ಮೋದಿ ನಡೆಗೆ ಜೈ ಅಂದಿದ್ದಾರೆ ದೇಶದ ಶೇ 82ರಷ್ಟು ಜನ
ಬೆಂಗಳೂರು, ನವೆಂಬರ್ 15: ಸರಕಾರ ಪೇಚಿಗೆ ಸಿಲುಕಿಸಿತು ಅನ್ನೋ ಬೇಸರವೇ ಮಾಧ್ಯಮಗಳಲ್ಲಿ ಕಾಣಿಸ್ತಿದೆ. ಇದು ಯಾವುದರ ಬಗ್ಗೆ ಅಂತ ಖಂಡಿತಾ ನಿಮಗೆ ಗೊತ್ತಾಗಿರತ್ತೆ. ಹೌದು, ಇದು 500, 1000 ನೋಟು ರದ್ದು ಬಗ್ಗೆಯೇ. ಆದರೆ ಸಮೀಕ್ಷೆಯೊಂದರ ಪ್ರಕಾರ ಶೇ 82ರಷ್ಟು ಭಾರತೀಯರು ಸರಕಾರದ ನಿರ್ಧಾರದ ಪರವಾಗಿದ್ದಾರಂತೆ.
ಈ ಸಮೀಕ್ಷೆಯ ಪ್ರಕಾರ ಕಪ್ಪುಹಣವನ್ನು ನಿಯಂತ್ರಿಸಬೇಕು ಎಂಬ ವಿಚಾರದಲ್ಲಿ ಸರಕಾರ ಗಂಭೀರವಾಗಿದೆ ಎಂದು ಶೇ 84 ಮಂದಿಗೆ ಅನ್ನಿಸಿದೆ. ಆದರೆ ಎಟಿಎಂನಲ್ಲಿ ಹಣ ವಿಥ್ ಡ್ರಾ ಮಾಡುವುದಕ್ಕೆ ವಿಧಿಸಿರುವ ಮಿತಿಯ ಬಗ್ಗೆ ಅಸಮಾಧಾನವಿದೆ. ಈ ಸಮೀಕ್ಷೆ ಕೈಗೊಂಡವರು ಇನ್ ಶಾರ್ಟ್ಸ್ ನ್ಯೂಸ್ ಅಪ್ಲಿಕೇಷನ್ ಹಾಗೂ ಜಾಗತಿಕ ಮಟ್ಟದ ಮಾರುಕಟ್ಟೆ ಹಾಗೂ ಅಭಿಪ್ರಾಯ ಸಂಶೋಧನಾ ತಜ್ಞರ 'ಐಪಿಎಸ್ ಒಎಸ್'.[ಗಾಂಧಿನಗರದಲ್ಲಿ ಮೋದಿ ತಾಯಿಯಿಂದ ನೋಟು ಎಕ್ಸ್ ಚೇಂಜ್]
ದೇಶದ ಜನರ ನಾಡಿ ಮಿಡಿತ ತಿಳಿಯುವಂಥ ಈ ಸಮೀಕ್ಷೆಯನ್ನು ಪ್ರಧಾನಿ ನೋಟು ರದ್ದು ನಿರ್ಧಾರ ಘೋಷಿಸಿದ ನಂತರ ನವೆಂಬರ್ 8, 9ರಂದು ಮಾಡಲಾಗಿದೆ. ಈ ಸಮೀಕ್ಷೆಯಲ್ಲಿ ಐದು ಲಕ್ಷ ಮಂದಿ ಪಾಲ್ಗೊಂಡಿದ್ದರು. ಆ ಪೈಕಿ 2,70,000ದಷ್ಟು ಮಂದಿ ಅಪ್ಲಿಕೇಷನ್ ಬಳಕೆದಾರರು.
'ಈ ಸಮೀಕ್ಷೆಯಲ್ಲಿ ತುಂಬ ಸ್ಪಷ್ಟವಾಗಿ ಗೊತ್ತಾಗುತ್ತೆ: ಬಹುತೇಕರು ನೋಟು ರದ್ದು ನಿರ್ಧಾರಕ್ಕೆ ಜೈ ಅಂದಿದ್ದಾರೆ. ಕಪ್ಪು ಹಣಕ್ಕೆ ತಡೆಯೊಡ್ಡಬೇಕು, ತೆರಿಗೆ ಕದಿಯೋರನ್ನು ಬಲಿ ಹಾಕಬೇಕು ಎಂಬ ಸರಕಾರದ ಈ ತಂತ್ರಗಾರಿಕೆ ನಡೆಗೆ ಯುವ ಸಮುದಾಯ ಹಾಗೂ ನಗರ ಪ್ರದೇಶಗಳಲ್ಲಿ ಭಾರೀ ಉತ್ತಮ ಸ್ಪಂದನೆ ಇದೆ' ಎಂದು ಐಪಿಎಸ್ ಒಎಸ್'ನ ಭಾರತದ ಸಿಇಒ ಅಮಿತ್ ಅದರ್ಕರ್ ಹೇಳಿದ್ದಾರೆ.[ಎಟಿಎಂಗಳಲ್ಲಿ ಶೀಘ್ರ ರೂ.50 ರೂ.20ರೂ. ನೋಟುಗಳು]
ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದವರ ಪೈಕಿ ಶೇ 80ರಷ್ಟು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ನವದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ, ಕೋಲ್ಕತ್ತಾ, ಪುಣೆ, ಹೈದರಾಬಾದ್, ಅಹಮದಾಬಾದ್, ಚಂಡೀಗಢ ಮತ್ತು ಲಖನೌದವರು.