ಐವತ್ತು ಲಕ್ಷ ಕೇಂದ್ರ ಸರಕಾರಿ ನೌಕರರಿಗೆ ಬಂಪರ್
ಕೇಂದ್ರ ಸರಕಾರಿ ನೌಕರರ ಭತ್ಯೆಗಳಿಗೆ ಸಂಬಂಧಿಸಿದಂತೆ ಏಳನೇ ವೇತನ ಆಯೋಗ ಮಾಡಿದ್ದ ಶಿಫಾರಸುಗಳಿಗೆ ಬುಧವಾರ ಸಂಫುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ಎಎನ್ ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಬಗ್ಗೆ ಇದಕ್ಕೂ ಹಿಂದೆ ಮಾಡಿದ್ದ ವರದಿ ಇಲ್ಲಿದೆ.
*****
ನವದೆಹಲಿ, ಜೂನ್ 28: ಮೂರು ರಾಷ್ಟ್ರಗಳ ಪ್ರವಾಸ ಮುಗಿಸಿ ಭಾರತಕ್ಕೆ ಹಿಂತಿರುಗಿದ ಪ್ರಧಾನಿ ನರೇಂದ್ರ ಮೋದಿ ಅವರ ತೀರ್ಮಾನಕ್ಕಾಗಿ ಐವತ್ತು ಲಕ್ಷ ಕೇಂದ್ರ ಸರಕಾರಿ ನೌಕರರು ಉಸಿರು ಬಿಗಿ ಹಿಡಿದು ಕಾಯುತ್ತಿದ್ದಾರೆ. ಭತ್ಯೆಗಳ ವಿಚಾರದಲ್ಲಿ ಬುಧವಾರ ಸಿಹಿ ಸುದ್ದಿಯನ್ನು ನಿರೀಕ್ಷಿಸುತ್ತಿದ್ದಾರೆ.
55 ಲಕ್ಷ ನೌಕರರು ಮತ್ತು ಪಿಂಚಣಿದಾರರಿಗೆ ಸಂಬಳ ಏರಿಕೆ
ನರೇಂದ್ರ ಮೋದಿ ನೇತೃತ್ವದ ಸಂಪುಟ ಸಭೆ ಬುಧವಾರ ಸೇರಲಿದೆ. ಏಳನೇ ವೇತನ ಆಯೋಗದಿಂದ ಸರಕಾರಿ ನೌಕರರಿಗೆ ಆದ ಪರಿಷ್ಕೃತ ಭತ್ಯೆ ಸ್ವರೂಪದ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಸಂಪುಟ ಸಭೆಯ ಮುಂದೆ ಹಣಕಾಸು ಸಚಿವ ಅರುಣ್ ಜೇಟ್ಲಿ ವರದಿಯನ್ನು ಇಡಲಿದ್ದಾರೆ.
ಹಲವು ವಿಚಾರಗಳ ಜತೆಗೆ ಬಾಡಿಗೆ ಭತ್ಯೆ ಬಗ್ಗೆ ಕೂಡ ಚರ್ಚೆಯಾಗಲಿದೆ. ಕೆಲವು ವರದಿಗಳ ಪ್ರಕಾರ, ಮೂರು ರಾಷ್ತ್ರಗಳ ಪ್ರವಾಸಕ್ಕೆ ತೆರಳುವ ಮುನ್ನವೇ ಪ್ರಧಾನಿ ನರೇಂದ್ರ ಮೋದಿ ಅವರು ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿದ್ದರು. ಮತ್ತು ಭತ್ಯೆ ವಿಚಾರವಾಗಿ ಶೀಘ್ರವೇ ಘೋಷಣೆ ಮಾಡಬೇಕು. ಇನ್ನು ತಡ ಮಾಡಬಾರದು ಎಂದು ತಿಳಿಸಿರುವುದಾಗಿ ಸುದ್ದಿ ಆಗಿದೆ.