ತೆಲಂಗಾಣದಲ್ಲಿ ಬಿಸಿಲಿಗೆ 30ಬಲಿ, ಆಂಧ್ರದಲ್ಲೂ ಜೀವ ಹಾನಿ
ಮೆಹಬೂಬ್ ನಗರ, ನಿಜಾಮಾಬಾದ್ ನಲ್ಲಿ 44 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದರೆ, ಅದಿಲಾಬಾದ್ ನಲ್ಲಿ 44.5 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಅಧಿಕೃತ ವರದಿಗಳ ಪ್ರಕಾರ ಆಂಧ್ರ ಹಾಗೂ ತೆಲಂಗಾಣದಲ್ಲಿ ಬಿಸಿಲಿಗೆ 12 ಜನ ಅಸುನೀಗಿದ್ದಾರೆ.
ಹೈದರಾಬಾದ್, ಏಪ್ರಿಲ್ 20: ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಬಿಸಲಿನ ರುದ್ರ ನರ್ತನ ಮುಂದುವರಿದಿದೆ. ಉಭಯ ರಾಜ್ಯಗಳ ಬಹುತೇಕ ಜಿಲ್ಲೆಗಳಲ್ಲಿ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ದಾಟಿದ್ದು ತೆಲಂಗಾಣದಲ್ಲಿ 30 ಜನ ಸಾವನ್ನಪ್ಪಿರುವ ವರದಿಯಾಗಿದೆ.
ಮೆಹಬೂಬ್ ನಗರ, ನಿಜಾಮಾಬಾದ್ ನಲ್ಲಿ 44 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದರೆ, ಅದಿಲಾಬಾದ್ ನಲ್ಲಿ 44.5 ಡಿಗ್ರಿ ಉಷ್ಣಾಂಶ ದಾಖಲಾಗಿದೆ.[ಸುಡುವ ಬೇಸಿಗೆಯಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ]
ಅನಧಿಕೃತ ಮೂಲಗಳ ಪ್ರಕಾರ ತೆಲಂಗಾಣದಲ್ಲಿ ಬೇಸಿಗೆಯ ಬಿಸಿಯಿಂದ 30 ಜನ ಸಾವನ್ನಪ್ಪಿದ್ದಾರೆ. ಆದರೆ ಬಿಸಿಲಿನಿಂದ ಸಾವಿಗೀಡಾದವರ ಬಗ್ಗೆ ಮಾಹಿತಿ ಕಲೆ ಹಾಕಲು ಸರಕಾರ ನೇಮಿಸಿದ ಸಮಿತಿ ತನಿಖೆ ನಡೆಸಿದಾಗ 15 ಜನ ಸಾವನ್ನಪ್ಪಿದ್ದು ಬೆಳಕಿಗೆ ಬಂದಿದ್ದರೆ, ಇದರಲ್ಲಿ ಕೇವಲ7 ಜನ ಮಾತ್ರ ಬಿಸಿಲಿನಿಂದ ಸತ್ತಿದ್ದಾರೆ ಎಂದು ಸಮಿತಿ ಹೇಳಿದೆ.
ಅಧಿಕೃತ ವರದಿಗಳ ಪ್ರಕಾರ ಆಂಧ್ರದಲ್ಲಿ 5 ಜನ ಸಾವನ್ನಪ್ಪಿದ್ದು ಒಟ್ಟು ಎರಡೂ ರಾಜ್ಯಗಳಲ್ಲಿ 12 ಜನ ಅಸುನೀಗಿದ್ದಾರೆ.[ಮುಂಗಾರು ಮುನ್ಸೂಚನೆ, ಹವಾಮಾನ ಇಲಾಖೆಯಿಂದ ಸಿಹಿ ಸುದ್ದಿ]
ಇನ್ನು ತೆಲಂಗಾಣ ಮತ್ತು ಆಂಧ್ರ ಪ್ರದೇಶ ಸರಕಾರಗಳು ಜನರಿಗೆ ಮನೆಯೊಳಗೇ ಇರುವಂತೆ ಮನವಿ ಮಾಡಿಕೊಂಡಿವೆ. ಮತ್ತು ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಮನವಿಯಲ್ಲಿ ತಿಳಿಸಿವೆ. ಅದರಲ್ಲೂ ಕೃಷಿ ಮತ್ತು ನಿರ್ಮಾಣ ಕಾಮಗಾರಿಗಳಲ್ಲಿ ತೊಡಗಿಸಿಕೊಂಡವರು ಹೆಚ್ಚು ತೊಂದರೆ ಅನುಭವಿಸುತ್ತಿದ್ದು ಇವರನ್ನು ಬೆಳಿಗ್ಗೆ ಮಾತ್ರ ಕೆಲಸ ಮಾಡುವಂತೆ ಕೇಳಿಕೊಳ್ಳಲಾಗಿದೆ.
ಗರಿಷ್ಠ 48 ಡಿಗ್ರಿ ಸೆಲ್ಸಿಯಸ್ ವರೆಗೆ ಉಷ್ಣಾಂಶ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.