ಹುಬ್ಬಳ್ಳಿ-ಧಾರವಾಡದಲ್ಲಿ ಮತ್ತೆರಡು ಸರಗಳ್ಳತನ
ಹುಬ್ಬಳ್ಳಿ, ಆಗಸ್ಟ್, 29: ಸ್ಥಳೀಯ ಪ್ರಗತಿ ಕಾಲೋನಿ ಮತ್ತು ಧಾರವಾಡದ ಸತ್ತೂರ ಬಳಿ ಸರಗಳ್ಳರು ಇಬ್ಬರು ಮಹಿಳೆಯರ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಉಣಕಲ್- ಹೊಸೂರ ಬೈಪಾಸ್ ರೋಡ್, ಪ್ರಗತಿ ಕಾಲೋನಿ ಹತ್ತಿರ ಸುಜಾತಾ ಸುಭಾಸ ಪವಾರ ಎಂಬುವರು ಭಾನುವಾರ ರಾತ್ರಿ 10ಕ್ಕೆ ರಸ್ತೆಯಲ್ಲಿ ಹೋಗುತ್ತಿರುವಾಗ ಎದುರಿನಿಂದ ಬೈಕ್ ನಲ್ಲಿ ಬಂದ ಸರಗಳ್ಳರು ಅವರ ಕುತ್ತಿಗೆಯಲ್ಲಿದ್ದ 35 ಗ್ರಾಂ ತೂಕದ ಮಂಗಳಸೂತ್ರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.[ಎಂಎಂ ಕಲಬುರ್ಗಿ ಹತ್ಯೆ, ಶೀಘ್ರದಲ್ಲೇ ಆರೋಪಿಗಳ ಬಂಧನ : ಸಿಎಂ]
ಧಾರವಾಡ: ವಿದ್ಯಾಗಿರಿಯ ಸತ್ತೂರ ಕಾಲೋನಿ ನಿವಾಸಿ ಶ್ರೀಲಕ್ಷ್ಮೀ ಸುರೇಶಬಾಬು ಯಾದ್ರಿ ಭಾನುವಾರ ಬೆಳಿಗ್ಗೆ ತಮ್ಮ ಮನೆಯಿಂದ ಸುವರ್ಣ ಆರ್ಟ್ಸ್ ಕಾಲೇಜಿನ ಎದುರಿಗೆ ಹೋಗುತ್ತಿದ್ದರು. ಆಗ ಎದುರಿನಿಂದ ಬೈಕ್ ನಲ್ಲಿ ಬಂದ ಸರಗಳ್ಳರು ಶ್ರೀಲಕ್ಷೀ ಅವರ ಕೊರಳಿಗೆ ಕೈಹಾಕಿ, 40 ಗ್ರಾಂ ತೂಕದ ಬಂಗಾರದ ಮಂಗಳ ಸೂತ್ರ ಹಾಗೂ 10 ಗ್ರಾಂ ತೂಕದ ಚೈನನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂಜುಕೋರರ ಬಂಧನ: ಸ್ಥಳೀಯ ಕಸಬಾಪೇಟ ಪೊಲೀಸರು ಇಸ್ಪೀಟ್ ಆಡುತ್ತಿದ್ದ 30 ಜೂಜುಕೋರರನ್ನು ಬಂಧಿಸಿದ್ದಾರೆ.
ಹಳೇಹುಬ್ಬಳ್ಳಿಯ ಸದರಸೋಫಾ ನಿವಾಸಿ ಶಬ್ಬೀರ್ ನೂರ್ ಅಹ್ಮದ್ ವಡ್ಡು ಎಂಬಾತ ಗುಂಪು ಮಾಡಿಕೊಂಡು ಹಳೇಹುಬ್ಬಳ್ಳಿಯ ಮಾವನೂರ ರಸ್ತೆಯ ಫತೇಶಾವಲಿ ಹಾಲ್ ಬಳಿ ಜೂಜಾಡುತ್ತಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಜೂಜಾಟಕ್ಕೆ ಬಳಸಿದ 8,600 ನಗದು ಇತರೆ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಸಬಾ ಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.['ಧೈರ್ಯವಿದ್ದರೆ ನಾನೇ ಮುಂದಿನ ಸಿಎಂ ಎಂದು ಈಶ್ವರಪ್ಪ ಹೇಳಲಿ']
ನಿಯಮ ಉಲ್ಲಂಘನೆ: ಸಂಚಾರ ನಿಯಮ ಉಲ್ಲಂಘನೆ ಮಾಡಿದ 114 ಕೇಸ್ ದಾಖಲಿಸಿ 11,800 ದಂಡ ವಸೂಲಿ ಮಾಡಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.