ಬಾಣಸಿಗನ ನೆನಪಿನ ಹದದಲ್ಲಿ ಕಲಾಂ ಜೀವನ ರಸಾಯನ
ಹೈದರಾಬಾದ್, ಅಕ್ಟೋಬರ್, 15: 'ಅಬ್ದುಲ್ ಕಲಾಂ ಎಂದೂ ಕೋಪ ಮಾಡಿಕೊಂಡವರಲ್ಲ. ಯಾವಾಗಲೂ ಆತ್ಮೀಯ ನಗೆ ಬೀರುತ್ತಿದ್ದರು. ಎಲ್ಲರೊಂದಿಗೆ ಪ್ರೀತಿಯಿಂದ ಮಾತನಾಡುತ್ತಿದ್ದರು. ನಾನು ಅವರಿಗೆ ಒಮ್ಮೆ ಮಾತ್ರ ಊಟ ಒದಗಿಸಿದ್ದೆ ಅಷ್ಟೇ. ಆದರೆ ಅವರು ನನ್ನ ಕುಟುಂಬದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿದ್ದರು ಎಂದು ದಿವಂಗತ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂರನ್ನು ನೆನೆದು ಕಣ್ಣೀರುಗರೆಯುತ್ತಾರೆ 24 ವರ್ಷದ ಸುಬ್ರತೋ ಮೇಥಿ.
ಸುಬ್ರತೋ ಮೇಥಿ ಮೂಲತಃ ಒಡಿಸ್ಸಾದ ಧಮಾರಾದವನು. ಮಧ್ಯದಲ್ಲೇ ತಮ್ಮ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದ ಈತ ಕೆಲವು ವರ್ಷಗಳಿಂದ ಹೈದರಾಬಾದಿನ ಡಿಆರ್ ಡಿಒ ಭಟ್ಟಾಚಾರ್ಯ ಗೆಸ್ಟ್ ಹೌಸಿನಲ್ಲಿ ಬಾಣಸಿಗ ವೃತ್ತಿಯ ಮುಖ್ಯಸ್ಥನಾಗಿ ತುಂಬಾ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದಾನೆ.[ಇಳಯರಾಜ ಭಾವಯಾನದಲ್ಲಿ ಹರಿಯಿತು ಕಲಾಂ ವ್ಯಕ್ತಿತ್ವ]
ಸುಬ್ರತೋ ಕಲಾಂರನ್ನು ಬಹಳ ಆತ್ಮೀಯವಾಗಿ ಬಲ್ಲವನಾಗಿದ್ದು, ದೇವರಂತೆ ಆರಾಧಿಸುತ್ತಾ ತಮ್ಮ ಬದುಕಿಗೆ ಆದರ್ಶ ವ್ಯಕ್ತಿಯಾಗಿ ಇರಿಸಿಕೊಂಡ ಸುಬ್ರತೋ 'ಇಂದು ಅಬ್ದುಲ್ ಕಲಾಂ ಅವರ 84ನೇ ಹುಟ್ಟುಹಬ್ಬವೆಂದು ನನಗೆ ಹಿಂದಿನ ದಿನವೇ ಗೊತ್ತಿದ್ದ ಕಾರಣ ಕಲಾಂ ಪಾರ್ಕಿನಲ್ಲಿನ ಅವರ ಪ್ರತಿಮೆಯನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಖುದ್ದಾಗಿ ನಾನೇ ವಹಿಸಿಕೊಂಡೆ.
ಎರಡೆರಡು ಬಾರಿ ನೆಲವನ್ನು ವರೆಸಿ, ಉದ್ಯಾನವನದಿಂದ ಹೂಗಳನ್ನು ತಂದು ನಾನೇ ಹಾರ ತಯಾರಿಸಿದೆ. ಇದು ನನ್ನ ಕರ್ತವ್ಯ ಎಂದು ಭಾವಿಸಿದ್ದೇನೆ. ಕಲಾಂ ಅವರ ಬಗ್ಗೆ ಹೇಳುತ್ತಾ ಕುಳಿತರೆ ವರ್ಷಗಳೇ ಸಾಕಾಗುವುದಿಲ್ಲ' ಎಂದು ಬಹಳ ಹೆಮ್ಮೆಯಿಂದ ನುಡಿಯುತ್ತಾರೆ.[ನಿಷ್ಕ್ರಿಯವಾಯ್ತು ಕಲಾಂರ ಸಾಮಾಜಿಕ ಜಾಲತಾಣ ಖಾತೆಗಳು]
ನಾನು ಕಲಾಂ ಅವರಿಗೆ 'ನನ್ನೊಂದಿಗೆ ಒಂದು ಫೋಟೋ ತೆಗೆಸಿಕೊಳ್ಳುವಿರಾ ಎಂದು ಕೇಳಿದೆ. ಅವರು ಹಿಂದೂ ಮುಂದೂ ನೋಡದೆ ತಕ್ಷಣ ಒಪ್ಪಿಗೆ ಕೊಟ್ಟು, ನೀನು ತುಂಬಾ ಚೆನ್ನಾಗಿ ಅಡುಗೆ ಮಾಡುತ್ತೀಯಾ ಎಂದು ಮನತುಂಬಿ ನುಡಿದರು. ನಾನು ಅವರೊಂದಿಗೆ ತೆಗೆಸಿಕೊಂಡ ಫೋಟೋವನ್ನು ನನ್ನ ಹಳ್ಳಿ ಮನೆಯಲ್ಲಿ ಇಟ್ಟುಕೊಂಡಿದ್ದೇನೆ.
ನನಗೆ ನನ್ನ ಹಳ್ಳಿಯಲ್ಲಿ ಒಂದು ಹೊಸ ಉದ್ಯಮ ಸ್ಥಾಪಿಸುವ ಮನಸ್ಸಿದೆ. ನಾನು ಕಲಾಂ ನೆನೆಪಿನಾರ್ಥ ಅವರಿಗಾಗಿ ಈ ನಾಡಿಗೆ ಉತ್ತಮ ಕೊಡುಗೆ ನೀಡುತ್ತೇನೆಂಬ ಭರವಸೆ ಇದೆ. ನನಗೆ ಗೊತ್ತಿದೆ ನಾನು ಒಂದಲ್ಲಾ ಒಂದು ದಿನ ಸಾಧಿಸಿಯೇ ತೋರಿಸುತ್ತೇನೆ. ಎಂದು ಹೇಳುವ ಸುಬ್ರತೋ 'ಕಲಾಂ ನನ್ನ ಬದುಕಿನ ರಿಯಲ್ ಹೀರೋ' ಎನ್ನುವುದನ್ನು ಮಾತ್ರ ಮರೆಯುವುದಿಲ್ಲ.