ಮಹಾದಾಯಿ ಹೋರಾಟ: ಊರಲ್ಲಿ ಇಲ್ಲದವರಿಗೂ ಕೋರ್ಟ್ ಸಮನ್ಸ್
ಗದಗ, ಜುಲೈ 25: ಮಹಾದಾಯಿ, ಕಳಸಾ-ಬಂಡೂರಿ ನಾಲಾ ಯೋಜನೆಗೆ ಆಗ್ರಹಿಸಿ ಗದಗ ಜಿಲ್ಲೆಯ ನರಗುಂದದಲ್ಲಿ 2015ರಲ್ಲಿ ನಡೆದಿದ್ದ ಹೋರಾಟ ನಡೆದಿತ್ತು. ಈ ಸಂಬಂಧ ಘಟನೆಯಲ್ಲಿ ಪಾಲ್ಗೊಳ್ಳದ ಹಾಗೂ ದೂರದ ಊರುಗಳಲ್ಲಿ ಉದ್ಯೋಗದಲ್ಲಿರುವ ಹಲವರನ್ನು ಪೊಲೀಸರು ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದ್ದು ಜನರ ಆಕ್ರೋಶಕ್ಕೆ ಗುರಿಯಾಗಿದೆ.
ನೀರಿನ ಹಕ್ಕಿಗಾಗಿ ನಡೆದ ಹೋರಾಟದಲ್ಲಿ ಭಾಗಿಯಾದರೆಂಬ ಆರೋಪದ ಮೇಲೆ ತಾಲೂಕಿನ ವಿವಿಧ ಗ್ರಾಮಗಳ 258 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇವರಿಗೆಲ್ಲಾ ಇತ್ತೀಚಿಗೆ ಕೋರ್ಟ್ ಸಮನ್ಸ್ ಜಾರಿ ಮಾಡಿತ್ತು. ಕೆಲವರು ಜಾಮೀನು ಪಡೆದುಕೊಂಡಿದ್ದರು. ಉಳಿದವರು ಸೋಮವಾರ ಇಲ್ಲಿನ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಆದರೆ, ರೈತರ ವಿರುದ್ಧ ಪ್ರಕರಣ ದಾಖಲಿಸುವ ಭರದಲ್ಲಿ ಯಡವಟ್ಟು ಮಾಡಿಕೊಂಡಿರುವ ಪೊಲೀಸರು, ತಾಲೂಕಿನ ಜಗಾಪುರ ಗ್ರಾಮದಲ್ಲಿ ಇಲ್ಲದವರ ಹೆಸರನ್ನೂ ಸೇರಿಸಿ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ. ಜಗಾಪುರ ಗ್ರಾಮಸ್ಥರಾದ ಸೈನಿಕ, ಆಂಬ್ಯುಲೆನ್ಸ್ ಚಾಲಕ, ಖಾಸಗಿ ಶಾಲೆ ಶಿಕ್ಷಕ ಮತ್ತು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿರುವ ಉದ್ಯೋಗಿ ಸೇರಿ ಒಟ್ಟು 9 ಜನರಿಗೂ ಸಮನ್ಸ್ ಬಂದಿದೆ. ಘಟನೆಗೂ ಇವರಿಗೂ ಯಾವುದೇ ಸಂಬಂಧವಿಲ್ಲ. ಯಾಕೆಂದರೆ ಘಟನೆ ನಡೆದ ಸಂದರ್ಭದಲ್ಲಿ ಅವರೆಲ್ಲಾ ಊರಿನಲ್ಲಿಯೇ ಇರಲಿಲ್ಲ. ಆದರೂ ಪೊಲೀಸರು ಇವರನ್ನು ಘಟನೆಯಲ್ಲಿ ಸಿಲುಕಿಸಿದ್ದಾರೆ.
ಗುಜರಾತ್ ಗಡಿಯಲ್ಲಿರುವ ಸೈನಿಕನಿಗೂ ಸಮನ್ಸ್
ಜಗಾಪುರ ಗ್ರಾಮದ ಶಂಕರಗೌಡ ಸಿದ್ದನಗೌಡ ಎಂಬುವರಿಗೆ ಕೋರ್ಟ್ನಿಂದ ಸಮನ್ಸ್ ಬಂದಿದ್ದು, ಇವರು ಭಾರತೀಯ ಸೈನ್ಯದಲ್ಲಿ ಸದ್ಯಕ್ಕೆ ಗುಜರಾಜ್ನ ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಉಡುಪಿಯಲ್ಲಿ ಆಂಬ್ಯುಲೆನ್ಸ್ ಚಾಲಕನಾಗಿರುವ ಕುಮಾರ ಬಾರಕೇರ, ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿ ಹಾಗೂ ಖಾಸಗಿ ಶಾಲೆಯ ಶಿಕ್ಷಕನಿಗೂ ಸಮನ್ಸ್ ಬಂದಿವೆ.