ಕರ್ನೂಲ್ ಆಸ್ಪತ್ರೆಯಲ್ಲಿ ವಿದ್ಯುತ್ ಕಡಿತ, 12 ತಾಸಿನಲ್ಲಿ 20 ಸಾವು
ಕರ್ನೂಲ್, ಜೂನ್ 23: ಹನ್ನೆರಡು ಗಂಟೆಯ ವಿದ್ಯುತ್ ಕಡಿತದ ವೇಳೆ ಎಂಟು ಮಕ್ಕಳು ಸೇರಿದಂತೆ ಇಪ್ಪತ್ತು ರೋಗಿಗಳು ಸಾವನ್ನಪ್ಪಿದ ಘಟನೆ ಕರ್ನೂಲ್ ಸರಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಪ್ರತಿ ಹಂತದಲ್ಲಿನ ಬೇಜವಾಬ್ದಾರಿ ಇಪ್ಪತ್ತು ಪ್ರಾಣಗಳನ್ನು ಬಲಿ ತೆಗೆದುಕೊಂಡಿದೆ. ಎರಡು ದಿನದ ಅವಧಿಯಲ್ಲಿ ತಲಾ ಹತ್ತರಂತೆ ಇಪ್ಪತ್ತು ಮಂದಿ ಜೀವ ಕಳೆದುಕೊಂಡಿದ್ದಾರೆ.
ಬುಧವಾರ ರಾತ್ರಿ ಏಳು ಗಂಟೆ ಹೊತ್ತಿದೆ ಈ ಆಸ್ಪತ್ರೆಯಲ್ಲಿ ವಿದ್ಯುತ್ ಕಡಿತವಾಗಿದ್ದು ಗುರುವಾರ ಬೆಳಗ್ಗೆವರೆಗೆ ಸರಿಹೋಗಿಲ್ಲ. ಇಂಥ ಸಂದಿಗ್ಡ ಸ್ಥಿತಿಯನ್ನು ರೋಗಿಗಳು ಅನುಭವಿಸುವಾಗ ಆಸ್ಪತ್ರೆಯಲ್ಲಿ ಹಿರಿಯ ವೈದ್ಯರಾಗಲೀ, ಸ್ಥಾನೀಕ ವೈದ್ಯಾಧಿಕಾರಿಯಾಗಲೀ ಇರಲಿಲ್ಲ. ಈ ವೇಳೆ ಎಂಟು ಮಕ್ಕಳು, ಇಬ್ಬರು ಮಹಿಳೆಯರೂ ಸೇರಿ ಇಪ್ಪತ್ತು ಮಂದಿ ಬಡವರ ಜೀವ ಬಲಿಯಾಗಿದೆ.
ಇದೀಗ ಈ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದೆ. ಸ್ಥಳೀಯ ವರದಿಗಳ ಪ್ರಕಾರ, ಪೊಲೀಸ್ ಔಟ್ ಪೋಸ್ಟ್ ನ ಸಿಬ್ಬಂದಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿರುವುದರಿಂದ ಆದ ಅನಾಹುತವಿದು. ಹೈಟೆನ್ಷನ್ ವಿದ್ಯುತ್ ತಂತಿಗೆ ವೈಯರ್ ಸಿಕ್ಕಿಸಿ, ಸಂಪರ್ಕ ಪಡೆಯುವ ವೇಳೆ ಆಸ್ಪತ್ರೆಯಲ್ಲಿ ವಿದ್ಯುತ್ ಕಡಿತವಾಗಿದೆ.
ಶಿವಮೊಗ್ಗದಲ್ಲಿ ಎಕ್ಸ್ ರೇ ಕೋಣೆವರೆಗೆ ಪತಿಯ ಕಾಲು ಹಿಡಿದು ಎಳೆದೊಯ್ದ ಪತ್ನಿ
ಆದರೆ, ಆಸ್ಪತ್ರೆ ಸಿಬ್ಬಂದಿ ಪ್ರಕಾರ, ಲೈನ್ ಮ್ಯಾನ್ ಗೆ ಈ ಬಗ್ಗೆ ಸುದ್ದಿ ಮುಟ್ಟಿಸಿದರೂ ಅದಕ್ಕೆ ಸ್ಪಂದಿಸಿಲ್ಲ. "ನಮ್ಮ ಎಲ್ಲ ಪ್ರಯತ್ನವನ್ನೂ ಮಾಡಿದೆವು.. ಗುರುವಾರ ಬೆಳಗ್ಗೆವರೆಗೆ ಯಾವ ಲೈನ್ ಮ್ಯಾನ್ ಸಿಗಲಿಲ್ಲ. ಆದರೆ ಕೆಲವರು ರಾತ್ರಿ ವೇಳೆ ವಿದ್ಯುತ್ ಕಂಬ ಏರಲು ನಿರಾಕರಿಸಿದರು" ಎಂದಿದ್ದಾರೆ ಆಸ್ಪತ್ರೆ ಸೂಪರಿಂಟೆಂಡೆಂಟ್ ಜೆ ವೀರಾಸ್ವಾಮಿ.
ಯಾವಾಗ ಜೀವ ಹಾನಿ ಸಂಭವಿಸಿತೋ ಆಗ ಒಬ್ಬರು ಮತ್ತೊಬ್ಬರನ್ನು ಜರಿಯುವುದು ಆರಂಭವಾಗಿದೆ. ಆಸ್ಪತ್ರೆಯವರು ಪೊಲೀಸ್ ಔಟ್ ಪೋಸ್ಟ್ ನವರನ್ನು ಜವಾಬ್ದಾರಿ ಮಾಡಿದ್ದಾರೆ. ಇದೀಗ ಆಸ್ಪತ್ರೆಯಲ್ಲಿ ಮತ್ತೆ ಅಂಥ ಸ್ಥಿತಿ ಎದುರಾಗದಂತೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.