ರಾಷ್ಟ್ರೀಯ ಸಂಸ್ಕೃತ ವಿವಿಗೆ ಕನ್ನಡಿಗ ಕುಲಪತಿ
ಹೈದರಾಬಾದ್, ಜುಲೈ 11: ತಿರುಪತಿಯಲ್ಲಿರುವ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಯಾಗಿ ಕರ್ನಾಟಕದ ಎಂ. ಎಲ್. ನರಸಿಂಹಮೂರ್ತಿ ನೇಮಕಗೊಂಡಿದ್ದಾರೆ.
ಶೃಂಗೇರಿ ಶಾರದಾ ಮಠದ ಸದ್ವಿದ್ಯಾ ಸಂಜೀವಿನಿ ಸಂಸ್ಕೃತ ಪಾಠಶಾಲೆ ಹಾಗೂ ಸಂಸ್ಕೃತ ವಿದ್ಯಾಪೀಠದ ವಿದ್ಯಾರ್ಥಿಯಾಗಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಶೃಂಗೇರಿ ತಾಲೂಕಿನ ಮಿಗಿನಕಲ್ಲು ಮೂಲದವರು.
ಶೃಂಗೇರಿ ಮಠದಲ್ಲಿ ನಡೆಯುವ ಗಣಪತಿ ವಾಕ್ಯಾರ್ಥ ಸಭೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯಿಂದ ಎಲ್ಲರನ್ನು ಚಕಿತಗೊಳಿಸಿ, ಜಗದ್ಗುರುಗಳಿಂದ 'ಚಿನ್ನದ ಪದಕ' ಪುರಸ್ಕೃತ ಭಾಜನರಾಗಿದ್ದಾರೆ.
1980ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವೇದಾಂತ ವಿದ್ವತ್ ಪದವಿ, 1982ರಲ್ಲಿ ಎಂ.ಎ.ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ಪೂರೈಸಿದರು. 1992ರಲ್ಲಿ ದೆಹಲಿಯ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದಲ್ಲಿ ಪಿಎಚ್.ಡಿ ಪಡೆದಿದ್ದರು.
1994ರಿಂದ ತಿರುಪತಿಯ ಕೇಂದ್ರೀಯ ಸಂಸ್ಕೃತ ವಿದ್ಯಾಪೀಠದಲ್ಲಿ ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿ, 1997ರಲ್ಲಿ ಪ್ರೊಫೆಸರ್ ಆಗಿ ಬಡ್ತಿ ಹೊಂದಿದ್ದರು. ಇತ್ತೀಚೆಗೆ ತಿರುಪತಿಯಲ್ಲಿರುವ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಉಸ್ತುವಾರಿ ಉಪ ಕುಲಪತಿಯಾಗಿದ್ದರು. ಈಗ ಉಪ ಕುಲಪತಿಯಾಗಿ ಅಧಿಕೃತವಾಗಿ ನರಸಿಂಹ ಮೂರ್ತಿ ಅವರನ್ನು ನೇಮಿಸಲಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಪ್ರಕಟಿಸಿದೆ.