ಸಿಬಿಐಗೆ ಹಿನ್ನಡೆ, ಜಗನ್ ರೆಡ್ಡಿ ಜಾಮೀನು ಮುಂದುವರಿಕೆ
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ವೈಎಸ್ಸಾರ್ ಪಕ್ಷದ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಅವರು ಷರತ್ತುಗಳನ್ನು ಮೀರಿದ್ದಾರೆ ಅವರ ಜಾಮೀನು ರದ್ದುಗೊಳಿಸಿ ಎಂದು ಸಿಬಿಐ ಸಲ್ಲಿಸಿದ್ದ ಅರ್ಜಿ ತಿರಸ್ಕಾರಗೊಂಡಿದೆ.
ಹೈದರಾಬಾದ್, ಏಪ್ರಿಲ್ 28: ಅಕ್ರಮ ಆಸ್ತಿ ಪ್ರಕರಣ ಆರೋಪ ಹೊತ್ತಿರುವ ವೈಎಸ್ಸಾರ್ ಕಾಂಗ್ರೆಸ್ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಅವರಿಗೆ ಶಾಕ್ ನೀಡಲು ಮುಂದಾದ ಸಿಬಿಐ ತಂಡಕ್ಕೆ ಭಾರಿ ಹಿನ್ನಡೆಯುಂಟಾಗಿದೆ. ಜಗನ್ ಅವರ ಜಾಮೀನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸ್ಥಳೀಯ ನ್ಯಾಯಾಲಯವೊಂದು ತಿರಸ್ಕರಿಸಿದೆ.
ಸರ್ಕಾರಿ ಯೋಜನೆಗಳನ್ನು ದುರುಪಯೋಗ ಮಾಡಿಕೊಂಡು ಹಣ ಗಳಿಸಿದ ಆರೋಪ ಹೊತ್ತಿರುವ ಜಗನ್ ಸಂಸ್ಥೆಯ ಮೇಲೆ ಸರಿ ಸುಮಾರು 11 ದೋಷಾರೋಪಣ ಪಟ್ಟಿಯನ್ನು ಸಿಬಿಐ ಸಲ್ಲಿದಿದೆ.
ಅಕ್ರಮ ಆಸ್ತಿ ಪ್ರಕರಣದ ಆರೋಪಿಯಾಗಿ 2012ರ ಮೇ 27ರಂದು ಬಂಧನಕ್ಕೊಳಗಾಗಿ ಚಂಚಲಗುಡ ಜೈಲು ಸೇರಿದ್ದ ಜಗನ್ ಮೋಹನ್ ರೆಡ್ಡಿ ಅವರಿಗೆ ಸದ್ಯ ಜಾಮೀನು ಮಂಜೂರಾಗಿದೆ.
ಜಗನ್ ವಿರುದ್ಧ ಸಿಬಿಐ ತಂಡ ಮೊದಲ ಚಾರ್ಜ್ ಶೀಟ್ ಮಾರ್ಚ್ 31,2012ರಂದು ಸಲ್ಲಿಸಿತು. ಅರವಿಂದೋ ಫಾರ್ಮ ಕಂಪನಿಗೆ 75 ಎಕರೆ ಭೂಮಿ ಹಂಚಿಕೆ ವಿವಾದ ಜಗನ್ ಗೆ ಉರುಳಾಯಿತು. ಪ್ರತಿ ಬಾರಿ ಜಾಮೀನು ಅರ್ಜಿ ಕೋರ್ಟಿನಲ್ಲಿ ವಿಚಾರಣೆಗೆ ಬಂದಾಗಲೂ ಹೊಸ ಹೊಸ ಚಾರ್ಚ್ ಶೀಟ್ ಸಲ್ಲಿಸಲಾಗುತ್ತಿತ್ತು. ಹೀಗಾಗಿ ಪ್ರಕರಣ ತೀರ್ಪು ನೀಡಿಕೆ ವಿಳಂಬಗೊಂಡಿತ್ತು.