ಕಾಶ್ಮೀರದಲ್ಲಿ ಉಗ್ರರದಾಳಿ : ಮೂವರು ಯೋಧರು ಹುತಾತ್ಮ
ಶ್ರೀನಗರ, ಆಗಸ್ಟ್ 17 : ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಉಗ್ರರ ದಾಳಿ ನಡೆದಿದೆ. ಇಬ್ಬರು ಯೋಧರು ಸೇರಿದಂತೆ ಮೂವರು ಈ ದಾಳಿಯಲ್ಲಿ ಹುತಾತ್ಮರಾಗಿದ್ದು, ಐವರು ಯೋಧರು ಗಾಯಗೊಂಡಿದ್ದಾರೆ.
ಬುಧವಾರ ಮುಂಜಾನೆ ಬಾರಾಮುಲ್ಲಾದಲ್ಲಿ ಪೊಲೀಸರ ವಾಹನದ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ಮುಂದುವರೆದಿದೆ. ಎಷ್ಟು ಜನ ಉಗ್ರರಿದ್ದಾರೆ? ಎಂಬುದು ಇನ್ನೂ ಖಚಿತವಾಗಿಲ್ಲ.
ಪೊಲೀಸರ ವಾಹನದ ಮೇಲೆ ಬುಧವಾರ ಮುಂಜಾನೆ 2.30ರ ಸುಮಾರಿಗೆ ಉಗ್ರರು ದಾಳಿ ನಡೆಸಿದರು. ಇದರಿಂದಾಗಿ ಒಬ್ಬರು ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದರು. ನಂತರ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದು, ಐವರು ಗಾಯಗೊಂಡಿದ್ದಾರೆ. ಪೊಲೀಸರ ವಾಹನವೂ ಬೆಂಕಿಗೆ ಆಹುತಿಯಾಗಿದೆ.
ಈ ದಾಳಿಯ ಬಳಿಕ ಅಡಗಿ ಕುಳಿತ ಉಗ್ರರನ್ನು ಹಿಡಿಯಲು ಕಾರ್ಯಾಚರಣೆ ಆರಂಭಿಸಲಾಗಿದೆ. ಯೋಧರು ಮತ್ತು ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಾಶ್ಮೀರದಲ್ಲಿ ಈಗಾಗಲೇ ಗಲಭೆ ನಡೆಯುತ್ತಿದ್ದು, ಇದರ ಲಾಭವನ್ನು ಪಡೆದುಕೊಳ್ಳಲು ಉಗ್ರರು ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕೇಂದ್ರ ಸರ್ಕಾರ ಘಟನೆ ಬಗ್ಗೆ ಹಿತಿಯ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದೆ.