ಮಹದಾಯಿ ಹೋರಾಟಕ್ಕೆ ಎರಡು ವರ್ಷ: ತೊಟ್ಟು ನೀರಿಲ್ಲ, ಕಣ್ಣಿರೇ ಎಲ್ಲ
ಹುಬ್ಬಳ್ಳಿ, ಜುಲೈ 17 : ಮಹದಾಯಿ ನದಿ ತಿರುವು ಹಾಗೂ ಕಳಸಾ-ಬಂಡೂರಿ ನಾಲಾಗಳ ಜೋಡಣೆಗೆ ಆಗ್ರಹಿಸಿ ಗದಗ ಜಿಲ್ಲೆಯ ನರಗುಂದ ಹಾಗೂ ವಿವಿಧೆಡೆಗಳಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಜುಲೈ 16ಕ್ಕೆ ಎರಡು ವರ್ಷಗಳೇ ಉರುಳಿವೆ. ಆದರೆ, ಈವರೆಗೂ ತೊಟ್ಟು ನೀರು ಬಂದಿಲ್ಲ, ಬದಲಾಗಿ ಕಣ್ಣಿರೇ ಎಲ್ಲ ಎನ್ನುವಂತಾಗಿದೆ.
ಬಂಡಾಯದ ನೆಲ ನರಗುಂದದಲ್ಲಿ ಆಷಾಡ ಮಾಸದ ಶುಕ್ಲಪಕ್ಷದಲ್ಲಿ ಅಮವಾಸ್ಯೆಯಂದು ಮುಂದಡಿ ಇಟ್ಟ ಹೋರಾಟಕ್ಕೆ ಈವರೆಗೂ ಸ್ಪಂದನೆ ಸಿಕ್ಕಿಲ್ಲ. ಪ್ರತಿಭಟನೆ, ಉಪವಾಸ, ಬಂದ್, ಹಿಂಸಾಚಾರ ಹೀಗೆ ಹಲವು ಮಜಲುಗಳನ್ನು ಕಂಡಿರುವ ಈ ಐತಿಹಾಸಿಕ ಹೋರಾಟಕ್ಕೆ ರಾಜಕೀಯ ಪಕ್ಷಗಳ ಕೆಸರೆರೆಚಾಟವೊಂದನ್ನು ಬಿಟ್ಟು ಬೇರೆನೂ ಸಿಕ್ಕಿಲ್ಲ.
ಮಹದಾಯಿ: ರೈತ ಸೇನೆ ಅಧ್ಯಕ್ಷ ಸೊರಬದಮಠರಿಂದ ಉಪವಾಸ ಸತ್ಯಾಗ್ರಹ
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಒಬ್ಬರಿಗೊಬ್ಬರು ಬೆರೆಳು ಮಾಡಿ ತೋರಿಸುವುದನ್ನು ಬಿಟ್ಟು ರೈತರ ಬಗ್ಗೆ ಕಾಳಜಿ ಇದ್ದರೇ ಚಿಟಿಕಿ ಹೊಡೆಯುವುದರಲ್ಲಿಯೇ ಮಹದಾಯಿ ನದಿ ನೀರು ಸಮಸ್ಯೆಯನ್ನು ಪರಿಹರಿಸಬಲ್ಲವು. ಆದರೆ, ಎರಡೂ ಸರ್ಕಾರಗಳು ಕೆಸರೆರೆಚಾಟದಲ್ಲಿಯೇ ತೊಡಗಿರುವುದು ವಿಪರ್ಯಾಸ.
ಒಬ್ಬರಿಗೊಬ್ಬರು ಬೊಟ್ಟು ಮಾಡುತ್ತಿರುವ ಪಕ್ಷಗಳು
ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರಾಜಕಾರಣಿಗಳಿಗೆ ಮಹದಾಯಿ ಒಂದು ರಾಜಕೀಯ ಅಸ್ತ್ರ. ಯೋಜನೆಯ ವಿವಾದವನ್ನೆ ಇಟ್ಟುಕೊಂಡು ಹಲವರು ರಾಜಕೀಯವಾಗಿ ಬೆಳೆದಿದ್ದಾರೆ, ಇನ್ನು ಬೆಳೆಯಬೇಕು ಎನ್ನುವವರೂ ಇದ್ದಾರೆ. ಸದ್ಯಕ್ಕೆ ಬಿಜೆಪಿಯವರು ಗೋವಾ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಮನವೊಲಿಸಲಿ ಎಂದು ಕಾಂಗ್ರೆಸ್ ಆರೋಪ ಮಾಡಿದರೆ, ಆ ಎರಡು ರಾಜ್ಯಗಳ ವಿರೋಧ ಪಕ್ಷಗಳಾದ ಕಾಂಗ್ರೆಸ್ ನಾಯಕರನ್ನು ಮನವೊಲಿಸುವ ಕೆಲಸವನ್ನು ಮೊದಲು ಮಾಡಲಿ ಎಂದು ಬಿಜೆಪಿ ಕಾಂಗ್ರೆಸ್ ಕಡೆಗೆ ಬೊಟ್ಟು ಮಾಡುತ್ತಿದೆ. ಇದರ ಮಧ್ಯೆ ಮುಂಬರುವ ಚುನಾವಣೆ ವರೆಗೆ ಈ ವಿವಾದ ಜೀವಂತವಾಗಿದ್ದು, ಇದನ್ನೆ ಬಂಡವಾಳ ಮಾಡಿಕೊಳ್ಳಲು ಜೆಡಿಎಸ್ ಯತ್ನಿಸುತ್ತಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
ಚುನಾವಣೆಯಲ್ಲಿ ಲಾಭ ಪಡೆಯಲು ಹೊಂಚು
ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮಹದಾಯಿ ವಿವಾದನ್ನು ಬಳಕೆ ಮಾಡಿಕೊಳ್ಳಲು ಮೂರು ರಾಜಕೀಯ ಪಕ್ಷಗಳು ಇನ್ನಿಲ್ಲದ ತಂತ್ರಗಳನ್ನು ಹೆಣೆಯುತ್ತಿವೆ. ಈ ಮಧ್ಯೆ ಆರಂಭದಿಂದಲೂ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿರುವ ರಾಜ್ಯದ ಬಿಜೆಪಿ ನಾಯಕರು ಚುನಾವಣೆ ಹೊಸ್ತಿಲಿಲ್ಲ ಮಧ್ಯೆ ಪ್ರವೇಶಿಸುವ ಎಲ್ಲ ಸಾದ್ಯತೆಗಳು ದಟ್ಟವಾಗಿವೆ. ಎರಡು ರಾಜ್ಯಗಳ ಮುಖ್ಯಮಂತ್ರಿಗಳನ್ನು ಮನವೊಲಿಸುವ ಮೂಲಕ ರಾಜಕೀಯ ಲಾಭ ಮಾಡಿಕೊಳ್ಳಲು ಮುಂದಾಗಿದೆ ಎನ್ನಲಾಗುತ್ತಿದೆ. ಇದನ್ನೆ ಆಧಾರವಾಗಿಟ್ಟುಕೊಂಡಿರುವ ಜೆಡಿಎಸ್ ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಹರಿಹಾಯತ್ತಿದೆ.
ಬರೀ ಪತ್ರ ವ್ಯವಹಾರ
ನ್ಯಾಯಾಧೀಕರಣದ ಹೊರಗೆ ಮಾತುಕತೆ ಮೂಲಕ ವಿವಾದ ಇತ್ಯರ್ಥಕ್ಕೆ ಕರ್ನಾಟಕ ಸೇರಿದಂತೆ ನೆರೆಯ ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳ ರಾಜಕಾರಣ ಹಾಗೂ ರಾಷ್ಟ್ರೀಯ ಪಕ್ಷಗಳ ಹಿತಾಸಕ್ತಿಯ ಕರಿನೆರಳು ಬಿದ್ದಿದ್ದು, ಕೇವಲ ಪತ್ರ ವ್ಯವಹಾರ ಹಾಗೂ ನ್ಯಾಯಾಧೀಕರಣ ಹಾಗೂ ನ್ಯಾಯಾಲಯದಲ್ಲಿ ವಾದ ಮಾಡುವ ವಕೀಲರಿಗೆ ಹಣ ಸುರಿಯುವುದನ್ನು ಬಿಟ್ಟರೆ ಬೇರೆನೂ ಆಗಿಲ್ಲ.
ಕುಡಿಯುವ ನೀರಿನ ಮೇಲೂ ರಾಜಕೀಯ
ಕೃಷಿ ಚಟುವಟಿಕೆಗಳಿಗೆ ಮತ್ತು ಕುಡಿಯುವ ನೀರು ಒದಗಿಸಲು ಕಳಸಾ-ಬಂಡೂರಿ(ಮಹದಾಯಿ) ನಾಲೆ ಅನುಷ್ಠಾನಕ್ಕೆ ಇಲ್ಲಿನ ರೈತರು ಅಂಗಲಾಚಿ ಬೇಡಿಕೊಂಡರೂ ಈವರೆಗೆ ಕೇಂದ್ರವಾಗಲಿ, ರಾಜ್ಯ ಸರ್ಕಾರವಾಗಲಿ ಕಿವಿಗೊಡುತ್ತಿಲ್ಲದಿರುವುದನ್ನು ನೋಡಿದರೇ ಕುಡಿಯುವ ನೀರಿನ ಮೇಲೂ ರಾಜಕೀಯ ಪಕ್ಷಗಳು ತಮ್ಮ ರಾಜಕಾರಣ ಮಾಡುತ್ತಿವೆ ಎಂದೆನಿಸುತ್ತಿದೆ.