ತಿರುಪತಿ ಬ್ರಹ್ಮೋತ್ಸವ: 20 ಕೋಟಿ ರುಪಾಯಿ ಹುಂಡಿ ಹಣ ಸಂಗ್ರಹ
ತಿರುಪತಿ, ಅಕ್ಟೋಬರ್ 12: ವಾರ್ಷಿಕ ಬ್ರಹ್ಮೋತ್ಸವದ ವೇಳೆ ಕಳೆದ ಎಂಟು ದಿನದ ಅವಧಿಯಲ್ಲಿ ಇಪ್ಪತ್ತು ಕೋಟಿ ಹುಂಡಿ ಹಣ ಸಂಗ್ರಹವಾಗುವ ಮೂಲಕ ತಿರುಪತಿ ವೆಂಕಟರಮಣನ ದೇಗುಲದಲ್ಲಿ ಹೊಸದೊಂದು ದಾಖಲೆ ನಿರ್ಮಾಣವಾಗಿದೆ. ಈ ಬಗ್ಗೆ ಮಾಧ್ಯಮಗಳಿಗೆ ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಡಿ.ಸಾಂಬಶಿವರಾವ್ ಮಾಹಿತಿ ನೀಡಿದ್ದಾರೆ.
ಅತಿಥಿ ಗೃಹ, ಕಾಟೇಜ್ ಗಳ ಬಾಡಿಗೆಯಿಂದ ಈ ವರ್ಷ 1.64 ಕೋಟಿ ಸಂಗ್ರಹವಾಗಿದೆ. ಕಳೆದ ವರ್ಷ 1.22 ಕೋಟಿ ಆದಾಯ ಬಂದಿತ್ತು. ಇನ್ನು ಮುಡಿ ಕೊಡಲು ಬರುವ ಭಕ್ತರ ಸಂಖ್ಯೆಯಲ್ಲು ಹೆಚ್ಚಳ ದಾಖಲಾಗಿದೆ. ಕಳೆದ ವರ್ಷ 2.39 ಲಕ್ಷ ಭಕ್ತರು ಮುಡಿ ನೀಡಿದ್ದರೆ, ಆ ಸಂಖ್ಯೆ ಈ ವರ್ಷ 3.45 ಲಕ್ಷಕ್ಕೆ ಹೆಚ್ಚಿದೆ.[ವಾರಂಗಲ್ ಭದ್ರಕಾಳಿಗೆ 3 ಕೋಟಿ ರು ಮೌಲ್ಯದ ಚಿನ್ನದ ಕಿರೀಟ!]
ಕಳೆದ ವರ್ಷ ಸಂಗ್ರಹವಾಗಿದ್ದಕ್ಕಿಂತ ಶೇ 33.5ರಷ್ಟು ಹೆಚ್ಚುವರಿಯಾಗಿ ಹುಂಡಿ ಹಣ ಸಂಗ್ರಹವಾಗಿದೆ ಎಂದು ವರದಿಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 5.19 ಲಕ್ಷ ಮಂದಿ ದೇವರ ದರ್ಶನ ಪಡೆದಿದ್ದರು. ಈ ಬಾರಿ 6.97 ಲಕ್ಷ ಮಂದಿ ದರ್ಶನ ಪಡೆದಿದ್ದಾರೆ. ಇನ್ನು ಲಡ್ಡು ವಿತರಣೆಗೆ ಸಂಬಂಧಿಸಿದಂತೆ ಹೇಳುವುದಾದರೆ, ಕಳೆದ ವರ್ಷ 22.66 ಲಕ್ಷ ಲಾಡು ವಿತರಿಸಿದ್ದರೆ, ಈ ವರ್ಷ 29.96 ಲಕ್ಷ ಲಾಡು ವಿತರಿಸಲಾಗಿದೆ.[ತಿರುಮಲದಲ್ಲಿ ವಾರ್ಷಿಕ ಬ್ರಹ್ಮೋತ್ಸವ: ಅ 7, 8ರಂದು ವಿಶೇಷ ದರ್ಶನ ಇಲ್ಲ]
ತಿರುಮಲದಲ್ಲಿ ನಡೆಯುವ ವಾರ್ಷಿಕ ಬ್ರಹ್ಮೋತ್ಸವ ತುಂಬ ದೊಡ್ಡ ಕಾರ್ಯಕ್ರಮ. ಇದನ್ನು ತಿರುಮಲ ತಿರುಪತಿ ದೇವಸ್ಥಾನದಿಂದಲೇ ಆಯೋಜಿಸಲಾಗುತ್ತದೆ. ಒಂಬತ್ತು ದಿನಗಳ ಕಾಲ ನಡೆಯುವ ಈ ಉತ್ಸವದ ವೇಳೆ, ವೆಂಕಟೇಶ್ವರನ ಮೂರ್ತಿಯನ್ನು ದೇವಾಲಯದ ಸುತ್ತ ಮೆರವಣಿಗೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ದೇಶದ ನಾನಾ ಭಾಗಗಳಿಂದ ಭಕ್ತರು ಇಲ್ಲಿಗೆ ಬರುತ್ತಾರೆ.