ಸನ್ಯಾಸಿನಿ ಮೇಲೆ ಅತ್ಯಾಚಾರ ಮಾಡಿದ್ದವರ ಬಂಧನ
ಕೋಲ್ಕತ್ತಾ, ಮಾ.15: ಕ್ರೈಸ್ತ ಸನ್ಯಾಸಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಶನಿವಾರ ಬೆಳಗ್ಗೆ ರಾಣಾಘಡ್ ಜಿಲ್ಲೆಯಲ್ಲಿ ಡಕಾಯಿತರ ಗುಂಪೊಂದು ಚರ್ಚ್ಗೆ ನುಗ್ಗಿ 71 ವರ್ಷದ ಸನ್ಯಾಸಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿತ್ತು. ಅಲ್ಲದೆ, ಚರ್ಚ್ನಲ್ಲಿದ್ದ ನಗದು, ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿತ್ತು.
ತಕ್ಷಣವೇ ಕಾರ್ಯನಿರತರಾದ ಪೊಲೀಸರು ಶನಿವಾರ ಸಂಜೆಯೇ ಇಬ್ಬರನ್ನು ಬಂಧಿಸಿದ್ದರು. ಇಂದು ಮುಂಜಾನೆ ಮತ್ತೆ ಮೂವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಸಿಸಿಟಿವಿಯಲ್ಲಿ ದಾಖಲಾದ ದೃಶ್ಯಾವಳಿಗಳನ್ನು ಆಧರಿಸಿ ಶಂಕಿತರನ್ನು ಬಂಧಿಸಲಾಗಿದ್ದು, ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.[ಅತ್ಯಾಚಾರಿ ಬೆತ್ತಲೆಗೊಳಿಸಿ ಕೊಂದು ಹಾಕಿದ 'ನಾಗಾ'ಗಳು]
ಆರು ಮಂದಿ ಇದ್ದ ಡಕಾಯಿತರ ತಂಡ ಚರ್ಚ್ ಸಮೀಪವಿದ್ದ ಕಾನ್ವೆಂಟ್ನ ಕಿಟಕಿ ಗಾಜುಗಳನ್ನು ಪುಡಿಪುಡಿ ಮಾಡಿ ನಂತರ ಮೇರಿಮಾತೆ ವಿಗ್ರಹವನ್ನು ಧ್ವಂಸ ಮಾಡಿತ್ತು. ಚರ್ಚ್ನಲ್ಲಿದ್ದ ಸನ್ಯಾಸಿನಿ ಮೇಲೆ ಅತ್ಯಾಚಾರ ನಡೆಸಿ ನಗದು ಮತ್ತು ಆಭರಣ ದೋಚಿಕೊಂಡು ಪರಾರಿಯಾಗಿತ್ತು.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಗಳ ಸುಳಿವು ನೀಡಿದವರಿಗೆ ಒಂದು ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದರು. ಇದೊಂದು ಅಮಾನವೀಯ ಘಟನೆಯಾಗಿದೆ. ಇಂತಹ ಪ್ರಕರಣ ಸಹಿಸಲು ಸಾಧ್ಯವೇ ಇಲ್ಲ. ಆರೋಪಿಗಳ ಪತ್ತೆಗಾಗಿ ವಿಶೇಷ ತನಿಖಾ ತಂಡ ರಚನೆ ಹಾಗೂ ಸಿಐಡಿ ತನಿಖೆಗೆ ಆದೇಶ ಮಾಡುವುದಾಗಿ ತಿಳಿಸಿದ್ದರು.[ವಿಡಿಯೋ ನೋಡಿ, ಅತ್ಯಾಚಾರಿಗಳನ್ನು ಹಿಡಿದುಕೊಡಿ]
ಪಕ್ಕದ ಶಾಲೆಯ ಸೆಕ್ಯೂರಿಟಿ ಗಾರ್ಡ್ಗೆ ಹಲ್ಲೆ ಮಾಡಿ ಈ ದರೋಡೆಕೋರರು ಇಲ್ಲಿ ನುಸುಳಿದ್ದರು. ಅಲ್ಲದೆ, ಮಕ್ಕಳ ಶಾಲಾ ಫೀಸ್ ಸೇರಿದಂತೆ ಒಟ್ಟು 8 ರಿಂದ 9 ಲಕ್ಷ ರೂಪಾಯಿ ದೋಚಿಕೊಂಡು ಬಂದಿದ್ದವರೀಗ ಪೊಲೀಸರ ಅತಿಥಿಯಾಗಿದ್ದಾರೆ.