ಆಂಧ್ರ ಅನಿಲ ದುರಂತದ 16 ಚಿತ್ರಗಳು
ಹೈದರಾಬಾದ್, ಜೂ. 28 : ಶುಕ್ರವಾರ ಮುಂಜಾನೆ ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಭಾರತೀಯ ಅನಿಲ ಪ್ರಾಧಿಕಾರದ ಭೂಗತ ಕೊಳವೆ ಮಾರ್ಗದಲ್ಲಿ ಅನಿಲ ಸೋರಿಕೆ ಉಂಟಾಗಿ ಹೊತ್ತಿಕೊಂಡ ಬೆಂಕಿ 15 ಜನರನ್ನು ಬಲಿ ತೆಗೆದುಕೊಂಡಿದ್ದು, ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ 18 ಜನರು ಗಾಯಗೊಂಡಿದ್ದಾರೆ.
ಅನಿಲ ಕೊಳವೆ ಮಾರ್ಗ ಸ್ಫೋಟಗೊಂಡ ತೀವ್ರತೆಗೆ ಮಾಮಿಡಿಕುಡೂರು ಮಂಡಲ ಪಂಚಾಯಿತಿ ವ್ಯಾಪ್ತಿಯ ನಗರಂ ಗ್ರಾಮದಲ್ಲಿ ಹೊಂಡವೊಂದು ಸೃಷ್ಟಿಯಾಗಿದೆ. ಶುಕ್ರವಾರ ಮುಂಜಾಣೆ 5.30ರ ವೇಳೆಗೆ ಈ ದುರಂತ ಸಂಭವಿಸಿದ್ದು, ಬೆಂಕಿ ಕಾಣಿಸಿಕೊಂಡ ಹದಿನೈದು ನಿಮಿಷಗಳಲ್ಲಿ ಗ್ರಾಮದ ಮನೆ, ತೆಂಗಿನ ಮರ, ವಾಹನಗಳು ಬೆಂಕಿಗೆ ಆಹುತಿಯಾಗಿವೆ.
ಕೊಳವೆ ಮಾರ್ಗದ ಅನಿಲ ಸಂಪರ್ಕವನ್ನು ಸ್ಥಗಿತಗೊಳಿಸಿದ ಬಳಿಕ ಎಂಟು ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿದರು. ಘಟನೆಯಲ್ಲಿ 15 ಜನರು ಮೃತಪಟ್ಟಿದ್ದು, 13 ಜನರು ಸ್ಥಳದಲ್ಲಿಯೇ ಸುಟ್ಟು ಕರಕಲಾದರೆ, ಗಂಭೀರವಾಗಿ ಗಾಯಗೊಂಡ ಇಬ್ಬರು ಆಸ್ಪತ್ರೆಗೆ ಸಾಗಿಸುವಾಗ ಮೃಪಟ್ಟಿದ್ದಾರೆ. ಸ್ಫೋಟದ ಚಿತ್ರಗಳು ಇಲ್ಲಿವೆ.
ಶುಕ್ರವಾರ ಮುಂಜಾನೆ ಭೀಕರ ದುರಂತ
ಶುಕ್ರವಾರ ಮುಂಜಾನೆ ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಮಾಮಿಡಿಕುಡೂರು ಮಂಡಲ ಪಂಚಾಯಿತಿ ವ್ಯಾಪ್ತಿಯ ನಗರಂ ಗ್ರಾಮದಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಭಾರತೀಯ ಅನಿಲ ಪ್ರಾಧಿಕಾರದ ಭೂಗತ ಕೊಳವೆ ಮಾರ್ಗದಲ್ಲಿ ಅನಿಲ ಸೋರಿಕೆ ಉಂಟಾಗಿ ಹೊತ್ತಿಕೊಂಡ ಬೆಂಕಿ 15 ಜನರನ್ನು ಬಲಿ ತೆಗೆದುಕೊಂಡಿದ್ದು, ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ 18 ಜನರು ಗಾಯಗೊಂಡಿದ್ದಾರೆ.
15 ನಿಮಿಷದಲ್ಲಿ ಸುಟ್ಟು ಕರಕಲು
ಮುಂಜಾನೆ 5.30ರ ಸುಮಾರಿಗೆ ಅನಿಲ ಕೊಳವೆ ಮಾರ್ಗ ಸ್ಫೋಟಗೊಂಡಿದೆ. ಬೆಂಕಿ ಕಾಣಿಸಿಕೊಂಡ ಹದಿನೈದು ನಿಮಿಷಗಳಲ್ಲಿ ಗ್ರಾಮದ ಮನೆ, ತೆಂಗಿನ ಮರ, ವಾಹನಗಳು ಬೆಂಕಿಗೆ ಆಹುತಿಯಾಗಿವೆ.
ಯಾವುದಿದು ಪೈಪ್ಲೈನ್
ವಿಜಯವಾಡಾದಲ್ಲಿರುವ ಲ್ಯಾನ್ಕೋ ಕಂಪನಿಯ ಕೊಂಡಪಲ್ಲಿ 368 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದನಾ ಘಟಕಕ್ಕೆ ಅನಿಲ ಪೂರೈಕೆ ಮಾಡಲು ಈ ಪೈಪ್ಲೈನ್ ನಿರ್ಮಾಣ ಮಾಡಲಾಗಿದೆ. ಅನಿಲವನ್ನು ಒಎನ್ಜಿಸಿ ಪೂರೈಕೆ ಮಾಡುತ್ತಿತ್ತು. ಆದರೆ ಪೈಪ್ ಹಳೆಯದಾಗಿದ್ದರಿಂದ ಸೋರಿಕೆ ಉಂಟಾಗಿ ದುರಂತ ಸಂಭವಿಸಿದೆ.
ನಾಯಕರ ಸಂತಾಪ ಪರಿಹಾರ ಘೋಷಣೆ
ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರದಾನ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮುಂತಾದ ನಾಯಕರು ದುರಂತದ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ದುರಂತದಲ್ಲಿ ಮೃತಪಟ್ಟ ಕುಟುಂಬದವರಿಗೆ ತಲಾ 25 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ.
ಟೀ ವ್ಯಾಪಾರಿಯಿಂದಾಗಿ ಸ್ಫೋಟ
ಗ್ರಾಮಸ್ಥರು ಹೇಳುವ ಪ್ರಕಾರ ಗುರುವಾರ ರಾತ್ರಿಯಿಂದಲೇ ಗ್ರಾಮದಲ್ಲಿ ಅನಿಲದ ವಾಸನೆ ಬರುತ್ತಿತ್ತು. ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಶುಕ್ರವಾರ ಮುಂಜಾನೆ ಬೆಳಗ್ಗೆ ಚಹಾ ವ್ಯಾಪಾರಿಯೊಬ್ಬರು ಒಲೆ ಹೊತ್ತಿಸಿದಾಗ, ಊರೆಲ್ಲಾ ವ್ಯಾಪಿಸಿದ್ದ ಅನಿಲಕ್ಕೆ ಬೆಂಕಿ ತಗುಲಿ ಸ್ಫೋಟ ಸಂಭವಿಸಿದೆ.
18 ಇಂಚು ಕೊಳವೆ
ಅನಿಲ ಸಾಗಿಸುವ ಪೈಪ್ ಗಳನ್ನು 5 ರಿಂದ 10 ಅಡಿಗಳಷ್ಟು ಆಳದಲ್ಲಿ ಹಾಕಲಾಗಿರುತ್ತದೆ. ಈ ಅನಿಲ ಮಾರ್ಗದಲ್ಲಿ 18 ಇಂಚು ಅಗಲದ ಪೈಪ್ ಅಳವಡಿಸಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೆಂಕಿಯ ಭೀಕರತೆ ನೋಡಿ
ಕೊಳವೆ ಮಾರ್ಗದಲ್ಲಿ ಅನಿಲ ಸೋರಿಕೆ ಉಂಟಾಗಿರುವ ಪ್ರದೇಶದಲ್ಲಿ ಹೊತ್ತಿಕೊಂಡ ಬೆಂಕಿ ಭೀಕರತೆ ನೋಡಿ.
ಮರಗಳು ಭಸ್ಮ
ಅನಿಲ ಸೋರಿಕೆ ಉಂಟಾಗಿ ಹೊತ್ತಿಕೊಂಡ ಬೆಂಕಿಗೆ ತೆಂಗಿನ ಮರಗಳು ಸುಟ್ಟು ಕರಕಲಾದವು.
ಸುಟ್ಟು ಕರಕಲಾದ ಮನೆ
ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸುಮಾರು 50 ಮನೆಗಳು ಸುಟ್ಟು ಕರಕಲಾಗಿವೆ ಎಂದು ಅಂದಾಜಿಸಲಾಗಿದೆ. ನಷ್ಟದ ಪೂರ್ಣ ವಿವರ ಇನ್ನು ಲಭ್ಯವಾಗಿಲ್ಲ.
ಮುಖ್ಯಮಂತ್ರಿಗಳ ಭೇಟಿ
ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಘಟನೆ ಕುರಿತು ತನಿಖೆಗೆ ಆದೇಶಿಸಿದ್ದಾರೆ. ದುರಂತದ ಮಾಹಿತಿ ಲಭ್ಯವಾಗುತ್ತಿದ್ದಂತೆ ಅವರು, ದೆಹಲಿ ಪ್ರವಾಸ ರದ್ದುಗೊಳಿಸಿ ಘಟನೆ ನಡೆದ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಸುಟ್ಟು ಕರಕಲಾದ ಬೈಕ್
ಅನಿಲ ಸೋರಿಕೆಯಿಂದ ಹೊತ್ತಿಕೊಂಡ ಬೆಂಕಿಯ ಕೆನ್ನಾಗಿಲಿಗೆ ಅಕ್ಕಪಕ್ಕದಲ್ಲಿದ್ದ ಎಲ್ಲಾ ವಸ್ತುಗಳನ್ನು ಆಹುತಿ ತೆಗೆದುಕೊಂಡಿದೆ. ಬೆಂಕಿಯಿಂದಾಗಿ ಮನೆಯ ಮಂದೆ ನಿಲ್ಲಿಸಿದ್ದ ಬೈಕ್ ಸಹ ಸುಟ್ಟು ಕರಕಲಾಗಿದೆ.
ಸ್ಮಶಾನದಂತಾದ ನಗರಂ ಗ್ರಾಮ
ಬೆಂಕಿಯ ಕೆನ್ನಾಗಲಿಗೆಗೆ ಸಿಲುಕಿ ಎಲ್ಲಾ ವಸ್ತುಗಳು ಆಹುತಿಯಾದ ನಂತರ ಗ್ರಾಮ ಸ್ಮಶಾನದಂತೆ ಕಾಣುತ್ತಿತ್ತು. ದಟ್ಟ ಹೊಗೆ ಗ್ರಾಮದಲ್ಲಿ ಆವರಿಸಿತ್ತು.
ತರಕಾರಿಗಳು ಬೆಂದ ಹೋದವು
ಗ್ರಾಮದ ಮನೆಗಳಲ್ಲಿ ಮತ್ತು ಹೋಟೆಲ್ ಗಳಲ್ಲಿ ಸಂಗ್ರಹಿಸಿಟ್ಟಿದ್ದ ತರಕಾರಿಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಬೆಂದು ಹೋದವು.
ಭೀಕರತೆರಗೆ ಸಾಕ್ಷಿಯಾದ ಹಕ್ಕಿಗಳು
ಅನಿಲ ಸೋರಿಕೆ ಸಂಭವಿಸಿ ಬೆಂಕಿ ಹೊತ್ತಿಕೊಂಡ ಸ್ಥಳದ ಸುತ್ತಮತ್ತಲಿನ ಮರಗಳ ಮೇಲೆ ಕುಳಿತಿದ್ದ ಪಕ್ಷಿಗಳು ಬೆಂಕಿಯಲ್ಲಿ ಸುಟ್ಟು ಕರಕಲಾದವು. ಹಕ್ಕಿಗಳ ಸಾವು ದುರಂತದ ಭೀಕರತೆಗೆ ಸಾಕ್ಷಿಯಾಗಿತ್ತು.
ಮೂಕ ಹಕ್ಕಿಗಳು ಬೆಂಕಿಯಲ್ಲಿ ಬೆಂದವು
ಅನಿಲ ಸೋರಿಕೆಯಿಂದಾಗಿ ಮುಂಜಾನೆ ಹೊತ್ತಿಕೊಂಡ ಬೆಂಕಿ ಹಕ್ಕಿಗಳನ್ನು ಬಲಿತೆಗೆದುಕೊಂಡಿತು.
ಪೊಲೀಸರಿಂದ ಪರಿಶೀಲನೆ
ಅಗ್ನಿ ದುರಂತ ಸಂಭವಿಸಿದ ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸಿದರು. ಈ ಅಗ್ನಿ ದುರಂತದಿಂದಾಗಿ ಎಷ್ಟು ನಷ್ಟ ಸಂಭವಿಸಿದೆ ಎಂಬ ಕುರಿತು ಇನ್ನೂ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ.