ಶೇ4ರಿಂದ 12ಕ್ಕೆ ಅಲ್ಪ ಸಂಖ್ಯಾತರ ಮೀಸಲಾತಿ ಹೆಚ್ಚಿಸಿದ ತೆಲಂಗಾಣ!
ತೆಲಂಗಾಣ ಸರ್ಕಾರ ಮುಸ್ಲಿಂ ಸಮುದಾಯದ ಮೀಸಲಾತಿ ಪ್ರಮಾಣವನ್ನು ಶೇ 4 ರಿಂದ 12ಕ್ಕೆ ಹೆಚ್ಚಿಸಿದೆ.
ಹೈದರಾಬಾದ್, ಏಪ್ರಿಲ್ 16 : ಮುಸ್ಲಿಂ ಸಮುದಾಯದ ಮೀಸಲಾತಿ ಪ್ರಮಾಣವನ್ನು ಶೇ 4 ರಿಂದ 12ಕ್ಕೆ ಏರಿಕೆ ಮಾಡುವ ವಿವಾದಿತ ಮೀಸಲಾತಿ ಮಸೂದೆಗೆ ತೆಲಂಗಾಣ ಸರ್ಕಾರ ವಿಧಾನಸಭೆಯ ಅನುಮೋದನೆ ಪಡೆದಿದೆ.
ತೆಲಂಗಾಣದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿರುವ ಮುಸ್ಲಿಂ ಮತ್ತು ಹಿಂದೂಳಿದ ಬುಡಕಟ್ಟು ಜನಾಂಗಗಳ ಮೀಸಲಾತಿಯನ್ನು ಶೇ 4ರಿಂದ 12ಕ್ಕೆ ಏರಿಕೆ ಮಾಡುವ ಮಸೂದೆಯನ್ನು ತೆಲಂಗಾಣ ಸರ್ಕಾರ ಜಾರಿಗೊಳಿಸಿದ್ದು, ಬಿಜೆಪಿ ಸದಸ್ಯರ ವ್ಯಾಪಕ ವಿರೋಧ ನಡುವೆಯೇ ಮಸೂದೆಗೆ ಭಾನುವಾರ ಅನುಮೋದನೆ ಪಡೆದಿದೆ. [ಪತ್ರಕರ್ತರ ಕಲ್ಯಾಣಕ್ಕಾಗಿ 30 ಕೋಟಿ ಎತ್ತಿಟ್ಟ ತೆಲಂಗಾಣ]
ಸಿಎಂ ಕೆ ಚಂದ್ರ ಶೇಖರ ರಾವ್ ಅವರ ಈ ನಿರ್ಧಾರ ಇದೀಗ ವಿವಾದಕ್ಕೆ ಕಾರಣವಾಗಿದ್ದು, ಸರ್ಕಾರದ ಕ್ರಮವನ್ನು ಬಲವಾಗಿ ಖಂಡಿಸಿರುವ ಬಿಜೆಪಿ ಪಕ್ಷದ ಸದಸ್ಯರು ಸದನದ ಒಳಗೆ ಹಾಗೂ ಹೊರಗೆ ವ್ಯಾಪಕ ಪ್ರತಿಭಟನೆ ನಡೆಸಿದ್ದಾರೆ.
ಮಸೂದೆ ಮಂಡನೆಯಾಗುತ್ತಿದ್ದಂತೆಯೇ ಬಿಜೆಪಿ ಸದಸ್ಯರು ಸದನದಲ್ಲಿ ಕೋಲಾಹಲವೆಬ್ಬಿಸಿದ ಕಾರಣ ಬಿಜೆಪಿ ಐದು ಶಾಸಕರನ್ನು ಸದನದಿಂದ ಬಲವಂತವಾಗಿ ಹೊರಹಾಕಲಾಯಿತು.
ಇದಾಗ್ಯೂ ಬಿಜೆಪಿ ಶಾಸಕರು ಸದನದಲ್ಲಿ ತಮ್ಮ ಪ್ರತಿಭಟನೆ ಮುಂದುವರೆಸಿದರು. ಪ್ರತಿಭಟನೆಯ ನಡುವೆಯೇ ಮಸೂದೆಗೆ ಅನುಮೋದನೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ಹಿಂದುಳಿದ ಬುಡಕಟ್ಟು ಜನಾಂಗ ಮತ್ತು ಹಿಂದುಳಿದ ಮುಸ್ಲಿಂ ವರ್ಗಗಳಿಗೆ ಔದ್ಯೋಗಿಕ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿ ಹೆಚ್ಚಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತೆಲಂಗಾಣ ಸರ್ಕಾರ ಹೇಳಿದೆ.