರ್ಥಾತ್ ಬದಲಾವಣೆಗಳಾದವು.
ನಿರೀಕ್ಷಿತವಲ್ಲದ ನಿರ್ಧಾರಗಳು ಜನರನ್ನು ಗೊಂದಲದಲ್ಲಿ ಸಿಲುಕಿಸಿತು. ದಿನ ಟಿವಿ ಮುಂದೆ ಕೂರುವಂತಾಯಿತು. ಈಗಿದ್ದದ್ದು ಇನ್ನೊಂದು ಕ್ಷಣಕ್ಕೆ ಬದಲಾದರೆ ಎಂಬ ಆತಂಕಕ್ಕೆ ಜನರು ಒಳಗಾದರು. ಇದರ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲೂ ಅಂತೆ-ಕಂತೆ ಸುದ್ದಿ ಹರಿದಾಡುವುದು ಹೆಚ್ಚುತ್ತಲೇ ಹೋಯಿತು.
ಅದಿನ್ನೂ ನಿಂತಿಲ್ಲ. ತೆರಿಗೆ ದರ ಕಡಿಮೆ ಅಗುತ್ತೆ, ಚಿನ್ನದ ಮೇಲೆ ಕಣ್ಣು, ಲಾಕರ್ ಕೂಡ ಬಿಡಲ್ವಂತೆ. ಆಸ್ತಿ ಬಗ್ಗೆ ಕೂಡ ಪಟ್ಟಿ ತಯಾರಿ ಆಗ್ತಿದೆಯಂತೆ ಹೀಗೆ ಮೂಲ ಗೊತ್ತಿಲ್ಲದ ಸುದ್ದಿಯ ಮಹಾಪೂರ. ಅದಿರಲಿ. ಇಷ್ಟು ದಿನದಲ್ಲಿ ಸರಕಾರ ಘೋಷಿಸಿದ, ಬದಲಿಸಿದ ನಿಯಮಗಳ ಬಗ್ಗೆ ಹಿನ್ನೋಟ ನೋಡಿಬರೋಣ.
ಏಕೆಂದರೆ ಅದಾಗಲೇ ಡಿಸೆಂಬರ್ 30ನೇ ತಾರೀಖಿಗೆ ಇನ್ನು ಹತ್ತು ದಿನವಷ್ಟೇ ದೂರ ಇದ್ದೀವಿ. ಹೊಚ್ಚಹೊಸದಾಗಿ ನಿಯಮವೊಂದನ್ನು ಬದಲಿಸಿದ್ದಾರೆ. ಆದ್ದರಿಂದ ಬದಲಾದ ಒಂಬತ್ತು ನಿಯಮಗಳ ಬಗ್ಗೆ ತಿಳಿಯೋಣ.
ಹಳೇ ನೋಟುಗಳ ಜಮೆ
ಹಳೇ ನೋಟುಗಳನ್ನು ಬ್ಯಾಂಕ್ ಗೆ ಜಮೆ ಮಾಡಲು ಮೊದಲಿಗೆ ಆರ್ ಬಿಐ ಅವಕಾಶ ನೀಡಿದ್ದು ಡಿಸೆಂಬರ್ 30ರವರೆಗೆ. ಆದರೆ ಡಿಸೆಂಬರ್ 19ರಂದು ಹೊಸ ನಿಯಮ ತಂದಿತು. ಐದು ಸಾವಿರಕ್ಕಿಂತ ಹೆಚ್ಚಿನ ಮೊತ್ತವನ್ನು ಒಬ್ಬ ವ್ಯಕ್ತಿ ಒಂದೇ ಸಲ ಮಾತ್ರ ಜಮೆ ಮಾಡಬಹುದು ಅಂತಾಯಿತು. ನಿಮ್ಮ ಹತ್ತಿರ ಹಳೇ ನೋಟು ಎಷ್ಟಿದೆಯೋ ಅಷ್ಟೂ ಒಂದೇ ಸಲ ಬ್ಯಾಂಕ್ ಗೆ ಹಾಕಿ. ಇಲ್ಲದಿದ್ದರೆ ಪ್ರಶ್ನೆ ಮಾಡಬಹುದು ಮತ್ತು ಸಣ್ಣ ಪ್ರಮಾಣದ ಉಳಿತಾಯ ಖಾತೆಯಲ್ಲೂ ಹಣ ಹಾಕಲು ಅವಕಾಶ ನೀಡಲಿಲ್ಲ.
ಹಳೇ ನೋಟುಗಳ ಬದಲಾವಣೆ
ಆರಂಭದಲ್ಲಿ ಹಳೇ ನೋಟುಗಳನ್ನು ನಾಲ್ಕೂವರೆ ಸಾವಿರದವರೆಗೆ ಬದಲಾವಣೆ ಮಾಡಿಕೊಳ್ಳಬಹುದಿತ್ತು. ಆ ನಂತರ ಒಂದು ಸಲ ಮಾತ್ರ ನೋಟು ಬದಲಾವಣೆ ಮಾಡಬಹುದು ಎಂಬ ನಿಯಮ ತಂದಿತು. ಆ ನಂತರ ಬೆರಳಿಗೆ ಶಾಯಿ ಹಾಕುವ ನಿರ್ಧಾರ ಬಂತು. ಇನ್ನು ಆರ್ ಬಿಐ ನಲ್ಲಿ ಮಾತ್ರ ನೋಟು ಬದಲಿಸಿಕೊಳ್ಳಬಹುದು, ಬ್ಯಾಂಕ್ ಗಳಲ್ಲಿ ಆಗಲ್ಲ ಅಂತಾಯಿತು. ಆದರೆ ವಿದೇಶೀಯರು ಡಿಸೆಂಬರ್ 30ರವರೆಗೆ ವಾರಕ್ಕೆ 5 ಸಾವಿರದವರೆಗೆ ಹಳೇ ನೋಟು ಬದಲಿಸಬಹುದು.
ಉಪಯುಕ್ತ ಸ್ಥಳಗಳಲ್ಲಿ ಹಳೇ ನೋಟು
ನವೆಂಬರ್ 8ರಂದು ನೋಟು ನಿಷೇಧ ಘೋಷಣೆ ಮಾಡಿದಾಗ ಪೆಟ್ರೋಲ್ ಪಂಪ್, ಹಾಲಿನ ಬೂತ್ ಇತರೆಡೆಗಳಲ್ಲಿ ಎಪ್ಪತ್ತೆರಡು ಗಂಟೆ ಕಾಲ ಹಳೇ ನೋಟು ಸ್ವೀಕರಿಸುತ್ತಾರೆ ಎಂದು ತಿಳಿಸಿತು. ಆ ನಂತರ ಗಡುವು ಮತ್ತೂ 72 ಗಂಟೆ ವಿಸ್ತರಣೆಯಾಯಿತು. ಅದು ನವೆಂಬರ್ 24ರವರೆಗೆ ಮುಂದಕ್ಕೆ ಹೋಯಿತು. ಪೆಟ್ರೋಲ್ ಬಂಕ್, ಟೋಲ್ ಗಳಲ್ಲಿ ಡಿಸೆಂಬರ್ 15ರವರೆಗೆ ಹಳೇ ನೋಟು ಬಳಸಬಹುದು ಎಂದಿದ್ದ ಘೋಷಣೆಯನ್ನು ಹಿಂಪಡೆದು, ಡಿಸೆಂಬರ್ 3, 4ಕ್ಕೆ ಕೊನೆಯಾಯಿತು.
ಅಪನಗದೀಕರಣದಿಂದ ರೈತರಿಗೆ ತೊಂದರೆ ಆಗುತ್ತದೆ ಎಂಬ ಕಾರಣಕ್ಕೆ ಹಳೇ ನೋಟಿನ ಮೂಲಕ ಸರಕಾರಿ ಮಳಿಗೆಗಳಲ್ಲಿ ಬಿತ್ತನೆ ಬೀಜ ಖರೀದಿಗೆ ಅವಕಾಶ ನೀಡಲಾಯಿತು.
ಎಟಿಎಂ ಮಿತಿ
ಮೊದಲಿಗೆ ಎಟಿಎಂಗಳಲ್ಲಿ ವಿಥ್ ಡ್ರಾ ಮಿತಿ ಎರಡು ಸಾವಿರ ಇತ್ತು. ಆ ನಂತರ ಎರಡೂವರೆ ಸಾವಿರ ಆಯಿತು.
ಬ್ಯಾಂಕ್ ವಿಥ್ ಡ್ರಾ
ಮೊದಲಿಗೆ ಬ್ಯಾಂಕ್ ಗಳಲ್ಲಿ ದ್ನಕ್ಕೆ ಹತ್ತು ಸಾವಿರ, ವಾರಕ್ಕೆ ಇಪ್ಪತ್ನಾಲ್ಕು ಸಾವಿರ ವಿಥ್ ಡ್ರಾ ಮಾಡಬಹುದು ಎಂದು ನಿಯಮವಿತ್ತು. ಆ ನಂತರ ಅದನ್ನು ಇಪ್ಪತ್ನಾಲ್ಕು ಸಾವಿರ ಒಮ್ಮೆಲೆ ವಿಥ್ ಡ್ರಾ ಮಾಡಬಹುದು ಅಂತಾಯಿತು. ಚಾಲ್ತಿ ಖಾತೆದಾರರು ವಾರಕ್ಕೆ ಐವತ್ತು ಸಾವಿರ ವಿಥ್ ಡ್ರಾ ಮಾಡಬಹುದು. ಕೋ ಆಪರೇಟಿವ್ ಬ್ಯಾಂಕ್ ಗಳಲ್ಲಿ ಮಾತ್ರ ಇಪ್ಪತ್ನಾಲ್ಕು ಸಾವಿರವೇ ಮಿತಿ. ಆದರೆ ಹಳೇ ನೋಟುಗಳ ಜಮೆ ಹಾಗೂ ಹೊಸದರ ಜತೆಗೆ ವಿನಿಮಯ ಮಾಡುವಂತಿಲ್ಲ ಎಂಬ ನಿಯಮ ಆಯಿತು.
ಮದುವೆಗೆ ಹಣ ತೆಗೆಯೋ ಮಿತಿ
ಮದುವೆಗಾಗಿ ಎರಡೂವರೆ ಲಕ್ಷ ರುಪಾಯಿ ತೆಗೆಯಬಹುದು ಎಂದು ಸರಕಾರ ನಿಯಮ ಮಾಡಿತು. ಆದರೆ ಅದಕ್ಕಾಗಿ ರೂಪಿಸಿದ ನಿಯಮಗಳಲ್ಲಿದ್ದ ಗೊಂದಲವಾಯಿತು. ಆ ನಂತರ ವಧು-ವರ ಅಥವಾ ಅವರ ಯಾವುದೇ ಸಂಬಂಧಿಕರು ಎರಡೂವರೆ ಲಕ್ಷ ಹಣ ತೆಗೆದುಕೊಳ್ಳಲು ಅವಕಾಶ ನೀಡಿತು.
ಖಾತೆ ಪರಿಶೀಲನೆ
ಎರಡೂವರೆ ಲಕ್ಷ ರುಪಾಯಿವರೆಗೆ ಬ್ಯಾಂಕ್ ನಲ್ಲಿ ಜಮೆ ಮಾಡುವ ಹಣಕ್ಕೆ ಆದಾಯ ತೆರಿಗೆ ಇಲಾಖೆಯಿಂದ ಯಾವುದೇ ತನಿಖೆ ಮಾಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು. ಆ ನಂತರ ಜನ್ ಧನ್ ಖಾತೆಯಲ್ಲಿ ಮಾಡುವ ಅನುಮಾನಾಸ್ಪದ ನಗದು ಜಮೆ, ಎರಡೂವರೆ ಲಕ್ಷ ರುಪಾಯಿಗಿಂತ ಕಡಿಮೆ ಇದ್ದರೂ ಪರಿಶೀಲಿಸುವುದಾಗಿ ತಿಳಿಸಿದರು. ಇದೀಗ ಬಹಿರಂಗವಾಗಿಯೇ ಸರಕಾರ ಘೋಷಿಸಿದೆ: ಎರಡೂವರೆ ಲಕ್ಷಕ್ಕಿಂತ ಕಡಿಮೆ ಮೊತ್ತ ಜಮೆ ಮಾಡಿದ್ದರೂ ತನಿಖೆ ನಡೆಸುವ ಸಾಧ್ಯತೆ ಇದೆ.
ಮರುಮುದ್ರಣ
ನೋಟು ನಿಷೇಧದ ನಂತರ ಅದಕ್ಕೂ ಹಿಂದೆ ಚಾಲ್ತಿಯಲ್ಲಿದ್ದ ಅಷ್ಟೂ ಮೊತ್ತವನ್ನು ಪುನರ್ ಮುದ್ರಿಸಲಾಗುವುದು ಎಂದುಕೊಳ್ಳಲಾಗಿತ್ತು. ಆ ನಂತರ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ ಪ್ರಕಾರ, ಪೂರ್ಣ ಪ್ರಮಾಣದ ನೋಟನ್ನು ಮರು ಮುದ್ರಿಸುವುದಿಲ್ಲ. ಅದರ ಬದಲು ಡಿಜಿಟಲ್ ಸ್ವರೂಪದ ಹಣಕ್ಕೆ ಆದ್ಯತೆ ನೀಡಲಾಗುತ್ತದೆ.