ಆ ಪುಟ್ಟ ಬಾಲಕನಿಗೆ ಪೊಲೀಸ್ ಅಧಿಕಾರಿಗಳ ಸೆಲ್ಯೂಟ್!
ಹೈದರಾಬಾದ್, ಡಿಸೆಂಬರ್, 16: ನಾವು ಯಾವುದೋ ಒಂದು ಸಿನಿಮಾದಲ್ಲೋ, ಕತೆಯಲ್ಲೋ ಒಬ್ಬ ಸಾಮಾನ್ಯ ಮನುಷ್ಯ ಒಂದು ದಿನದ ಮಟ್ಟಿಗೆ ಸಿಎಂ ಆಗೋದು, ಪ್ರಧಾನಿ ಆಗೋದನ್ನು ನೋಡಿರ್ತೇವೆ. ಆದರೆ 8 ವರ್ಷದ ಬಾಲಕನೊಬ್ಬ ಒಂದು ದಿನದ ಮಟ್ಟಿಗೆ ಪೊಲೀಸ್ ಕಮಿಷನರ್ ಆಗಿ ಕಾರ್ಯನಿರ್ವಹಿಸಿದ್ದಾನೆ.
ಏನು ಹೇಳ್ತಾ ಇದ್ದೀರಾ ಇದು ಸಾಧ್ಯನಾ ಎಂದು ಕೇಳುವ ನಿಮ್ಮ ಪ್ರಶ್ನೆಗೆ ಉತ್ತರವೂ ಸಿಗುತ್ತದೆ, ಜೊತೆಗೆ ಬೇಸರವೂ ಕೂಡ. ಏಕೆಂದರೆ ಸದಾ ಗಡುಸಾಗಿರುವ, ಕಡು ಮನಸ್ಸಿನ ಪೊಲೀಸ್ ಅಧಿಕಾರಿಗಳ ಕಣ್ಣಲ್ಲಿಯೂ ನೀರು ಹರಿಯಿತು ಎಂದಾಗ ನಿಮ್ಮ ಕಣ್ಣಲ್ಲಿ ನೀರು ಬಂದರೆ ಆಶ್ವರ್ಯಪಡಬೇಡಿ. ಅಂತಹ ಮನಕಲುಕುವ ಜೊತೆಗೆ ಸಾರ್ಥಕ ಭಾವ ಪಡೆದ ಸಂದರ್ಭ ಒಂದಿದೆ.
ಹೈದರಾಬಾದಿನ 8 ವರ್ಷದ ಬಾಲಕನಿಗೆ ಪೊಲೀಸ್ ಕಮಿಷನರ್ ಆಗಬೇಕೆಂಬ ಮಹಾದಾಸೆ. ಆದರೆ ಆತನ ಬದುಕು ಯಮನ ಕೈಯಲ್ಲಿ. ಹೌದು ಸಾವೋ, ಬದುಕೋ ಎಂಬ ಪ್ರಶ್ನೆಯೊಂದಿಗೆ ಜೀವನ ನಡೆಸುತ್ತಿದೆ ಈ ಬಾಲಕ.[ಕ್ಯಾನ್ಸರ್ ಪೀಡಿತ ಬಾಲಕನಿಗೆ ಪೊಲೀಸ್ ಸಮವಸ್ತ್ರದ ಪುಳಕ]
ಪೊಲೀಸ್ ಕಮಿಷನರ್ ಆಗಬೇಕೆಂಬ ಅಭಿಲಾಷೆ ಹೊಂದಿರುವ ಹೈದರಾಬಾದಿನ 8 ವರ್ಷದ ಬಾಲಕನೇ ಮದಿಪಲ್ಲಿ ರೂಪ್ ಅರೋನಾ. ಈತ ಥಲಸೇಮಿಯಾ ಎಂಬ ಖಾಯಿಲೆಯಿಂದ ನರಳುತ್ತಿದೆ.
ಕೆಲವು ವಾರಗಳಿಗೊಮ್ಮೆ ತನ್ನ ರಕ್ತದ ಪರಿಶುದ್ದೀಕರಣಕ್ಕೆ ತೆರಳುವ ಈತನಿಗೆ ಒಂದು ದಿನದ ಮಟ್ಟಿಗಾದರೂ ಸಮಾಜ ಸುವ್ಯವಸ್ಥೆ ಕಾಪಾಡುವ ಪೊಲೀಸ್ ಆಗಬೇಕು, ಪೊಲೀಸ್ ಬಟ್ಟೆ, ಟೋಪಿ ಧರಿಸಬೇಕು. ಎಲ್ಲರಿಂದ ಸೆಲ್ಯೂಟ್ ಸ್ವೀಕರಿಸಬೇಕು ಎಂಬ ಹೆಬ್ಬಯಕೆ. ಹೀಗೆ ಏನೇನೋ ಕನಸುಗಳು.
ಮಗ ಮದಿಪಲ್ಲಿ ರೂಪ್ ಅರೋನಾ ಕನಸು ನನಸು ಮಾಡಲು ಪ್ರಯತ್ನ ಪಟ್ಟವರೇ ಆತನ ತಂದೆ ತಾಯಿ ರಂಜಿತ ಮತ್ತು ವಿಕ್ರಮ್. ಥಲಸೇಮಿಯಾ ಎಂಬ ರೋಗದಿಂದ ಬಳಲುತ್ತಿರುವ ಮಗನ ಬಳಿ ಪೋಷಕರು ಆತನ ಇಷ್ಟದ ಬಗ್ಗೆ ಕೇಳಿದ್ದಾರೆ.[ಬಾಲಕನ ಕ್ಯಾನ್ಸರ್ ನೋವು ಮರೆಸಿದ 'ತೇಜಸ್']
ತಂದೆ ತಾಯಿಗೆ ಮಗನನ್ನು ಬದುಕಿಸಿಕೊಳ್ಳುವ ಜೊತೆಗೆ ಆತನ ಕನಸುಗಳನ್ನು ಈಡೇರಿಸುವ ತುಡಿತ. ಆದರೆ ಆತ ಪೊಲೀಸ್ ಕಮೀಷನರ್ ಆಗಬೇಕೆಂಬ ಕನಸು ಸಾಮಾನ್ಯವಾದುದಲ್ಲ. ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿದರೂ ಅವರು ನಮ್ಮ ಮನವಿಗೆ ಒಪ್ಪುತ್ತಾರಾ ಎಂಬ ಅನುಮಾನ ಬೇರೆ.
ಮೊದಲಿನಿಂದಲೂ ಪೊಲೀಸ್ ಆಫೀಸರ್ ಆಗಬೇಕು ಎಂದು ಇಚ್ಛಿಸುತ್ತಿದ್ದ ಮಗನ ಆಸೆ ಈಡೇರಿಸಲು ಧೈರ್ಯಮಾಡಿದ ಪೋಷಕರು ನಗರದ ಪೊಲೀಸ್ ಕಮೀಷನರ್ ನ್ನು ಭೇಟಿ ಮಾಡಿ ಅವನ ಆಸೆಯನ್ನು ಅವರ ಮುಂದೆ ತೋಡಿಕೊಂಡಿದ್ದಾರೆ. ಇವರ ಮನವಿ, ಅಳಲಿಗೆ ಸ್ಪಂದಿಸಿದ ಹೈದರಾಬಾದಿನ ಪೊಲೀಸರು ಆತ ಒಂದು ದಿನದ ಮಟ್ಟಿಗೆ ಪೊಲೀಸ್ ಕಮೀಷನರ್ ಆಗುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.
ಒಂದು ದಿನ ಪೊಲೀಸ್ ಕಮಿಷನರ್ ಆಗಿ ಅಧಿಕಾರ ಸ್ವೀಕರಿಸಿದ ರೂಪ್ ವಿವಿಧ ಪೊಲೀಸ್ ಅಧಿಕಾರಿಗಳ ಜೊತೆಯಲ್ಲಿ ರಜಾ ಅರ್ಜಿಗೆ ಸಹಿ ಮಾಡಿದ್ದಾನೆ. ಪೊಲೀಸ್ ಅಧಿಕಾರಿಗಳಿಂದ ಸೆಲ್ಯೂಟ್ ಸ್ವೀಕರಿಸಿದ್ದಾನೆ. ಆತನಿಗೆ ಸೆಲ್ಯೂಟ್ ನೀಡುವಾಗ ಅಧಿಕಾರಿಗಳ ಕಣ್ಣುಗಳೇ ತೇವಗೊಂಡಿದ್ದವು.
ಒಟ್ಟಿನಲ್ಲಿ ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳ ಮಧ್ಯೆ ರೂಪ್ ನ ಕನಸು ಈಡೇರಿದೆ. ಸದಾ ನಿರುತ್ಸಾಹದಿಂದ ಇರುತ್ತಿದ್ದ ಈತನ ರಕ್ತದ ಕಣಕಣದಲ್ಲಿಯೂ ಉತ್ಸಾಹ, ಸಂತೋಷ ಕಂಡು ಬರುತ್ತಿದೆ. ನನ್ನ ಕನಸು ಈಡೇರಿತು ಎಂಬ ಭಾವ ಆತನ ಮೊಗದಲ್ಲಿ ಕಾಣುತ್ತಿದೆ.