ಓವೈಸಿಗೆ ತಾಕತ್ತಿದ್ದರೆ ಅಂಬರಪೇಟೆಯಲ್ಲಿ ಚುನಾವಣೆಗೆ ನಿಂತು ಗೆಲ್ಲಲಿ!
ಓವೈಸಿಯನ್ನು ಸೋಲಿಸುವುದಕ್ಕೆ ಅಮಿತ್ ಶಾ ಬರುವ ಅಗತ್ಯವಿಲ್ಲ, ನಮ್ಮ ಕ್ಷೇತ್ರದಲ್ಲಿರುವ ಸಾವಿರಾರು ಬಿಜೆಪಿ ಕಾರ್ಯಕರ್ತರೇ ಸಾಕು ಓವೈಸಿಯನ್ನು ಸೋಲಿಸುವುದಕ್ಕೆ ಎಂದು ಬಿಜೆಪಿ ಮುಖಂಡರೊಬ್ಬರು ವ್ಯಂಗ್ಯವಾಡಿದ್ದಾರೆ.
ಹೈದರಾಬಾದ್, ಮೇ 26: ಸದಾ ವಿವಾದಾತ್ಮಕ ಹೇಳಿಕೆ ನೀಡುವುದರಲ್ಲಿ ಎತ್ತಿದ ಕೈ ಎನ್ನಿಸಿರುವ ಹೈದರಾಬಾದ್ ಸಂಸದ ಅಸಾದುದ್ದಿನ್ ಓವೈಸಿ ಇಂದು ಮತ್ತೊಮ್ಮೆ ಸುದ್ದಿಯಾಗಿರುವುದು ಅವರು ಅಮಿತ್ ಶಾ ಗೆ ಒಡ್ಡಿದ ಬಹಿರಂಗ ಸವಾಲಿನಿಂದ. ಆದರೆ ಇದೀಗ ಬಿಜೆಪಿ ಮುಖಂಡರೊಬ್ಬರು ಓವೈಸಿಗೆ ಪ್ರತಿಸವಾಲೆಸೆದಿರುವುದು ಉರಿವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತಾಗಿದೆ.
ಅಮಿತ್ ಶಾ ಗೆ ಧೈರ್ಯವಿದ್ದರೆ ನನ್ನ ವಿರುದ್ಧ ಚುನಾವಣೆಗೆ ನಿಂತು ಗೆಲ್ಲಲಿ ಎಂದು ಸವಾಲೆಸಿದಿದ್ದೆ ಓವೈಸಿ ಮಾತಿಗೆ ಪ್ರತಿಕ್ರಿಯಿಸಿದ ತೆಲಂಗಾಣ ವಿಧಾನಸಭೆಯ ಬಿಜೆಪಿ ಮುಖಂಡ ಜಿ.ಕಿಶನ್ ರೆಡ್ಡಿ, ಓವೈಸಿಗೆ ತಾಕತ್ತಿದ್ದರೆ ಅಂಬರಪೇಟೆಯಲ್ಲಿ ಚುನಾವಣೆಗೆ ನಿಂತು ಗೆಲ್ಲಲಿ ಎಂದು ಪ್ರತಿಸವಾಲು ಹಾಕಿದ್ದಾರೆ. ಓವೈಸಿಯನ್ನು ಸೋಲಿಸುವುದಕ್ಕೆ ಅಮಿತ್ ಶಾ ಬರುವ ಅಗತ್ಯವಿಲ್ಲ, ನಮ್ಮ ಕ್ಷೇತ್ರದಲ್ಲಿರುವ ಸಾವಿರಾರು ಬಿಜೆಪಿ ಕಾರ್ಯಕರ್ತರೇ ಸಾಕು ಓವೈಸಿಯನ್ನು ಸೋಲಿಸುವುದಕ್ಕೆ ಎಂದು ಅವರು ವ್ಯಂಗ್ಯವಾಡಿದ್ದಾರೆ.[ಧೈರ್ಯವಿದ್ದರೆ ನನ್ನ ವಿರುದ್ಧ ನಿಂತು ಗೆಲ್ಲಿ: ಅಮಿತ್ ಶಾಗೆ ಓವೈಸಿ ಸವಾಲು]
ಮೂರುದಿನಗಳ ತೆಲಂಗಾಣ ಪ್ರವಾಸದಲ್ಲಿದ್ದ ಅಮಿತ್ ಶಾ ರನ್ನು ಟೀಕಿಸಿದ್ದ ಓವೈಸಿ, ಅಮಿತ್ ಶಾ ಅವರಿಗೆ ತೆಲಂಗಾಣ ಈಗ ನೆನಪಾಗಿದ್ದೇನೋ ಎಂದು ವ್ಯಂಗ್ಯವಾಡಿದ್ದರು. ಅಲ್ಲದೆ, ಕೇಂದ್ರ ಸರ್ಕಾರ ತೆಲಂಗಾಣಕ್ಕೆ ನೀಡಿದ್ದ ಒಂದು ಲಕ್ಷ ಕೋಟಿ ಅನುದಾನದ ಬಗ್ಗೆಯೂ ಮಾತನಾಡಿದ್ದ ಅವರು, ಈ ಅನುದಾನವನ್ನೇನು ಕೇಂದ್ರ ನಾಯಕರು ತಮ್ಮ ಜೇಬಿನಿಂದ ಕೊಡುತ್ತಿಲ್ಲ, ಅವರ ಜೇಬಿನಿಂದ ಪಡೆಯುವುದಕ್ಕೆ ನಾವೇನು ಭಿಕ್ಷುಕರಲ್ಲ. ಕೇಂದ್ರದಿಂದ ಅನುದಾನ ಪಡೆಯುವುದು ನಮ್ಮ ಸಾಂವಿಧಾನಿಕ ಹಕ್ಕು ಎಂದಿದ್ದರು.
ಒಟ್ಟಿನಲ್ಲಿ 2019 ರಲ್ಲಿ ನಡೆಯಲಿರುವ ತೆಲಂಗಾಣ ಚುನಾವಣೆ ರಾಜಕೀಯ ನಾಯಕರ ಹಗ್ಗಜಗ್ಗಾಟಕ್ಕೆ ಸಾಕ್ಷಿಯಾಗುವುದಂತೂ ಸುಳ್ಳಲ್ಲ.