ಅನಂತಪುರಂ: ದೇವಸ್ಥಾನಕ್ಕೆ ಹೊರಟಿದ್ದ 13 ಜನ ಮಸಣಕ್ಕೆ
ಗುಂಟಕಲ್ ನ ಎರ್ರಾತಿಮ್ಮ ರಾಜು ಕೆರೆಯಲ್ಲಿ ದೋಣಿ ಮುಳುಗಿದ ಪರಿಣಾಮ ಒಂದೇ ಕುಟುಂಬದ 13 ಜನ ಸಾವನ್ನಪ್ಪಿದ್ದಾರೆ. ಇವರಲ್ಲಿ 4 ಜನ ಮಹಿಳೆಯರು ಇಬ್ಬರು ಮಕ್ಕಳು ಸೇರಿದ್ದಾರೆ.
ಅನಂತಪುರಂ, ಏಪ್ರಿಲ್ 28: ಆಂಧ್ರ ಪ್ರದೇಶದ ಅನಂತಪುರಂ ಜಿಲ್ಲೆಯಲ್ಲಿ ನಡೆದ ಭೀಕರ ದೋಣಿ ದುರಂತದಲ್ಲಿ ಒಂದೇ ಕುಟುಂಬದ 13 ಜನ ಸಾವನ್ನಪ್ಪಿದ್ದಾರೆ. ಶುಕ್ರವಾರ ಮಧ್ಯಾಹ್ನ ಈ ದಾರುಣ ಘಟನೆ ಸಂಭವಿಸಿದೆ.
ಗುಂಟಕಲ್ ನ ಎರ್ರಾತಿಮ್ಮ ರಾಜು ಕೆರೆಯಲ್ಲಿ ದೋಣಿ ಮುಳುಗಿದ ಪರಿಣಾಮ ಒಂದೇ ಕುಟುಂಬದ 13 ಜನ ಸಾವನ್ನಪ್ಪಿದ್ದಾರೆ. ಇವರಲ್ಲಿ 4 ಜನ ಮಹಿಳೆಯರು ಇಬ್ಬರು ಮಕ್ಕಳು ಸೇರಿದ್ದಾರೆ. ಮೂಲಗಳ ಪ್ರಕಾರ ಒಟ್ಟು 20 ಜನ ದೋಣಿಯಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ಇವರೆಲ್ಲಾ ಸಮೀಪದ ದೇವಸ್ಥಾನಕ್ಕೆ ಹೊರಟ್ಟಿದ್ದರು. ಕೆರೆಯಲ್ಲಿ ಒಂದು ಸುತ್ತು ಹಾಕುವ ಉದ್ದೇಶದಿಂದ ಕುಟುಂಬಸ್ಥರೆಲ್ಲಾ ದೋಣಿ ಹತ್ತಿದ್ದರು. ಆದರೆ ದೋಣಿ ಮುಳುಗಿದ ಪರಿಣಾಮ 13 ಜನ ಮಸಣ ಸೇರಿದ್ದಾರೆ.
ಕೆರೆಯ ಮಧ್ಯದಲ್ಲಿ ದೋಣಿ ಮುಳುಗಿದ್ದು ಮಕ್ಕಳನ್ನು ಪ್ರತ್ಯಕ್ಷದರ್ಶಿಗಳು ರಕ್ಷಿಸಿದ್ದಾರೆ. ಉಳಿದವರೆಲ್ಲಾ ನೀರು ಪಾಲಾಗಿದ್ದಾರೆ.
ಘಟನೆ ಬಗ್ಗೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ಸಂತಾಪ ಸೂಚಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ.