ಯೋಧರ ತಿರುಗೇಟು: 7 ಪಾಕಿಸ್ತಾನಿ ಸೈನಿಕರ ಸಾವು
ಪಾಕಿಸ್ತಾನ ಮಾಡಿದ ಅಪ್ರಚೋದಿತ ದಾಳಿಗೆ ತಕ್ಕ ತಿರುಗೇಟು ನೀಡಿರುವ ಭಾರತ 7 ಪಾಕಿಸ್ತಾನ ಯೋದರನ್ನು ಭಾನುವಾರ ಸದೆಬಡೆದಿದೆ.
ಶ್ರೀನಗರ, ನವೆಂಬರ್, 14: ಗಡಿರೇಖೆಯಲ್ಲಿ ಪಾಕಿಸ್ತಾನಿ ಸೈನಿಕರು ನಡೆಸಿದ ಅಪ್ರಚೋದಿತ ದಾಳಿಗೆ ಭಾರತೀಯ ಯೋಧರು ತಕ್ಕ ಪ್ರತ್ಯುತ್ತರ ನೀಡಿದ್ದು, 7 ಪಾಕಿಸ್ತಾನಿ ಸೈನಿಕರನ್ನು ಹತ್ಯೆ ಮಾಡಿದ್ದಾರೆ.
ಭಾನುವಾರ ರಾತ್ರಿ ಪಾಕಿಸ್ತಾನಿ ಸೈನಿಕರು ದಾಳಿ ನಡೆಸಿದ್ದು, ಅವರಿಗೆ ತಿರುಗೇಟು ನೀಡಲು ಭಾರತಿಯ ಸೈನಿಕರು ಗುಂಡಿನ ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ 7 ಪಾಕಿಸ್ತಾನಿ ಸೈನಿಕರು ಮೃತಪಟ್ಟಿದ್ದಾರೆ ಎಂದು ಸಾರ್ವಜನಿಕ ಸಂಪರ್ಕ ಮತ್ತು ಆಂತರಿಕ ಸೇವಾ ಸಂಸ್ಥೆ (ISPR) ಸ್ಪಷ್ಟಪಡಿಸಿದೆ.
ಗಡಿರೇಖೆಯಲ್ಲಿರುವ ಭಿಂಬರ್ ಪ್ರದೇಶದಲ್ಲಿ ಪಾಕಿಸ್ತಾನಿ ಸೈನಿಕರು ದಾಳಿ ನಡೆಸಿದ್ದಾರೆ ಎಂದು ಸಂಸ್ಥೆ ತಿಳಿಸಿದೆ. ಉರಿ ಸೇನಾ ನೆಲೆ ಮೇಲೆ ಉಗ್ರರು ನಡೆಸಿದ ದಾಳಿಗೆ ಪ್ರತಿಯಾಗಿ ಭಾರತ ಸರ್ಜಿಕಲ್ ದಾಳಿ ನಡೆಸಿದಾಗಿನಿಂದ ಒಟ್ಟು 286 ಬಾರಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ದಾಳಿ ಮಾಡಿದೆ.
ಪಾಕಿಸ್ತಾನದ ಏಳು ಸೈನಿಕರು ಮೃತಪಟ್ಟಿರುವ ಬಗ್ಗೆ ಜಿಯೋ ಟಿವಿ ವರದಿ ಮಾಡಿದೆ.
ಪಾಕಿಸ್ತಾನದ ದಾಳಿ ಮಾಡಿದರೆ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಿ ಭಾರತ ಸರ್ಕಾರವೂ ಸಹ ಯೋಧರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ.
ಅಷ್ಟೇ ಅಲ್ಲದೇ ಗಡಿಯಲ್ಲಿ ನುಸುಳಲು ಯತ್ನಿಸುವ ಉಗ್ರರನ್ನೂ ಸಹ ಸದೆಬಡಿಯಿರಿ ಎಂದು ಸೇನೆಗೆ ಸೂಚನೆ ನೀಡಲಾಗಿದೆ.
ಇನ್ನು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಮುಖ್ಯಸ್ಥ ಬುರ್ಹಾನ್ ವಾನಿ ಹತ್ಯೆ ನಡೆದ ನಂತರ ಕಣಿವೆ ರಾಜ್ಯ ಹೊತ್ತಿಉರಿಯುತ್ತಿದ್ದು, ಕಣಿವೆಯಲ್ಲಿ ಉಗ್ರರ ನುಸುಳುವಿಕೆಯೂ ಹೆಚ್ಚಾಗಿದೆ.