ದಾವೂದ್ ಗ್ಯಾಂಗಿನ ನಾಲ್ವರು ಶೂಟರ್ ಗಳು ಗುಜರಾತ್ ಗೆ ಬಂದಿದ್ದೇಕೆ?
ಜಾಮ್ ನಗರದ ಉದ್ಯಮಿ ಹಾಗೂ ಇತರ 10 ವ್ಯಕ್ತಿಗಳನ್ನು ಕೊಲ್ಲಲು ಪಾಕಿಸ್ತಾನದಲ್ಲಿರುವ ದಾವೂದ್ ನ ಸಹೋದರ ಅನೀಸ್ ಅವರಿಂದ ಸುಪಾರಿ ಪಡೆದಿದ್ದ ಶೂಟರ್ ಗಳು.
ರಾಜ್ ಕೋಟ್, ಫೆಬ್ರವರಿ 25: ಕುಖ್ಯಾತ ಭೂಗತ ದೊರೆ ದಾವೂದ್ ಇಬ್ರಾಹೀಂ ಗ್ಯಾಂಗ್ ನ ನಾಲ್ವರು ಶೂಟರ್ ಗಳನ್ನು ಗುಜರಾತ್ ಪೊಲೀಸರು ಶನಿವಾರ ಬಂಧಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಈ ನಾಲ್ವರೂ ಶೂಟರ್ ಗಳು ಜಮ್ನಾನಗರ್ ನಲ್ಲಿರುವ ಉದ್ಯಮಿ ಒಬ್ಬರನ್ನು ಕೊಲೆ ಮಾಡಲು ಬಂದಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಬಂಧಿತರಲ್ಲಿ ಪ್ರಮುಖ ಆರೋಪಿಯಾಗಿರುವವ ಹೆಸರು ರಾಮ್ ದಾಸ್ ರಹಾನೆ ಎಂದು ಹೇಳಲಾಗಿದೆ. ಆತನು ಉದ್ಯಮಿಯನ್ನು ಕೊಲ್ಲಲು ತನಗೆ ಸಹಾಯಕ್ಕಾಗಿ ಇತರ ಮೂವರನ್ನು ತನ್ನೊಂದಿಗೆ ರಾಜ್ ಕೋಟ್ ಗೆ ಕರೆತಂದಿದ್ದ ಎನ್ನಲಾಗಿದೆ. ಈ ನಾಲ್ವರೂ ಬಸ್ ನಲ್ಲಿ ರಾಜ್ ಕೋಟ್ ಗೆ ಆಗಮಿಸುತ್ತಿದ್ದಾಗ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ಇವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಾಥಮಿಕ ವಿಚಾರಣೆಯ ವೇಳೆಯ ಪಾಕಿಸ್ತಾನದಲ್ಲಿರುವ ದಾವೂದ್ ಇಬ್ರಾಹೀಂನ ಸಹೋದರ ಅನೀಸ್ ಕಳುಹಿಸಿದ್ದಾಗಿ ಶೂಟರ್ ಗಳನ್ನು ಒಪ್ಪಿಕೊಂಡಿದ್ದಾರೆಂದು ಪೊಲೀಸರು ಹೇಳಿದ್ದಾರೆ.
ವಿಚಾರಣೆ ವೇಳೆ, ಉದ್ಯಮಿಯನ್ನು ಕೊಲ್ಲಲು ತಮಗೆ 10 ಲಕ್ಷ ರು. ಸುಪಾರಿಯನ್ನು ನೀಡಿರುವುದಾಗಿ ರಾಮ್ ದಾಸ್ ರಹಾನೆ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪಾಕಿಸ್ತಾನದಲ್ಲೇ ನೆಲೆಸಿರುವ ದಾವೂದ್ ಇಬ್ರಾಹೀಂ ಇತ್ತೀಚೆಗೆ ತನ್ನ ಅಸ್ವಸ್ಥತೆಯಿಂದ ತನ್ನ ಭೂಗತ ಜಗತ್ತಿನ ಕಾರುಬಾರು ನಡೆಸಲು ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಆ ಎಲ್ಲಾ ವ್ಯವಹಾರಗಳನ್ನೂ ಆತನ ಸಹೋದರ ಅನೀಸ್ ನೋಡಿಕೊಳ್ಳುತ್ತಿದ್ದಾನೆ. ಹಾಗಾಗಿ, ಆತನಿಂದಲೇ ನೇರವಾಗಿ ತಾವು ಈ ಕಾಂಟ್ರಾಕ್ಟ್ ಒಪ್ಪಿಕೊಂಡಿದ್ದಾರೆನ್ನಲಾಗಿದೆ.
ರಾಮ್ ದಾಸ್ ರಾಹಾನೆ, ಡಿ- ಕಂಪನಿಯಲ್ಲಿ (ದಾವೂದ್ ಗ್ಯಾಂಗ್) ಕಾಂಟ್ರ್ಯಾಕ್ಟ್ ಕಿಲ್ಲರ್ ಆಗಿದ್ದು, ಈತನ ವಿರುದ್ಧ ಮಹಾರಾಷ್ಟ್ರದಲ್ಲಿ ಹಲವಾರು ಪ್ರಕರಣಗಳು ದಾಖಲಾಗಿವೆ.