ಹದಿನೈದರ ಬಾಲೆಯನ್ನು ಹೊತ್ತೊಯ್ದು, ಅತ್ಯಾಚಾರವೆಸಗಿ, ಮಾರಿದ ದುರುಳರು
ಕಳೆದ ವರ್ಷ ಅಕ್ಟೋಬರ್ ನಲ್ಲಿ ದೆಹಲಿಯಿಂದ ಕಾಣೆಯಾಗಿದ್ದ 15 ವರ್ಷದ ಬಾಲಕಿ; ಛತ್ತೀಸ್ ಗಢಕ್ಕೆ ಹೋಗಬೇಕಿದ್ದ ಬಾಲಕಿ ತನಗರಿವಿಲ್ಲದೆ ದೆಹಲಿಯ ರೈಲು ಹತ್ತಿ ಬಂದಾಗ ನಡೆದಿದ್ದ ಪ್ರಕರಣ
ನವದೆಹಲಿ, ಫೆಬ್ರವರಿ 4: ತಪ್ಪಿ ಬೇರೆ ರೈಲೊಂದನ್ನು ಹತ್ತಿ ಛತ್ತೀಸ್ ಗಢದಿಂದ ದೆಹಲಿಗೆ ಆಗಮಿಸಿದ್ದ 15 ವರ್ಷದ ಬಾಲಕಿಯೊಬ್ಬಳನ್ನು ಹೊತ್ತೊಯ್ದಿದ್ದ ಕಾಮುಕರ ಗುಂಪೊಂದು ಆಕೆಯ ಮೇಲೆ ಬಲಾತ್ಕಾರ ಮಾಡಿ, ಆಕೆಯನ್ನು ಮಾರಾಟ ಮಾಡಿರುವ ಕರುಣಾ ಜನಕ ಕಥೆಯೊಂದು ಬೆಳಕಿಗೆ ಬಂದಿದೆ.
ಮಹಿಳೆಯೊಬ್ಬಳ ಮಧ್ಯಸ್ಥಿಕೆಯಿಂದ ವ್ಯಕ್ತಿಯೊಬ್ಬನಿಗೆ ಮಾರಾಟವಾಗಿದ್ದ ಆ ಬಾಲಕಿಯನ್ನು ರಕ್ಷಿಸಿರುವ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಹುಮಾಯೂನ್ ಟೂಂಬ್ ಬಳಿಯ ಇಬ್ಬರನ್ನು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ.
ಏನಾಗಿತ್ತು?: ಅಂದಹಾಗೆ, ಈ ಘಟನೆ ನಡೆದಿರುವುದು ಕಳೆದ ವರ್ಷ ಅಕ್ಟೋಬರ್ ನಲ್ಲಿ. ಆಗ, ತನ್ನ ಸಂಬಂಧಿಗಳನ್ನು ನೋಡಲು ರೈಲಿನಲ್ಲಿ ಛತ್ತೀಸ್ ಗಢಕ್ಕೆ ತೆರಳಬೇಕಿದ್ದ ಈ ಬಾಲಕಿ, ಕಣ್ತಪ್ಪಿನಿಂದ ತನಗರಿವಿಲ್ಲದಂತೆ ದೆಹಲಿ ರೈಲು ಹತ್ತಿದ್ದಳು.
ದೆಹಲಿ ನಿಲ್ದಾಣಕ್ಕೆ ಬಂದಿಳಿದಿದ್ದ ಆಕೆ, ನಿಲ್ದಾಣದಲ್ಲಿ ನೀರಿನ ಬಾಟಲಿಗಳನ್ನು ಮಾರುತ್ತಿದ್ದ ಅರ್ಮಾನ್ ಎಂಬ ವ್ಯಕ್ಯಿಯನ್ನು ಸಹಾಯಕ್ಕಾಗಿ ಕೋರಿದ್ದಳು. ಆಕೆಗೆ ಸಹಾಯ ಮಾಡುವುದಾಗಿ ಆಶ್ವಾಸನೆ ನೀಡಿದ ಆತ ತನ್ನ ಮನೆಯಿರುವ ಸರಾಯ್ ಕಾಳೇ ಖಾನ್ ಎಂಬ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ತನ್ನ ಹೆಂಡತಿಗೆ ಆಕೆಯನ್ನು ಪರಿಚಯಿಸಿದ ಅಲ್ಲಿ ಕೆಲ ಹೊತ್ತು ತಂಗುವಂತೆ ಸೂಚಿಸಿದ್ದಾನೆ. ಆದರೆ, ಮರುಘಳಿಗೆಯಲ್ಲೇ ಆತ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಇದಕ್ಕೆ ಆತನ ಪತ್ನಿಯೂ ಸಹಕಾರ ಕೊಟ್ಟಿದ್ದಾಳೆ.
ಆನಂತರ, ಈ ದುರುಳ ದಂಪತಿಗಳು ಆಕೆಯನ್ನು ಮದುವೆಗಾಗಿ ಹುಡುಗಿಯ ಶೋಧದಲ್ಲಿದ್ದ ಪಪ್ಪು ಯಾದವ್ ಎಂಬಾತನಿಗೆ 70,000 ರು.ಗೆ ಮಾರಾಟ ಮಾಡಿದ್ದಾರೆ.
ಅಲ್ಲಿಂದ, ಪಪ್ಪು ಯಾದವ್ ಪಾಲಾದ ಈಕೆ ಆತನೊಂದಿಗೆ ಬಲವಂತವಾಗಿ ಫರಿದಾಬಾದ್ ಗೆ ತೆರಳಬೇಕಾಯಿತು. ಅಲ್ಲಿ ಆತನ ಮನೆಯಲ್ಲಿ ಪಪ್ಪು ಯಾದವ್ ಆ ಬಾಲಕಿಯ ಮೇಲೆ ಮಾನಸಿಕ ಹಾಗೂ ದೈಹಿಕ ಹಲ್ಲೆಯನ್ನೂ ನಡೆಸಿದ್ದಲ್ಲದೆ, ಲೈಂಗಿಕವಾಗಿಯೂ ಬಳಸಿಕೊಂಡಿದ್ದಾನೆ.
ಆದರೆ, ಅದೊಂದು ದಿನ ಪಪ್ಪು ಯಾದವ್ ಕಣ್ತಪ್ಪಿಸಿ ಮನೆಯಿಂದ ತಪ್ಪಿಸಿಕೊಳ್ಳುವಲ್ಲಿ ಬಚಾವಾಗಿರುವ ಆಕೆ, ಆ ನಗರದ ಹಜ್ರತ್ ನಿಜಾಮುದ್ದೀನ್ ರೈಲ್ವೇ ಸ್ಟೇಷನ್ ಗೆ ಬಂದು ಹಸೀನಾ ಎಂಬಾಕೆಯನ್ನು ಮಾತನಾಡಿಸಿ ತನಗಾಗಿರುವ ಅನ್ಯಾಯವನ್ನು ತಿಳಿಸಿದ್ದಾಳೆ.
ತಕ್ಷಣವೇ ಆಕೆಯ ನೆರವಿಗೆ ಮುಂದಾದ ಹಸೀನಾ, ಪೊಲೀಸರನ್ನು ಸಂಪರ್ಕಿಸಲಾಗಿ ಈ ಪ್ರಕರಣ ಬಯಲಾಗಿದೆ. ಆನಂತರ, ಈ ಸುದ್ದಿಯು ದೆಹಲಿಯಲ್ಲಿನ ಮಹಿಳಾ ರಕ್ಷಣಾ ಆಯೋಗ ತಲುಪಿ ಅಲ್ಲಿನ ಅಧಿಕಾರಿಗಳು ಬಾಲಕಿಯ ರಕ್ಷಣೆಯನ್ನು ಮಾಡಿದ್ದಾರೆ.