ಜ.27ರಿಂದ ಹುಬ್ಬಳ್ಳಿಯಲ್ಲಿ ಟೈಕಾನ್ -2017 ಸಮಾವೇಶ
ಹುಬ್ಬಳ್ಳಿ, ಜನವರಿ. 25 : ಸ್ಥಳೀಯ ದಿ ಇಂಡಸ್ ಎಂಟ್ರಪ್ರನರ್ಸ್ (ಟೈ) ಸಹಯೋಗದಲ್ಲಿ ಉತ್ತರ ಕರ್ನಾಟಕ ಉದ್ಯಮದಾರರ ಸಮಾವೇಶ 'ಟೈಕಾನ್-2017'ನ್ನು ಜನವರಿ 27 ಮತ್ತು 28ರಂದು ನಗರದ ಡೆನಿಸನ್ಸ್ ಹೋಟೆಲ್ ನಲ್ಲಿ ಆಯೋಜಿಸಲಾಗಿದೆ ಎಂದು ಟೈಕಾನ್ ಅಧ್ಯಕ್ಷ ಸಂದೀಪ ಬಿಡೆಸಾರಿಯಾ ತಿಳಿಸಿದ್ದಾರೆ.
ಅವರು ನಗರದಲ್ಲಿ ಮಂಗಳವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾವೇಶದಲ್ಲಿ 20 ಚರ್ಚಾ ಗೋಷ್ಠಿಗಳು ಮತ್ತು ಸಂವಾದ ಜರುಗಲಿವೆ. ಸಮಾವೇಶದಲ್ಲಿ ಉದ್ಯಮದಾರರು, ಶಿಕ್ಷಣ ತಜ್ಞರು, ಹೂಡಿಕೆದಾರರು, ವೃತ್ತಿಪರರು ಪಾಲ್ಗೊಳ್ಳಲಿದ್ದು, ಸಮಾವೇಶವನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ಸಚಿವರಾದ ಆರ್.ವಿ.ದೇಶಪಾಂಡೆ, ಪ್ರಿಯಾಂಕ ಖರ್ಗೆ ಉಪಸ್ಥಿತರಿರುವರು. ಸಮಾವೇಶದ ಸಮಾರೋಪದಲ್ಲಿ ಆರ್ಟ್ ಆಪ್ ಲೀವಿಂಗ್ ನ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ ಗುರೂಜಿ ವಿಶೇಷ ಉಪನ್ಯಾಸ ನೀಡುವರು.
ಸಮಾವೇಶದಲ್ಲಿ ಉದ್ಯಮಶೀಲತೆಯ ಅಭಿವೃದ್ಧಿಗೆ ಶ್ರಮಿಸಿದ ಐದು ಜನರಿಗೆ ಜೀವಮಾನ ಸಾಧನೆ, ಯುವ ಉದ್ಯಮಿ, ಅತ್ಯುತ್ತಮ ಮಹಿಳಾ ಉದ್ಯಮಿ, ಹುಬ್ಬಳ್ಳಿ ಅಭಿವೃದ್ಧಿಗೆ ಬೆಂಬಲಿಸಿದ ಸಂಸ್ಥೆ ಹಾಗೂ ವ್ಯಕ್ತಿ ಮತ್ತು ಯಶಸ್ವಿ ಉದ್ಯಮಿಗಳಿಗೆ ಪ್ರಶಸ್ತಿ ನೀಡಲಾಗುವುದು ಎಂದರು.
ಜ.27 ರಂದು ಮಹಿಳಾ ಉದ್ಯಮಶೀಲತೆ ಕುರಿತು ಚರ್ಚೆ ಮತ್ತು ಸಂವಾದ ನಡೆಯಲಿದ್ದು, ಮಹಿಳಾ ಸಾಧಕಿಯರು ತಮ್ಮ ಯಶಸ್ಸಿಗೆ ಕಾರಣವಾದ ಅಂಶಗಳನ್ನು ಹಂಚಿಕೊಳ್ಳಲಿದ್ದಾರೆ
ಜ.28 ರಂದು ಕೈಗಾರಿಕಾ ಕ್ಷೇತ್ರದಲ್ಲಿ ಅವಿಷ್ಕಾರಗಳ ಕುರಿತು ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.