ಸಿಬಿಐ ಅಧಿಕಾರಿಗಳ ಸೋಗಿನಲ್ಲಿ 45 ಕೆ.ಜಿ. ಚಿನ್ನ ದೋಚಿ ಪರಾರಿ
ಹೈದರಾಬಾದ್, ಡಿಸೆಂಬರ್ 28: ಸಿಬಿಐ ಅಧಿಕಾರಿಗಳು ಎಂದು ಹೇಳಿಕೊಂಡ ನಾಲ್ವರು ಅಪರಿಚಿತರು ಬುಧವಾರ ಹೈದರಾಬಾದ್ ನ ಮುತ್ತೂಟ್ ಫೈನಾನ್ಸ್ ನಲ್ಲಿ 45 ಕೆ.ಜಿ. ಚಿನ್ನವನ್ನು ದೋಚಿದ್ದಾರೆ ಎಂದು ನಗರದ ಪೊಲೀಸರು ತಿಳಿಸಿದ್ದಾರೆ. ರಾಮುಚಂದ್ರಾಪುರಂಅನ ಕಚೇರಿಯಲ್ಲಿ ಸಿಬ್ಬಂದಿಗೆ ಶಸ್ತ್ರಾಸ್ತ್ರ ತೋರಿಸಿ, ಹನ್ನೆರಡು ಕೋಟಿ ರುಪಾಯಿ ಬೆಲೆ ಬಾಳುವ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಪೊಲೀಸರು ನೀಡಿದ ಮಾಹಿತಿ ಪ್ರಕಾರ, ನಾಲ್ವರು ಮುತ್ತೂಟ್ ಫೈನಾನ್ಸ್ ಶಾಖೆ ಪ್ರವೇಶಿಸಿ, ಸಿಬ್ಬಂದಿ ಹತ್ತಿರ ತಾವು ಸಿಬಿಐ ಅಧಿಕಾರಿಗಳು. ದಾಖಲೆಗಳು ಮತ್ತು ಲಾಕರ್ ನಲ್ಲಿರುವ ಚಿನ್ನವನ್ನು ಪರಿಶೀಲಿಸಬೇಕು ಎಂದು ಹೇಳಿಕೊಂಡಿದ್ದಾರೆ. ಆಗ ಅಲ್ಲಿನ ಸಿಬ್ಬಂದಿ, ನಮ್ಮ ಹಿರಿಯ ಅಧಿಕಾರಿಗಳ ಅನುಮತಿ ಇಲ್ಲದೆ ಲಾಕರ್ ತೋರಿಸಲು ಸಾಧ್ಯವಿಲ್ಲ ಎಂದಿದ್ದಾರೆ.[14 ಜನರ ಡಕಾಯಿತರ ಗುಂಪಿನೊಂದಿಗೆ 52.81ಲಕ್ಷ ಹೊಸ ನೋಟು ವಶ]
ಸಿಬಿಐ ಅಧಿಕಾರಿಗಳ ಆದೇಶವನ್ನೇ ಧಿಕ್ಕರಿಸುತ್ತೀರಾ ಎಂದು ಅಪರಿಚಿತ ವ್ಯಕ್ತಿ ಆವಾಜ್ ಹಾಕಿದ್ದಾನೆ. ಆ ನಂತರ ಹೆದರಿ ಲಾಕರ್ ತೆರೆದಾಗ ತಾವು ತಂದಿದ್ದ ಬ್ಯಾಗ್ ನೊಳಗೆ ಚಿನ್ನಾಭರಣ ಹಾಕಿಕೊಳ್ಳಲು ಆರಂಭಿಸಿದ್ದಾರೆ ಅಪರಿಚಿತರು. ಅದಕ್ಕೆ ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿದಾಗ ಪಿಸ್ತೂಲು ತೋರಿಸಿ, ಹೆದರಿಸಿ ಶೌಚಾಲಯದಲ್ಲಿ ಸಿಬ್ಬಂದಿಯನ್ನು ಕೂಡಿಹಾಕಿದ್ದಾರೆ.[ಹಣ ದೋಚಿದವರು ತೆರಳಿದ್ದು ಪವಿತ್ರ ಗಂಗಾ ಸ್ನಾನಕ್ಕೆ!]
ಸಿಸಿಟಿವಿಯ ಹಾರ್ಡ್ ಡಿಸ್ಕ್ ಅನ್ನು ಕೂಡ ಅಪರಿಚಿತ ದುಷ್ಕರ್ಮಿಗಳು ಹೊತ್ತೊಯ್ದು, ಕಾರಿನಲ್ಲಿ ಪರಾರಿಯಾಗಿದ್ದಾರೆ. ಅಪರಾಧಿಗಳ ಪತ್ತೆಗಾಗಿ ಸೈಬರಾಬಾದ್ ಪೊಲೀಸ್ ಕಮಿಷನರ್ ಸಂದೀಪ್ ಶಾಂಡಿಲ್ಯ ಐದು ತಂಡಗಳನ್ನು ರಚಿಸಿದ್ದಾರೆ.