ಲಂಚಕ್ಕಾಗಿ 693 ಎಕರೆ ಸರಕಾರಿ ಜಾಗ ಪರಭಾರೆ ಮಾಡಿದ ಸಬ್ ರಿಜಿಸ್ಟ್ರಾರ್
ಹೈದರಾಬಾದ್, ಮೇ 30: ಇದು ಸೈಬರ್ ಬಾದ್ ಪೊಲೀಸರು ಬಯಲು ಮಾಡಿದ ಹಗರಣ. ಇದರಲ್ಲಿ ಕುಕಟಪಲ್ಲಿ ಉಪ ನೋಂದಣಾಧಿಕಾರಿಯನ್ನು ಹೈದರಾಬಾದ್ ನಲ್ಲಿ ಬಂಧಿಸಿದ್ದು, ಆತನ ಜತೆಗೆ ಖಾಸಗಿ ಕಂಪೆನಿಯ ಇಬ್ಬರು ನಿರ್ದೇಶಕರನ್ನು ಸಹ ವಶಕ್ಕೆ ಪಡೆಯಲಾಗಿದೆ.
ಉಪ ನೋಂದಣಾಧಿಕಾರಿಯ ಹೆಸರು ರಚಕೊಂಡ ಶ್ರೀನಿವಾಸ ರಾವ್. ಈ ಪುಣ್ಯಾತ್ಮ 693 ಎಕರೆ ಸರಕಾರಿ ಜಾಗವನ್ನು ಎರಡು ಕಂಪೆನಿಗಳಿಗೆ ಹಸ್ತಾಂತರಿಸಿದ್ದಾನೆ. ಈ ಜಾಗದ ಒಟ್ಟು ಮೌಲ್ಯ 587 ಕೋಟಿ ರುಪಾಯಿ. ಅಷ್ಟು ಮೊತ್ತ ಈತನಿಂದ ಸರಕಾರಕ್ಕೆ ನಷ್ಟವಾಗಿದೆ.[ಸುಷ್ಮಾ ಗೆ ಹೈದರಾಬಾದ್ ದಂಪತಿ ಮೊರೆ, ಇದು ಮತ್ತೊಂದು ಉಜ್ಮಾ ಪ್ರಕರಣ]
ಇನ್ನಿಬ್ಬರು ಬಂಧಿತರ ಹೆಸರು ಪಾರ್ಥಸಾರಥಿ ಹಾಗೂ ಪಿವಿಎಸ್ ಶರ್ಮಾ. ಮೊದಲನೆ ವ್ಯಕ್ತಿ ಟ್ರಿನಿಟಿ ಇನ್ ಫ್ರಾ ವೆಂಚರ್ಸ್ ನ ನಿರ್ದೇಶಕ, ಮತ್ತೊಬ್ಬ ಸುವಿಶಾಲ್ ಪವರ್ ಕಂಪೆನಿಗೆ ಸೇರಿದ ವ್ಯಕ್ತಿ. ಮೇದ್ ಚಲ್ ಜಿಲ್ಲೆಯ ನೋಂದಣಾಧಿಕಾರಿ ಎನ್ ಸೈದಿ ರೆಡ್ಡಿ ಅವರು ಕುಕಟಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಪ್ರಕರಣ ಬಯಲಿಗೆ ಬಂದಿದೆ.
ಪಾರ್ಥಸಾರಥಿಯು ಶರ್ಮಾಗೆ ಸರಕಾರಿ ಜಾಗವನ್ನು ನೋಂದಣಿ ಮಾಡುತ್ತಿದ್ದಾನೆ ಎಂದು ಗೊತ್ತಾಗಿ ಅವರು ದೂರು ದಾಖಲಿಸಿದ್ದರು. ಈ ಭೂಮಿಗೆ ಸಂಬಂಧಪಟ್ಟ ವ್ಯಾಜ್ಯ 2011ರಿಂದ ಕೋರ್ಟ್ ನಲ್ಲಿದೆ. ಈ ಜಾಗ ಸರಕಾರಕ್ಕೆ ಸೇರಿದ್ದು ಎಂದು ಮುಖ್ಯ ನೋಂದಣಾಧಿಕಾರಿ ತಿಳಿಸಿದರೂ ಆರೋಪಿಗಳು ಸುವಿಶಾಲ್ ಪವರ್ ಹೆಸರಿಗೆ ಜಿಪಿಎ ಮಾಡಿಕೊಟ್ಟಿದ್ದಾರೆ.[ಓವೈಸಿಗೆ ತಾಕತ್ತಿದ್ದರೆ ಅಂಬರಪೇಟೆಯಲ್ಲಿ ಚುನಾವಣೆಗೆ ನಿಂತು ಗೆಲ್ಲಲಿ!]
ಉಪನೋಂದಣಾಧಿಕಾರಿ ಶ್ರೀನಿವಾಸ್ ರಾವ್ ಸಿಕ್ಕಾಪಟ್ಟೆ ಲಂಚ ಪಡೆದು, ಇಬ್ಬರು ಆರೋಪಿಗಳಿಗೆ ಸಹಾಯ ಮಾಡಿರುವುದು ತನಿಖೆ ಸಂದರ್ಭದಲ್ಲಿ ಬಯಲಾಗಿದೆ. 693 ಎಕರೆ ಜಮೀನಿಗೆ ನೋಂದಣಿ ಶುಲ್ಕವಾಗಿ 63 ಲಕ್ಷ ರುಪಾಯಿ ಮಾತ್ರ ಕಟ್ಟಿಸಿಕೊಳ್ಳಲಾಗಿದೆ.