ಗುಜರಾತ್: ಸರ್ಕಾರಿ ಹುದ್ದೆ ತೊರೆದ ನಕಲಿ ಎನ್ ಕೌಂಟರ್ ಆರೋಪಿಗಳು
ಇಶ್ರತ್ ಜಹಾನ್ ಎನ್ ಕೌಂಟರ್ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದರೂ ಗುಜರಾತ್ ಪೊಲೀಸ್ ಇಲಾಖೆಯಲ್ಲಿ ದೊಡ್ಡ ಹುದ್ದೆ ಹೊಂದಿದ್ದ ಇಬ್ಬರು ನಿವೃತ್ತ ಪೊಲೀಸ್ ಅಧಿಕಾರಿಗಳಿಂದ ತಮ್ಮ ಹುದ್ದೆಗಳಿಗೆ ರಾಜಿನಾಮೆ.
ನವದೆಹಲಿ, ಆಗಸ್ಟ್ 17: 2004ರಲ್ಲಿ ಗುಜರಾತ್ ನಲ್ಲಿ ನಡೆದಿದ್ದ ಇಶ್ರತ್ ಜಹಾನ್ ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಆರೋಪಿಗಳಾಗಿರುವ ಗುಜರಾತ್ ರಾಜ್ಯದ ನಿವೃತ್ತ ಪೊಲೀಸ್ ಅಧಿಕಾರಿಗಳಾದ ಎನ್.ಕೆ. ಅಮಿನ್ ಹಾಗೂ ತರುಣ್ ಬಾರೋತ್ ಅವರು ಸದ್ಯಕ್ಕೆ ತಾವು ಗುಜರಾತ್ ಸರ್ಕಾರ ನೀಡಿರುವ ತಾತ್ಕಾಲಿಕ ಹುದ್ದೆಗಳಿಗೆ ರಾಜಿನಾಮೆ ಸಲ್ಲಿಸುವುದಾಗಿ ಸುಪ್ರೀಂ ಕೋರ್ಟ್ ಗೆ ತಿಳಿಸಿದ್ದಾರೆ.
ಗುಜರಾತ್ ಪೊಲೀಸ್ ಇಲಾಖೆಯಿಂದ ನಿವೃತ್ತಿಯಾಗಿದ್ದರೂ, ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಆರೋಪಿತರಾಗಿರುವ ಅಮಿನ್ ಹಾಗೂ ಬಾರೋತ್ ಅವರನ್ನು ಒಪ್ಪಂದದ ಆಧಾರದ ಮೇಲೆ ಗುಜರಾತ್ ಸರ್ಕಾರ ಪುನಃ ಕೆಲಸಕ್ಕೆ ನೇಮಿಸಿಕೊಂಡಿತ್ತು. ಅವರಿಗೆ ಪ್ರಮುಖ ಹುದ್ದೆಗಳಲ್ಲಿ ಕೂರಿಸಲಾಗಿತ್ತು. ಇದನ್ನು, ಗುಜರಾತ್ ಪೊಲೀಸ್ ಇಲಾಖೆಯ ಮತ್ತೊಬ್ಬ ನಿವೃತ್ತ ಅಧಿಕಾರಿ ರಾಹುಲ್ ಶರ್ಮಾ ಅವರು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಕ್ರಿಮಿನಲ್ ಪ್ರಕರಣದಲ್ಲಿ ಜಾಮೀನು ಪಡೆದು ಬಂದಿರುವ ಈ ಇಬ್ಬರನ್ನು ಮತ್ತೆ ಸರ್ಕಾರಿ ಹುದ್ದೆಗೆ ನೇಮಿಸಿದ್ದನ್ನು ಅವರು ಪ್ರಶ್ನಿಸಿದ್ದರು.
ತಾತ್ಕಾಲಿಕ ಒಪ್ಪಂದದ ಆಧಾರದಲ್ಲಿ ಅಮಿನ್ ಅವರನ್ನು ತಾಪಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಿಸಿದ್ದರೆ, ಬಾರೋತ್ ಅವರನ್ನು ರೈಲ್ವೇಸ್ ನ ಉಪ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ನೇಮಿಸಲಾಗಿತ್ತು.
ಇದರ ವಿರುದ್ಧ ರಾಹುಲ್ ಅವರು ನ್ಯಾಯಾಲಯದ ಮೆಟ್ಟಿಲೇರಿದ ಮೇಲೆ ಈ ಬಗ್ಗೆ ಗುಜರಾತ್ ಸರ್ಕಾರಕ್ಕೆ ಸೂಚನೆ ನೀಡಿದ್ದ ಸುಪ್ರೀಂ ಕೋರ್ಟ್, ಈ ನೇಮಕಾತಿಗಳ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಹೇಳಿತ್ತು.
ಪ್ರಕರಣದ ಗಂಭೀರತೆ ಅರಿತ ಈ ಇಬ್ಬರೂ ಪೊಲೀಸ್ ಅಧಿಕಾರಿಗಳು ಸ್ವಯಂ ಪ್ರೇರಿತರಾಗಿ ಸುಪ್ರೀಂ ಕೋರ್ಟ್ ಗೆ ತಮ್ಮ ಹೇಳಿಕೆ ಸಲ್ಲಿಸಿ, ತಾವು ಹೊಂದಿರುವ ಸದ್ಯದ ಸರ್ಕಾರಿ ಹುದ್ದೆಗಳನ್ನು ತೊರೆಯುವುದಾಗಿ ಹೇಳಿದ್ದಾರೆ.
ಅಮಿನ್ ಅವರು ಸೊಹ್ರಾಬುದ್ದೀನ್ ಶೇಖ್ ಹಾಗೂ ಇಶ್ರತ್ ಜಹಾನ್ ಅವರ ನಕಲಿ ಎನ್ ಕೌಂಟರ್ ಗಳಲ್ಲಿ ಸಿಲುಕಿದ್ದರು. ಇದರಲ್ಲಿ ಸೊಹ್ರಾಬುದ್ದೀನ್ ಪ್ರಕರಣದಲ್ಲಿ ಅವರನ್ನು ಖುಲಾಸೆ ಮಾಡಲಾಗಿದೆಯಾದರೂ, ಇಶ್ರತ್ ಜಹಾನ್ ಪ್ರಕರಣದಲ್ಲಿ ಅವರಿನ್ನೂ ವಿಚಾರಣೆ ಎದುರಿಸುತ್ತಿದ್ದಾರೆ. ಇನ್ನು, ಬಾರೋತ್ ವಿರುದ್ಧ ಇಶ್ರತ್ ಜಹಾನ್ ಎನ್ ಕೌಂಟರ್ ಪ್ರಕರಣದ ಆರೋಪಗಳಿದ್ದು, ಅವರೂ ವಿಚಾರಣೆ ಎದುರಿಸುತ್ತಿದ್ದಾರೆ.