38 ಕೋಟಿ ವೆಚ್ಚದ ಗೃಹ ಪ್ರವೇಶ ಮಾಡಿದ ತೆಲಂಗಾಣ ಸಿಎಂ!
ಹೈದರಾಬಾದ್ ನ ಬೇಗಮ್ ಪೇಟೆಯಲ್ಲಿರುವ ಈ ಭವ್ಯ ಬಂಗಲೆಯನ್ನು 38 ಕೋಟಿ ರುಪಾಯಿಗೂ ಹೆಚ್ಚು ಖರ್ಚು ಮಾಡಿ ನಿರ್ಮಿಸಲಾಗಿದೆ. ಈ ಹೊಸ ಕಟ್ಟಡದ ನಿರ್ಮಾಣ ಕಾರ್ಯ ಒಂಬತ್ತು ತಿಂಗಳ ಅವಧಿಯಲ್ಲಿ ಮುಗಿದಿದೆ.
ಹೈದರಾಬಾದ್, ನವೆಂಬರ್ 24: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಗುರುವಾರ ಹೊಸ ಕಚೇರಿ ಹಾಗೂ ಅಧಿಕೃತ ನಿವಾಸದ ಗೃಹಪ್ರವೇಶ ಮುಗಿಸಿದ್ದಾರೆ. ಹೈದರಾಬಾದ್ ನ ಬೇಗಮ್ ಪೇಟೆಯಲ್ಲಿರುವ ಈ ಭವ್ಯ ಬಂಗಲೆಯನ್ನು 38 ಕೋಟಿ ರುಪಾಯಿಗೂ ಹೆಚ್ಚು ಖರ್ಚು ಮಾಡಿ ನಿರ್ಮಿಸಲಾಗಿದೆ.
ಈ ಹೊಸ ಕಟ್ಟಡದ ನಿರ್ಮಾಣ ಕಾರ್ಯ ಒಂಬತ್ತು ತಿಂಗಳ ಅವಧಿಯಲ್ಲಿ ಮುಗಿದಿದೆ. ಮುಖ್ಯಮಂತ್ರಿ ಕೆಸಿಆರ್ ತಮ್ಮ ಕುಟುಂಬ ಸದಸ್ಯರ ಜತೆಗೆ ಬೆಳಗ್ಗೆ 5.22ರ ಶುಭ ಮುಹೂರ್ತದಲ್ಲಿ ವೇದ ಘೋಷಗಳ ಮಧ್ಯೆ ಮನೆ ಪ್ರವೇಶಿಸಿದರು. ರಾಜ್ಯಪಾಲ ಎ.ಎಸ್.ಎಲ್.ನರಸಿಂಹನ್ ಮತ್ತು ಅವರ ಪತ್ನಿ ವಿಮಲಾ ಮತ್ತು ಕೆಸಿಆರ್ ಸಂಪುಟ ಸಹೋದ್ಯೋಗಿಗಳು ಕೆಲವರು ಹಾಜರಿದ್ದರು.[ತೆಲಂಗಾಣ ಸಿಎಂ ಬಚ್ಚಲುಮನೆಗೂ ಬುಲೆಟ್ ಪ್ರೂಫ್ ಗಾಜು!]
ಹೊಸ ಕಚೇರಿ-ಅಧಿಕೃತ ನಿವಾಸವನ್ನು ಒಂಬತ್ತು ಎಕರೆ ವ್ಯಾಪ್ತಿಯ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಇಲ್ಲಿರುವ ಸಭಾಭವನದಲ್ಲಿ ಸಾವಿರ ಮಂದಿ ಕೂರಬಹುದಾಗಿದೆ. ಐದು ಕಟ್ಟಡಗಳ ಸಮೂಹವನ್ನು ಮುಖ್ಯಮಂತ್ರಿಗಳು 'ಪ್ರಗತಿ ಭವನ' ಎಂದು ಕರೆದಿದ್ದಾರೆ. ಕೆಸಿಆರ್, ಅವರ ಪತ್ನಿ ಶೋಭಾ, ಮಗ ಕೆ.ತಾರಕ ರಾಮ ರಾವ್ ಮತ್ತಿತರ ಕುಟುಂಬ ಸದಸ್ಯರು ಹಾಜರಿದ್ದರು.[ಅಧಿಕಾರಿಗಳಿಗೆ ಲಂಚ ಕೊಟ್ರೆ ಕೊಂದು ಹಾಕ್ತೀನಿ: ಮುಖ್ಯಮಂತ್ರಿ]
ತೆಲಂಗಾಣ ರಾಜ್ಯದ ಜನರ ಅಭಿವೃದ್ಧಿ, ಏಳ್ಗೆಗಾಗಿ ಸರ್ವ ಧರ್ಮ ಪ್ರಾರ್ಥನೆ ಸಲ್ಲಿಸಲಾಯಿತು. ಇದೇ ವೇಳೆ ಸ್ವಾಮೀಜಿಯೊಬ್ಬರನ್ನು ಮುಖ್ಯಮಂತ್ರಿ ಬಳಸುವ ಕುರ್ಚಿ ಮೇಲೆ ಕೆಸಿಆರ್ ಕೂರಿಸಿದ್ದರಿಂದ ವಿವಾದಕ್ಕೆ ಹಾಗೂ ತೀವ್ರ ಟೀಕೆಗೆ ಗುರಿಯಾಗಿದೆ.