ಈಶಾನ್ಯ ರಾಜ್ಯಗಳಲ್ಲಿ ಪ್ರವಾಹ: 85 ಮಂದಿ ಸಾವು, ಜನಜೀವನ ಅಸ್ತವ್ಯಸ್ತ
ಅಸ್ಸಾಂ, ಜುಲೈ 14 : ಈಶಾನ್ಯ ಭಾಗದ ಮೂರು ರಾಜ್ಯಗಳಲ್ಲಿ ವ್ಯಾಪಕ ಮಳೆಯಿಂದಾಗಿ ನೆರೆ ಪ್ರವಾಹದಿಂದ 58 ಜಿಲ್ಲೆಗಳಿಗೆ ಹಾನಿಯಾಗಿದ್ದು, ಸುಮಾರು 85 ಮಂದಿ ಮೃತಪಟ್ಟಿದ್ದಾರೆ ಎಂದು ಈಶಾನ್ಯ ಪ್ರದೇಶದ ಅಭಿವೃದ್ಧಿಯ ಕೇಂದ್ರ ರಾಜ್ಯ ಖಾತೆ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಕಾಜಿರಂಗದ ತುಂಬ ವನ್ಯಪ್ರಾಣಿಗಳ ಮೌನ ರೋದನ
ಅಸ್ಸಾಂ,ಅರುಣಾಚಲ ಪ್ರದೇಶ ಮತ್ತು ಮಣಿಪುರಗಳಲ್ಲಿ ಅಲ್ಲಿನ ಅಧಿಕಾರಿಗಳೊಂದಿಗೆ ನೆರೆ ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಿದ ಅವರು, ವ್ಯಾಪಕ ಮಳೆಯಿಂದ ಉಂಟಾದ ನೆರೆ ಪ್ರವಾಹದಿಂದ ಉಂಟಾದ ನಷ್ಟ ಅಪಾರವಾಗಿದ್ದು, ಪ್ರವಾಹದಿಂದ ಭೂಕುಸಿತದಿಂದ ಸುಮಾರು 80 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿದರು.
ಅಂತರಿಕ್ಷ ತಂತ್ರಜ್ಞಾನ ಮತ್ತು ಇಸ್ರೋ ತಜ್ಞರ ತಂಡವನ್ನು ಈ ಮೂರೂ ರಾಜ್ಯಗಳಲ್ಲಿ ಉಂಟಾದ ಹಾನಿ ಮತ್ತು ನಷ್ಟಗಳ ಬಗ್ಗೆ ಅಧ್ಯಯನ ನಡೆಸಲು ಬಳಸಿಕೊಳ್ಳಬಹುದು ಎಂದು ಅಧಿಕಾರಿಗಳಿಗೆ ಸಿಂಗ್ ಸಲಹೆ ನೀಡಿದ್ದಾರೆ.
ಪ್ರವಾಹದಲ್ಲಿ ಸಿಲುಕಿ ನಿರಾಶ್ರಿತರಾದವರಿಗೆ ಆಹಾರ ಮತ್ತು ಮಗುವಿನ ಆಹಾರ ಮತ್ತು ಅಗತ್ಯ ವಸ್ತುಗಳು ಸಿಗುವಂತೆ ಮಾಡಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಪ್ರವಾಹದಿಂದಾಗಿ ಮುಂದಿನ ದಿನಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡುವುದನ್ನು ತಡೆಗಟ್ಟಲು ಆರೋಗ್ಯ ಇಲಾಖೆಗೆ ಮತ್ತು ಸಂಪರ್ಕ ಮತ್ತು ಸಂವಹನಗಳಿಗಾಗಿ ದೂರಸಂಪರ್ಕ ಇಲಾಖೆಗೆ ಸೂಚಿಸಿರುವುದಾಗಿ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.