ಅಮೆರಿಕಾ ಶೂಟೌಟ್: ಶ್ರೀನಿವಾಸ್ ಕುಚಿಭೋತ್ಲಾಗೆ ಅಂತಿಮ ವಿದಾಯ
ಅಮೆರಿಕಾದ ಕನ್ಸಾಸ್ ನಲ್ಲಿ ಗುಂಡೇಟು ತಿಂದು ಅಸುನೀಗಿದ ಶ್ರೀನಿವಾಸ್ ಕುಚಿಭೋತ್ಲಾಗೆ ಅಂತ್ಯ ಸಂಸ್ಕಾರ ನೂರಾರು ಸಂಬಂಧಿಕರು, ಗಣ್ಯರ ಸಮ್ಮುಖದಲ್ಲಿ ಹೈದರಾಬಾದ್ ನಗರದ ಜುಬಿಲಿ ಹಿಲ್ಸ್ ನಲ್ಲಿ ನೆರವೇರಿತು.
ಹೈದರಾಬಾದ್, ಫೆಬ್ರವರಿ 28: ಅಮೆರಿಕಾದ ಕನ್ಸಾಸ್ ನಲ್ಲಿ ಗುಂಡೇಟು ತಿಂದು ಅಸುನೀಗಿದ ಶ್ರೀನಿವಾಸ್ ಕುಚಿಭೋತ್ಲಾಗೆ ಸಂಬಂಧಿಕರು ಭಾವಪೂರ್ಣ ವಿದಾಯ ಹೇಳಿದರು. ಹೈದರಾಬಾದ್ ನಗರದ ಜುಬಿಲಿ ಹಿಲ್ಸ್ ನಲ್ಲಿ ನೂರಾರು ಸಂಬಂಧಿಕರು, ಗಣ್ಯರ ಸಮ್ಮುಖದಲ್ಲಿ ಶ್ರೀನಿವಾಸ್ ಅಂತ್ಯ ಸಂಸ್ಕಾರ ನೆರವೇರಿತು.
ಅಂತ್ಯ ಸಂಸ್ಕಾರಕ್ಕೂ ಮೊದಲು ಸಾವಿರಾರು ಜನ ಶ್ರೀನಿವಾಸ್ ಅಂತಿಮ ದರ್ಶನ ಪಡೆದರು. ಶ್ರೀನಿವಾಸ್ ಕುಚಿಭೋತ್ಲಾ ಮೃತ ದೇಹ ಸೋಮವಾರ ಭಾರತಕ್ಕೆ ಆಗಮಿಸಿತ್ತು. ನಂತರ ಅಲ್ಲಿಂದ ಹೈದರಾಬಾದ್ ನಗರದ ಹೊರವಲಯದಲ್ಲಿರುವ ಬಚುಪಲ್ಲಿ ನಿವಾಸಕ್ಕೆ ಕೊಂಡೊಯ್ಯಲಾಯಿತು. ಶ್ರೀನಿವಾಸ್ ಪತ್ನಿ ಸುನಾಯಾನ ದುಮಾಲ ಮತ್ತು ಕೆಲ ಸಂಬಂಧಿಕರು ವಿಮಾನದಲ್ಲಿ ಮೃತ ದೇಹದ ಜತೆ ಆಗಮಿಸಿದ್ದರು.['ನನಗೆ ಉತ್ತರ ಬೇಕು' ಟ್ರಂಪ್ ಗೆ ಶ್ರೀನಿವಾಸ್ ಪತ್ನಿಯ ಬೇಡಿಕೆ]
ಅಂತಿಮ ನಮನ
ಮೃತ ದೇಹಕ್ಕೆ ತೆಲಂಗಾಣ ಸಾರಿಗೆ ಸಚಿವ ಮಹೇಂದ್ರ ರೆಡ್ಡಿ ಅಂತಿಮ ನಮನ ಸಲ್ಲಿಸಿದರು. ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ, ಬಿಜೆಪಿ ಶಾಸಕ ರಾಮಚಂದ್ರ ರೆಡ್ಡಿ, ಮಾಜಿ ಶಾಸಕ ಚಿಕ್ಕ ರಾಮಯ್ಯ ಸೇರಿದಂತೆ ಹಲವಾರು ಜನ ಅಂತಿಮ ದರ್ಶನ ಪಡೆದರು.[ಗೆಟ್ ಔಟ್ ಎಂದು ಕಿರುಚಿ ಅಮೆರಿಕದಲ್ಲಿ ಭಾರತೀಯನ ಹತ್ಯೆ]
ತಮ್ಮನನ್ನು ಕಳುಹಿಸಲ್ಲ
ಅಂತಿಮ ದರ್ಶನದ ವೇಳೆ ಶ್ರೀನಿವಾಸ್ ತಮ್ಮನನ್ನು ಅಮೆರಿಕಾಗೆ ಕಳುಹಿಸುವುದಿಲ್ಲ ಎಂದು ಅವರ ತಾಯಿ ಸಂಬಂಧಿಕರ ಬಳಿ ಅರಹುತ್ತಿದ್ದರು. ಶ್ರೀನಿವಾಸ್ ತಂದೆ ಅಂತ್ಯ ಸಂಸ್ಕಾರದ ವೇಳೆ ಗಟ್ಟಿ ಮನಸ್ಸು ಮಾಡಿ ಕಣ್ಣಿರು ಸುರಿಸದೆ ನಿಂತಿದ್ದರೆ ಆದರೆ ಪತ್ನಿ ಸುನಾಯಾನ ಮಾತ್ರ ಕೊನೆಯವರೆಗೂ ಅಳುತ್ತಲೇ ಇದ್ದರು.[ಅಮೆರಿಕಾದಲ್ಲಿ ಗುಂಡೇಟಿಗೆ ಬಲಿಯಾದ ಶ್ರೀನಿವಾಸ್ ಅಂತ್ಯಕ್ರಿಯೆ ಇಂದು]
ಘಟನೆಗೆ ಅಮೆರಿಕಾ ಪ್ರತಿಕ್ರಿಯೆ
ಘಟನೆಗೆ ಸಂಬಂಧಿಸಿದಂತೆ ಅಮೆರಿಕಾ ಪ್ರತಿಕ್ರಿಯೆ ನೀಡಿದ್ದು 'ನಿಮಿಗಿಷ್ಟವಾದ ಧರ್ಮವನ್ನು ಸ್ವತಂತ್ರವಾಗಿ ಮತ್ತು ಮುಕ್ತವಾಗಿ ಆಯ್ಕೆ ಮಾಡಿಕೊಳ್ಳಬಹುದು' ಎಂದು ಪತ್ರಿಕಾ ಕಾರ್ಯದರ್ಶಿ ಸೀನ್ ಸ್ಪೈಸರ್ ಹೇಳಿದ್ದಾರೆ. ಕಾನ್ಸಾಸ್ ಶೂಟೌಟ್ ಜತೆಗೆ ದೇಶದಲ್ಲಿ ಯಹೂದಿಯರ ಮೇಲಾಗುತ್ತಿರುವ ದಾಳಿಗಳನ್ನೂ ಅವರು ಖಂಡಿಸಿದ್ದಾರೆ. ಕಾನ್ಸಾಸಿನಿಂದ ಬರುತ್ತಿರುವ ಪ್ರಾಥಮಿಕ ಮಾಹಿತಿಗಳು 'ಮನಕಲಕುತ್ತಿವೆ' ಎಂದೂ ಅವರು ಆತಂಕ ವ್ಯಕ್ತಪಡಿಸಿದ್ದಾರೆ.[ಅಮೆರಿಕದಲ್ಲಿ ಭಾರತೀಯನ ಹತ್ಯೆ : ಹರಿದುಬಂದ ಹಣಸಹಾಯ]
ತಲ್ಲಣದ ಅಲೆ
ಘಟನೆ ಅಮೆರಿಕಾದಲ್ಲಿರುವ ಭಾರತೀಯರಲ್ಲಿ ತಲ್ಲಣ ಸೃಷ್ಟಿಸಿದೆ. ಸ್ಥಳೀಯ ಭಾರತೀಯರು ಒಟ್ಟಾಗಿದ್ದು ಭಾರೀ ಪ್ರತಿಭಟನೆಗಳನ್ನೂ ನಡೆಸಿದ್ದಾರೆ.
ಘಟನೆ ಬಗ್ಗೆ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದು ಇವರ ಜತೆ ಅಮೆರಿಕಾದ ಪ್ರಖ್ಯಾತ ತನಿಖಾ ಸಂಸ್ಥೆ ಎಫ್.ಬಿ.ಐ ಕೂಡಾ ಕೈ ಜೋಡಿಸಿದೆ.
ಕೋರ್ಟಿಗೆ ಹಾಜಾರಾದ ಆರೋಪಿ
ಇತ್ತ ಹೈದರಾಬಾದಿನಲ್ಲಿ ಶ್ರೀನಿವಾಸ್ ಕುಚಿಭೋತ್ಲಾ ಅಂತಿಮ ಸಂಸ್ಕಾರ ನಡೆಯುತ್ತಿದ್ದರೆ ಅತ್ತ ಮೆರಿಕಾದಲ್ಲಿ ಶ್ರೀನಿವಾಸ್ ಕೊಲೆ ಆರೋಪಿ ಆ್ಯಡಮ್ ಪ್ಯುರಿಟಾನ್ ಕೋರ್ಟಿಗೆ ಹಾಜಾರಾಗಿದ್ದಾನೆ. ಸದ್ಯ ಆತನನ್ನು ಜಾನ್ಸನ್ ಕೌಂಟಿ ಜೈಲಿನಲ್ಲಿಡಲಾಗಿದೆ. ಆತನ ಮೇಲೆ ಕೊಲೆ ಹಾಗೂ ಕುಚಿಭೋತ್ಲಾ ಜತೆಗಿದ್ದ ಇಬ್ಬರನ್ನು ಕೊಲ್ಲಲು ಯತ್ನಿಸಿದ ಪ್ರಕರಣಗಳನ್ನು ದಾಖಲಾಗಿವೆ.
ಇನ್ನು ಶೂಟೌಟಿನಲ್ಲಿ ಪಾಲ್ಗೊಂಡ ಆರೋಪಿಗಳನ್ನು ಬಂಧಿಸಿ ತಕ್ಷಣ ಶಿಕ್ಷೆ ನೀಡುವಂತೆ ಭಾರತೀಯ ರಾಯಭಾರಿ ಕಚೇರಿ ಒತ್ತಾಯಿಸಿದ್ದು ಅಮೆರಿಕಾ ಸರಕಾರಕ್ಕೆ ಮನವಿಯನ್ನೂ ಸಲ್ಲಿಸಿದೆ.