ತೆಲಂಗಾಣ ಸಿಎಂ ಬಚ್ಚಲುಮನೆಗೂ ಬುಲೆಟ್ ಪ್ರೂಫ್ ಗಾಜು!
ಹೈದರಾಬಾದ್, ನವೆಂಬರ್ 23: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಹೊಸ್ ಗೃಹ ಕಚೇರಿಯ ಸ್ನಾನಗೃಹದಲ್ಲೂ ಗುಂಡು ನಿರೋಧಕ ವ್ಯವಸ್ಥೆ ಮಾಡಲಾಗಿದೆ. ಸುರಕ್ಷತಾ ಕ್ರಮದ ಭಾಗವಾಗಿ ಅದ್ಧೂರಿ ಬಂಗಲೆಯ ಕಿಟಕಿಗಳಿಗೂ ಬುಲೆಟ್ ಪ್ರೂಫ್ ಗಾಜುಗಳನ್ನು ಬಳಸಲಾಗಿದೆ.
ಬೇಗಂ ಪೇಟ್ ನಲ್ಲಿರುವ ಕೆಸಿಆರ್ ಅಧಿಕೃತ ನಿವಾಸವನ್ನು ಕೋಟೆಯಂತೆ ಕಟ್ಟಲಾಗಿದೆ. ಶಸ್ತ್ರಸಜ್ಜಿತ ಅಂಗರಕ್ಷಕರ ಜೊತೆಗೆ ಸಿಸಿಟಿವಿಗಳು, ಎತ್ತರದ ಕಾಂಪೌಂಡ್, ಸ್ನಾನಗೃಹಗಳು, ಮಲಗುವ ಕೋಣೆಗಳಿಗೂ ಬುಲೆಟ್ ಪ್ರೂಫ್ ಗಾಜುಗಳನ್ನು ಅಳವಡಿಸಲಾಗಿದೆ. ಚಂದ್ರಶೇಖರ್ ರಾವ್ ಮತ್ತು ಅವರ ಮಗ ಇರುವ ಕೋಣೆಗಳ ಕಿಟಕಿಗಳಿಗೆ ಉತ್ತಮ ಗುಣಮಟ್ಟದ ಬುಲೆಟ್ ಪ್ರೂಫ್ ಗಾಜು ಹಾಕಲಾಗಿದೆ.[ಅಧಿಕಾರಿಗಳಿಗೆ ಲಂಚ ಕೊಟ್ರೆ ಕೊಂದು ಹಾಕ್ತೀನಿ: ಮುಖ್ಯಮಂತ್ರಿ]
ತೆಲಂಗಾಣ ಮುಖ್ಯಮಂತ್ರಿ ಮೇಲೆ ಗುಂಡಿನ ದಾಳಿಯಾಗಬಹುದು ಎಂಬ ಮುಂಜಾಗ್ರತೆಯಿಂದ ಹಲವು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಿಎಂ ಕೆಸಿಆರ್ ಹೊಸ ನಿವಾಸಕ್ಕೆ ಗುರುವಾರ ಸ್ಥಳಾಂತರಗೊಳ್ಳಲಿದ್ದಾರೆ. ಆ ಹಿನ್ನೆಲೆಯಲ್ಲಿ ಈಗಾಗಲೇ ಸುರಕ್ಷತಾ ಕ್ರಮಗಳನ್ನು ಮಾಡಲಾಗಿದೆ.
ಐವತ್ತು ಮಂದಿ ಶಸ್ತ್ರಸಜ್ಜಿತ ರಕ್ಷಕರು ಮುಖ್ಯಮಂತ್ರಿ ನಿವಾಸದ ಮೇಲೆ ನಿಗಾ ಇಡಲಿದ್ದಾರೆ. ಈಗಾಗಲೇ ಬಂಗಲೆಯ ಗೇಟ್ ಬಳಿ ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿದೆ. ಬಂಗಲೆ ಪ್ರವೇಶಕ್ಕೆ ಮುನ್ನವೇ ಮೊಬೈಲ್ ಫೋನ್, ಗಾಡಿಯ ಕೀಗಳನ್ನು ಗೇಟ್ ಬಳಿ ಇರುವ ರಕ್ಷಣಾ ಸಿಬ್ಬಂದಿಗೆ ಒಪ್ಪಿಸಿ ಒಳ ಹೋಗಬೇಕಾಗುತ್ತದೆ.[ಆಂಧ್ರ ಸಿಎಂ ತೆಗಳಿದ್ದಕ್ಕೆ ತೆಲಂಗಾಣ ಸಿಎಂ ಮೇಲೆ ಎಫ್ ಐಆರ್]
ಸದ್ಯಕ್ಕೆ ಕೆ.ಚಂದ್ರಶೇಖರ್ ರಾವ್ ಬಳಸುತ್ತಿರುವ ಕಾರು ಮೈನ್ ಪ್ರೂಫ್. ಮಾವೋವಾದಿಗಳ ದಾಳಿಯನ್ನು ತಡೆಯಲು ಈ ರೀತಿ ಕಾರು ಬಳಸಲಾಗುತ್ತಿದೆ. ಇದೀಗ ಬುಲೆಟ್ ಪ್ರೂಫ್ ಕೂಡ ಅಳವಡಿಸಿಕೊಂಡಿರುವುದು ಗುಪ್ತಚರ ಇಲಾಖೆ ಅಧಿಕಾರಿಗಳ ಸಲಹೆ ಮೇರೆಗೆ ಎಂದು ತಿಳಿದುಬಂದಿದೆ.