ಹೊಸ ದಾರಿ ಹುಡುಕಲು ಬಿಟ್ಟ ಉಗ್ರರಿಗೀಗ ಹಳೆ ಮಾರ್ಗವೇ ಸರಿ!
ಬೆಂಗಳೂರು, ಅಕ್ಟೋಬರ್ 18: ಉಗ್ರಗಾಮಿಗಳು ಹೊಸ ದಾರಿಗಳ ಮೂಲಕ ಭಾರತದ ಒಳಗೆ ನುಸುಳುವುದನ್ನು ಬಿಟ್ಟಿದ್ದು, ವರ್ಷಗಳ ಹಿಂದೆ ಬಳಸುತ್ತಿದ್ದ ಹಾದಿಯಲ್ಲೇ ಒಳ ಬರುತ್ತಿದ್ದಾರೆ ಎಂಬ ಹೊಸ ಅಂಶವೊಂದು ಭಾರತೀಯ ಸೇನೆ ಗಮನಕ್ಕೆ ಬಂದಿದೆ. ಕಣಿವೆ ರಾಜ್ಯದೊಳಗೆ ನುಸುಳಲು ಹೊಸ ದಾರಿಗಳನ್ನು ಹುಡುಕುತ್ತಿದ್ದ ಉಗ್ರರೀಗ ಹಲ ವರ್ಷಗಳ ಹಿಂದೆ ಕಂಡುಕೊಂಡಿದ್ದ ದಾರಿಯಲ್ಲಿ ಸಾಗಿ ಬರುತ್ತಿದ್ದಾರೆ.
ಸರ್ಜಿಕಲ್ ಸ್ಟ್ರೈಕ್ ನಂತರ ದೇಶದೊಳಗೆ ನುಸುಳುವ ಯತ್ನದಲ್ಲಿ ಐವರು ಉಗ್ರಗಾಮಿಗಳು ಸಿಕ್ಕಿಬಿದ್ದಿದ್ದರು. ಆ ಮಾರ್ಗವು ಉಗ್ರಗಾಮಿ ಗುಂಪುಗಳು ಹಲವು ವರ್ಷಗಳ ಹಿಂದೆಯೇ ಬಳಸುವುದನ್ನು ಬಿಟ್ಟಿದ್ದವು. 'ಗಡಿಯುದ್ದಕ್ಕೂ ಸೇನೆಯ ಪಹರೆ ಹೆಚ್ಚಾಗಿರುವುದರಿಂದ ಉಗ್ರರು ಕಂಡುಕೊಂಡಿರುವ ಹೊಸ ಉಪಾಯವಿದು' ಎಂದು ಗುಪ್ತಚರ ಇಲಾಖೆ ತಿಳಿಸಿದೆ.[ಪಾಕ್ ಮಹಾನ್ ತ್ಯಾಗಮಯಿ ಅಂತಿದೆ ಚೀನಾ, ಒಪ್ತೀರಾ?]
ಭದ್ರತಾ ಪಡೆಯು ಇದೀಗ ಅಂಥ ಮಾರ್ಗಗಳನ್ನು ಪತ್ತೆ ಮಾಡುತ್ತಿದೆ. ಇತ್ತೀಚೆಗೆ ಉಗ್ರರು ಒಳನುಸುಳಲು ಹೊಸ ತಂತ್ರ ಅನುಸರಿಸುತ್ತಿರುವುದಕ್ಕೆ ಸಾಕ್ಷಿಯಾಗಿರುವ ಪಡೆ, ಗಡಿಯಲ್ಲಿ ಜಾಗೃತೆ ವಹಿಸಿದೆ. ಜತೆಗೆ ಪಾಕಿಸ್ತಾನ ಸೇನೆಯು ಹಲವು ಬಾರಿ ಅಪ್ರಚೋದಿತ ದಾಳಿ ನಡೆಸಿದೆ. ಭಯೋತ್ಪಾದಕರು ಭಾರತದೊಳಕ್ಕೆ ನುಸುಳಲು ಯತ್ನಿಸುವ ವೇಳೆ, ಸಹಾಯ ಮಾಡುವ ರೀತಿಯಲ್ಲಿ ಪಾಕ್ ಈ ರೀತಿ ದಾಳಿ ನಡೆಸುತ್ತದೆ.
ಭಾರತೀಯ ಅಧಿಕಾರಿಗಳು ಹೇಳುವ ಪ್ರಕಾರ, ಈ ವರ್ಷ ದೇಶದೊಳಕ್ಕೆ ನುಸುಳುವವರ ಸಂಖ್ಯೆ ಹೆಚ್ಚಾಗಿದೆ. ಎಂಬತ್ತೇಳು ವಿದೇಶಿ ಉಗ್ರರು ಕಣಿವೆಯೊಳಗೆ ನುಸುಳಿದ್ದಾರೆ. ಆದರೆ ಭದ್ರತಾ ಪಡೆಗಳು ವಿದೇಶಿಯರೂ ಸೇರಿ 128 ಉಗ್ರರನ್ನು ಕೊಲ್ಲುವಲ್ಲಿ ಸೇನೆ ಸಫಲವಾಗಿದೆ.[ಪಾಕ್ ಉಗ್ರರ ಬೆದರಿಕೆ - ಅರ್ನಬ್ ಗೋಸ್ವಾಮಿಗೆ ಬಿಗಿ ಭದ್ರತೆ]
ಈ ವರ್ಷ ಜಮ್ಮು-ಕಾಶ್ಮೀರದಲ್ಲಿ 128 ಉಗ್ರರನ್ನು ಕೊಲ್ಲಲಾಗಿದೆ. 2015ರಲ್ಲಿ 70 ಉಗ್ರರನ್ನು ಕೊಲ್ಲಲಾಗಿತ್ತು. ಇನ್ನು 128ರ ಪೈಕಿ 120 ಉಗ್ರರನ್ನು ಸೇನೆಯೇ ಕೊಂದಿದ್ದು, ಬಾಕಿ ಎಂಟು ಮಂದಿಯನ್ನು ಪೊಲೀಸರು ಹಾಗೂ ಸಿಆರ್ ಪಿಎಫ್ ನವರು ಹತ್ಯೆ ಮಾಡಿದ್ದಾರೆ.
ಈ ವರ್ಷದ ಚಳಿಗಾಲಕ್ಕೆ ಸಿದ್ಧರಾಗುತ್ತಿದ್ದೀವಿ. ಇನ್ನೂ ಸಾಕಷ್ಟು ಕೆಲಸ ಆಗಬೇಕು. ವಿದೇಶಿ ಉಗ್ರರು ನುಸುಳುವುದನ್ನು ತಡೆಯುವುದಕ್ಕೆ ಸೇನೆ ಸಫಲವಾಗಿದೆ. ಆದರೆ ಸಮಸ್ಯೆ ಆಗುತ್ತಿರುವುದು ಸ್ಥಳೀಯ ಉಗ್ರಗಾಮಿಗಳದು. ಹಿಜ್ಬುಲ್ ಮುಜಾಹಿದೀನ್ ಗೆ ಸೇರಿಸಿಕೊಳ್ಳುತ್ತಿರುವವರ ಸಂಖ್ಯೆ ತುಂಬ ಜಾಸ್ತಿಯಾಗಿದೆ ಎಂದು ಸೇನೆ ಅಧಿಕಾರಿಗಳು ಹಾಗೂ ಗುಪ್ತಚರ ದಳ ಮೂಲಗಳು ತಿಳಿಸಿವೆ.[ಪೊಲೀಸರಿಂದ ಐದು ರೈಫಲ್ ಕಸಿದೊಯ್ದ ಉಗ್ರಗಾಮಿಗಳು]
ಸ್ಥಳೀಯ ಉಗ್ರಗಾಮಿಗಳು ಪೊಲೀಸರಿಂದ ಶಸ್ತ್ರಾಸ್ತ್ರ ಕಸಿಯುವ ಘಟನೆ ನಡೆದ ನಂತರ ವಿದೇಶಿ ಹಾಗೂ ಸ್ಥಳೀಯ ಭಯೋತ್ಪಾದಕರನ್ನು ಹತ್ತಿಕ್ಕಲು ಯೋಜನೆ ಮಾಡಲಾಗುತ್ತಿದೆ ಎಂದಿರುವ ಅಧಿಕಾರಿಗಳು, ಸ್ಥಳೀಯ ಉಗ್ರರಿಗೆ ಭೂ ಭಾಗದ ಪರಿಚಯ ಚೆನ್ನಾಗಿರುವುದರಿಂದ ಅವರನ್ನು ಹತ್ತಿಕ್ಕುವುದು ಸಲೀಸಲ್ಲ ಎನ್ನುತ್ತಾರೆ.